9,000 ರೂಪಾಯಿಯ ಫೋನ್ ತೆಗೆದುಕೊಳ್ಳಲು ರಕ್ತ ಮಾರಲು ಹೊರಟಿದ್ದ ಬಾಲಕಿ!
ಕೋಲ್ಕತ್ತಾ, ಅ.20: ಮೊಬೈಲ್ ಫೋನ್ಗಳು, ಅದರಲ್ಲೂ ಸ್ಮಾಟ್ ಫೋನ್ಗಳಿಲ್ಲದೆ ಯುವಜನತೆ ಬದುಕುವುದು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ಇಂದು ನಿರ್ಮಾಣವಾಗತೊಡಗಿದೆ. ಶಾಲಾ ಮೆಟ್ಟಿಲು ಹತ್ತುವುದಕ್ಕೂ ಮುಂಚೆಯೇ ಕೈಯಲ್ಲಿ ಸ್ಮಾಟ್ ಫೋನ್ಗಳಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳದ ಆತಂಕಕಾರಿ ಘಟನೆಯೊಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಯುವತಿಯೊಬ್ಬರು ಸ್ಮಾರ್ಟ್ಫೋನ್ಗಾಗಿ ಹಣ ಪಾವತಿಸಲು ತನ್ನ ರಕ್ತವನ್ನು ಮಾರಾಟ ಮಾಡಲು ಸುಮಾರು 30 ಕಿಮೀ ಪ್ರಯಾಣಿಸಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದ್ದು, ಯುವಜನತೆಯಲ್ಲಿರುವ ಮೊಬೈಲ್ ಹುಚ್ಚಿನ ಬಗ್ಗೆ ಮತ್ತಷ್ಟು ಆತಂಕ ಉಂಟು ಮಾಡಿದೆ.
ಸಿರಿಧಾನ್ಯ ಮೂಲಕ ಕ್ಯಾನ್ಸರ್ಗೆ ಔಷಧಿಕೊಡುವ ಮೈಸೂರಿನ ಡಾ.ಖಾದರ್
ರಕ್ತ ಏಕೆ ಮಾರುತ್ತಿದ್ದಿಯಾ ಎಂಬ ಪ್ರಶ್ನೆಗಳಿಗೆ ತನ್ನ ಪೋಷಕರು ಸಾವನ್ನಪ್ಪಿದ್ದಾರೆ ಎಂದು ಏನೇನೋ ಕಾರಣಗಳನ್ನು ನೀಡಿದ್ದಾರೆ. ಆದರೆ ಗಟ್ಟಿಯಾಗಿ ಪ್ರಶ್ನೆ ಮಾಡಿದ ಬಳಿಕ ಆಕೆ ಈಗಾಗಲೇ 9,000 ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ ಅನ್ನು ಆರ್ಡರ್ ಮಾಡಿರುವುದಾಗಿಯೂ ಅದಕ್ಕೆ ಪಾವತಿಸಲು ಹಣದ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ರಕ್ತ ನೀಡುತ್ತೇನೆ ಹಣ ನೀಡಿ ಎಂದ ಅಪ್ರಾಪ್ತೆ!
ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ ಜಿಲ್ಲೆಯ ಅಪ್ರಾಪ್ತ ಬಾಲಕಿ ಬಸ್ನಲ್ಲಿ ಸುಮಾರು 30 ಕಿಮೀ ಪ್ರಯಾಣಿಸಿ ನೇರವಾಗಿ ಬಲೂರ್ಘಾಟ್ ಜಿಲ್ಲಾ ಆಸ್ಪತ್ರೆಗೆ ಹೋಗಿ ತನ್ನ ರಕ್ತವನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ರಕ್ತ ಮಾರಿ ಮೊಬೈಲ್ ಫೋನ್ ತೆಗೆದುಕೊಳ್ಳುವ ಯತ್ನದಲ್ಲಿದ್ದರು. ಆದರೆ, ಆ ರೀತಿ ರಕ್ತ ತೆಗೆದುಕೊಳ್ಳುವುದಿಲ್ಲ ಎಂದು ಎಂದು ಆಸ್ಪತ್ರೆಯ ಅಧಿಕಾರಿಗಳು ಆಕೆಗೆ ವಿವರಿಸಿದ್ದಾರೆ.
ವಿಷಯವು ಆಸ್ಪತ್ರೆಯ ರಕ್ತನಿಧಿಯ ಸಿಬ್ಬಂದಿಯ ಗಮನಕ್ಕೆ ಬಂದ ತಕ್ಷಣ, ಅಧಿಕಾರಿಗಳು 12 ನೇ ತರಗತಿ ವಿದ್ಯಾರ್ಥಿನಿಯನ್ನು ಕರೆದು ಮಾತನಾಡಿಸಿದ್ದಾರೆ. ಬಳಿಕ ಮಕ್ಕಳ ಸುರಕ್ಷತೆಗಾಗಿ ಕೆಲಸ ಮಾಡುವ ಎನ್ಜಿಒ ಚೈಲ್ಡ್ಲೈನ್ ಇಂಡಿಯಾಗೆ ಕರೆ ಮಾಡಿದ್ದಾರೆ. ಕೌನ್ಸೆಲಿಂಗ್ ನಂತರ ಆಕೆಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.
ಬಾಲಕಿ ಮಾತು ಕೇಳಿ ಆಘಾತಕ್ಕೆ ಒಳಗಾದ ಆಸ್ಪತ್ರೆ ಸಿಬ್ಬಂದಿ
ದಕ್ಷಿಣ ದಿನಾಜ್ಪುರದ ತಪನ್ ಪ್ರದೇಶದ 17 ವರ್ಷದ ಬಾಲಕಿ ತಾನು ಇತ್ತೀಚೆಗೆ ಆನ್ಲೈನ್ನಲ್ಲಿ ಸ್ಮಾರ್ಟ್ಫೋನ್ಗೆ ಆರ್ಡರ್ ಮಾಡಿದ್ದೇನೆ. ಹಣ ಬೇಕಾಗಿದ್ದು, ಆಸ್ಪತ್ರೆಗೆ ರಕ್ತದಾನ ಮಾಡುವ ಮೂಲಕ ಹಣ ಪಡೆದು, ಮೊಬೈಲ್ ಕೊಳ್ಳಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರಕ್ತದಾನ ಮಾಡುತ್ತೇನೆ ಹಣ ನೀಡಿ ಎಂದು ರಕ್ತನಿಧಿಯ ಸಿಬ್ಬಂದಿಗೆ ತಿಳಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಎನ್ಜಿಒಗೆ ಮಾಹಿತಿ ನೀಡಿದ್ದಾರೆ. ಅಪ್ರಾಪ್ತೆಯ ಮಾತು ಕೇಳಿ ರಕ್ತನಿಧಿಯ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಆಕೆಯ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಅಪ್ರಾಪ್ತೆಯನ್ನು ಎನ್ಜಿಒ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ಕೂರಿಸಿಕೊಂಡಿದ್ದಾರೆ.
ತಂದೆ-ತಾಯಿ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿದ ಬಾಲಕಿ!
"ಅಪ್ರಾಪ್ತ ಬಾಲಕಿಯೊಬ್ಬಳು ಆಸ್ಪತ್ರೆಗೆ ಬಂದಿದ್ದರು. ಮೊದಲು ರಕ್ತ ಪರೀಕ್ಷೆ ಮಾಡಬೇಕೆಂದು ಕೇಳಿದರು. ರಕ್ತ ಪರೀಕ್ಷೆ ಏಕೆ ಬೇಕು ಎಂದು ಕೇಳಿದಾಗ ಆಕೆ ಅಸಮಂಜಸವಾಗಿ ಏನೇನೋ ಕಾರಣಗಳನ್ನು ನೀಡಲು ಶುರು ಮಾಡಿದರು. ತಕ್ಷಣ ನಾವು ಚೈಲ್ಡ್ಲೈನ್ಗೆ ಮಾಹಿತಿ ನೀಡಿದೇವು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿಯಲ್ಲಿ ಕೂರಿಸಿಕೊಂಡು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ, ಆಕೆ ತನಗೆ ವಿದ್ಯಾಭ್ಯಾಸದ ತೊಂದರೆಯಿದೆ. ತನ್ನ ತಂದೆ-ತಾಯಿ ಸತ್ತಿದ್ದಾರೆ. ಆಕೆಯ ಪೋಷಕರು ಬದುಕಿದ್ದು ಅವರ ಜೊತೆಗ ಸಮಸ್ಯೆಗಳಿವೆ ಎಂಬ ಹಲವಾರು ಕಾರಣಗಳನ್ನು ನೀಡಿದ್ದಾರೆ. ಮತ್ತೆ ಮತ್ತೆ ವಿಚಾರಣೆ ನಡೆಸಿದ ಬಳಿಕ ಆಕೆ, ಆನ್ಲೈನ್ನಲ್ಲಿ ಮೊಬೈಲ್ ಫೋನ್ ಬುಕ್ ಮಾಡಿರುವುದಾಗಿ ತಿಳಿಸಿ, ತನಗೆ ಹಣದ ಅಗತ್ಯವಿದೆ ಎಂಬುದನ್ನು ಹೇಳಿದ್ದಾರೆ.
ರಕ್ತ ಮಾರಲು ಬಂದ ವಿಷಯ ತಿಳಿದಿಲ್ಲ ಎಂದ ಬಾಲಕಿ ತಂದೆ
ಮಾಹಿತಿ ಪಡೆದ ಚೈಲ್ಡ್ ಲೈನ್ ಸಿಬ್ಬಂದಿ ಅಪ್ರಾಪ್ತ ಬಾಲಕಿಯ ಜವಾಬ್ದಾರಿ ತೆಗೆದುಕೊಂಡು ತರಕಾರಿ ವ್ಯಾಪಾರ ಮಾಡುವ ಆಕೆಯ ತಂದೆಗೆ ವಿಷಯ ತಿಳಿಸಿದ್ದಾರೆ.
ಬಾಲಕಿ ಬಳಿ ಸಾಮಾನ್ಯ ಫೋನ್ ಇದ್ದು, ಕೆಲ ದಿನಗಳ ಹಿಂದೆ ಅದು ಹಾಳಾಗಿತ್ತು. ಹೀಗಾಗಿ ಭಾನುವಾರ ಸ್ನೇಹಿತೆಯೊಬ್ಬರ ಮೊಬೈಲ್ನಿಂದ ಆನ್ಲೈನ್ನಲ್ಲಿ 9,000 ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ ಆರ್ಡರ್ ಮಾಡಿದ್ದರು.
"ಏನಾಯಿತು ಎಂದು ನನಗೆ ತಿಳಿದಿಲ್ಲ. ನಾನು ಇಲ್ಲಿಗೆ ಬಂದಾಗ ಆಕೆ ತನ್ನ ರಕ್ತವನ್ನು ಮಾರಾಟ ಮಾಡಿ, ಮೊಬೈಲ್ ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ನನಗೆ ತಿಳಿಯಿತು" ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿ ಖಿನ್ನತೆಯಿಂದ ಬಳಲುತ್ತಿದ್ದು, ಆಕೆಗೆ ಹೆಚ್ಚಿನ ಸಲಹೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಚೈಲ್ಡ್ಲೈನ್ ಎನ್ಜಿಒ ತಿಳಿಸಿದೆ.