ಹುಲಿ- ಸಿಂಹದ ಮಧ್ಯೆ ಮೋದಿ ಸರ್ಕಾರ ರಿಂಗ್ ಮಾಸ್ಟರ್!
ನವದೆಹಲಿ, ಏ.19: ದೇಶದ ಪಠ್ಯಕ್ರಮಕ್ಕೆ ಕೇಸರಿ ಬಣ್ಣ ಮೆತ್ತಲು ಒಂದೆಡೆ ಆರೆಸ್ಸೆಸ್ ಯತ್ನಿಸುತ್ತಿದ್ದರೆ, ಇನ್ನೊಂದೆಡೆ ಮೋದಿ ಸರ್ಕಾರ ನಾಮಕರಣ ಮಹೋತ್ಸವದಲ್ಲಿ ನಿರತವಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಬೋನಿಗೆ ದೂಡಿ 'ಮೇಕ್ ಇನ್ ಇಂಡಿಯಾ' ಖ್ಯಾತಿಯ ಸಿಂಹವನ್ನು ದೇಶದ ಮುಂದಿಡಲು ಮೋದಿ ಸರ್ಕಾರ ಯತ್ನಿಸುತ್ತಿದೆಯಂತೆ.
ರಾಷ್ತ್ರೀಯ ಪ್ರಾಣಿ ಹುಲಿ ಹಾಗೂ ಕಾಡಿನ ರಾಜ ಸಿಂಹಗಳ ಕಾದಾಟಕ್ಕೆ ಮೋದಿ ಸರ್ಕಾರವೆ ರಿಂಗ್ ಮಾಸ್ಟರ್ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೋದಿ ಸರ್ಕಾರ ಏನಾದರೂ 'ಸಿಂಹ' ಕ್ಕೆ ಆದ್ಯತೆ ನೀಡಿದರೆ 1972ರಿಂದ ದೇಶದ ಹೆಮ್ಮೆಯ ಸಂಕೇತವಾಗಿರುವ 'ಹುಲಿ' ಇನ್ಮುಂದೆ ತನ್ನ ಪ್ರಭೆಯನ್ನು ಕಳೆದುಕೊಳ್ಳಬೇಕಾಗುತ್ತದೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಈ ಉದ್ದೇಶಿತ, ಚರ್ಚಿತ ಅಥವಾ ಪ್ರಸ್ತಾವಿತ ಚಿಂತನೆಗೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹುಲಿ ಸಂರಕ್ಷಣಾ ಯೋಜನೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತಿರುವ ಬೆನ್ನಲ್ಲೇ ಈ ರೀತಿ ನಿರ್ಧಾರ ಕೈಗೊಂಡರೆ ಖಂಡಿತವಾಗಿ ಮಾರಕವಾಗಿ ಪರಿಣಮಿಸಲಿದೆ. ಹುಲಿ ಅಭಯಾರಣ್ಯಗಳ ಸುತ್ತಾ ಕೈಗಾರಿಕೆಗಳು ತಲೆ ಎತ್ತುವ ಭೀತಿ ಎದುರಾಗಿದೆ.
ಸಿಂಹದ ಬಗ್ಗೆ ಒಲಿವು ಏಕೆ?:
ಸಿಂಹವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬಾರದೇಕೆ? ಎಂದು ಜಾರ್ಖಂಡ್ ನ ಸಂಸದ ಪರಿಮಳ್ ನಾಥ್ವನಿ ಆವರು ಪರಿಸರ ಸಚಿವಾಲಯಕ್ಕೆ ಇತ್ತೀಚೆಗೆ ಪ್ರಸ್ತಾವನೆ ಕಳಿಸಿದ್ದರು. ಇದು ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿ(NBWL)ಯಲ್ಲಿ ಅಂಗೀಕಾರವಾಯಿತು. ಈ ಮಂಡಳಿಯಲ್ಲಿ ಬಹುತೇಕ ಸದಸ್ಯರು ಗುಜರಾತ್ ಮೂಲದವರು ಎಂಬುದನ್ನು ಇಲ್ಲಿ ಗಮನಿಸಬೇಕಿದೆ.
ವಿರೋಧವೇನು?: ಶಾಲಾ ಮಕ್ಕಳಿಗೂ ತಿಳಿದಿರುವಂತೆ ಭಾರತದಲ್ಲಿ ವನ್ಯಜೀವಿ ಸಿಂಹಗಳು ಇರುವುದು ಗುಜರಾತಿನ ಗೀರ್ ಅರಣ್ಯಪ್ರದೇಶದಲ್ಲಿ ಮಾತ್ರ. ಹುಲಿಯಾದರೆ ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳಲ್ಲಿ 47ಕ್ಕೂ ಅಧಿಕ ಅಭಯಾರಣ್ಯಗಳಲ್ಲಿ ನೆಲೆ ಕಂಡು ಕೊಂಡಿದೆ. ಸುಮಾರು 2,200 ಹುಲಿಗಳಿರುವ ಅಂದಾಜು ಸಿಕ್ಕಿದೆ.

ಹುಲಿ ಆಯ್ಕೆಯಾಗಿದ್ದು ಹೇಗೆ?
1972ರಲ್ಲಿ ಭಾರತೀಯ ವನ್ಯಜೀವಿ ಮಂಡಳಿ ಸಭೆಯಲಿ ಹುಲಿಯನ್ನು ಸರ್ವಾನುಮತದಿಂದ ರಾಷ್ಟ್ರೀಯ ಪ್ರಾಣಿಯಾಗಿ ಆಯ್ಕೆ ಮಾಡಲಾಯಿತು.
*ದೇಶದೆಲ್ಲೆಡೆ ಹುಲಿ ವ್ಯಾಪಕವಾಗಿ ನೆಲೆಸಿರುವುದು ಹಾಗೂ ವಿಶ್ವದೆಲ್ಲೆಡೆ ಹುಲಿಗೆ ಇರುವ ಮಾನ್ಯತೆ.
* ಹುಲಿಗೆ ಭಾರರದಲ್ಲಿರುವ ಪೌರಾಣಿಕ, ಧಾರ್ಮಿಕ ಮಹತ್ವವನ್ನು ಪರಿಗಣಿಸಲಾಯಿತು.
* ಹೀಗಾಗಿ 17ರಾಜ್ಯಗಳಲ್ಲಿ ನೆಲೆಸಿರುವ ಹುಲಿ, 1 ರಾಜ್ಯದ ಸಿಂಹವನ್ನು ಸೋಲಿಸಿ ದೇಶದ ಪ್ರಾಣಿ ಎನಿಸಿತು.
ಮೋದಿಗೇಕೆ ಒಲವು:
ಗುಜರಾತಿನ ಪ್ರಮುಖ ಪ್ರಾಣಿ ಸಿಂಹವನ್ನು ಮೇಕ್ ಇನ್ ಇಂಡಿಯಾ ಅಭಿಯಾನದ ಚಿನ್ಹೆಯಲ್ಲಿ ಬಳಸಿಕೊಳ್ಳಲು ಮೋದಿ ಬಯಸಿದರು. ಮೋದಿ ಕನಸಿನ ಈ ಯೋಜನೆ ಮೂಲಕ ಸಿಂಹ ಎಲ್ಲೆಡೆ ಮತ್ತೆ ರಾರಾಜಿಸತೊಡಗಿತು.
ಗುಜರಾತಿನ ನೈಸರ್ಗಿಕ ವಿಕೋಪದ ನಡುವೆಯೂ ಸಿಂಹಗಳನ್ನು ರಕ್ಷಿಸುವಲ್ಲಿ ಗುಜರಾತ್ ಸರ್ಕಾರ ಯಶಸ್ವಿಯಾಗಿತ್ತು. ಸಿಂಹಗಳ ರಕ್ಷಣೆ ಹಾಗೂ ಗುಜರಾತ್ ಪ್ರವಾಸೋದ್ಯಮದ ಬಗ್ಗೆ ಬಿಗ್ ಬಿ ಅಮಿತಾಬ್ ಕೂಡಾ ಪ್ರಚಾರ ನಡೆಸುತ್ತಾ ಬಂದಿದ್ದಾರೆ.
ಅದರೆ, ಎಲ್ಲದರ ನಡುವೆ ಸಿಂಹದ ಮೇಲೆ ಹೆಚ್ಚಿನ ಗಮನ ಬಿದ್ದರೆ ಹುಲಿ ಯೋಜನೆಗೆ ಸರ್ಕಾರ ತೊಡಗಿಸಿರುವ ಹಣ, ಸಂರಕ್ಷಣೆಯಿಂದ ಆಗಿರುವ ಲಾಭ, ಪರಿಸರ ಕಾಯುವಿಕೆ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಕೈಗಾರಿಕೆ, ಉದ್ಯಮಿ ಹಾಗೂ ಕಾಡುಗಳ್ಳರಿಗೆ ಇದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications