Rain News: ಭಾರಿ ಮಳೆಗೆ ತುಂಬುತ್ತಿದೆ ಕಾವೇರಿ ನದಿಗೆ ಕಟ್ಟಿದ ಡ್ಯಾಂ
ಮಳೆರಾಯ ಈ ಬಾರಿ ಅನ್ನದಾತನ ಮೇಲೆ ಮುನಿಸಿಕೊಂಡಿದ್ದು, ಮುಂಗಾರು ಮಳೆಯನ್ನೇ ಕಾಣದೆ ಕರ್ನಾಟಕದ ರೈತರು ಬೆಚ್ಚಿಬಿದ್ದಿದ್ದಾರೆ. ಮತ್ತೊಂದು ಕಡೆ ಕುಡಿಯುವ ನೀರಿಗಾಗಿ, ಹನಿ ಹನಿ ಜಲಕ್ಕೂ ಕನ್ನಡಿಗರು ಪರದಾಡುತ್ತಿದ್ದಾರೆ. ಇದು ಕರ್ನಾಟಕದ ವ್ಯಥೆ ಮಾತ್ರವೇ ಆಗಿರಲಿಲ್ಲ ಇಡೀ ದಕ್ಷಿಣ ಭಾರತದಲ್ಲಿ ಭಾಗಶಃ ಇದೇ ಪರಿಸ್ಥಿತಿ ಈ ವರ್ಷ ನಿರ್ಮಾಣವಾಗಿ ಆತಂಕ ಎದುರಾಗಿತ್ತು. ಆದ್ರೆ ಮುಂಗಾರು ಮಳೆ ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದು ನೆಮ್ಮದಿ ತರಿಸುತ್ತಿದೆ.
ಕರ್ನಾಟಕವೂ ಸೇರಿದಂತೆ ನೆರೆ ರಾಜ್ಯ ತಮಿಳುನಾಡು ಮತ್ತು ಭಾಗಶಃ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮೂಲಕ ಹಿಂಗಾರು ಮಳೆ ದಕ್ಷಿಣ ಭಾರತದ ಕೈಹಿಡಿದಿದೆ. ಅದ್ರಲ್ಲು ಕಾವೇರಿ ಕೊಳ್ಳದಲ್ಲಿ ಮತ್ತೆ ಮಂದಹಾಸ ಮೂಡಿದ್ದು, ಪದೇ ಪದೆ ಕಾವೇರಿ ನದಿ ನೀರಿಗಾಗಿ ಕಿರಿಕ್ ತೆಗೆಯುತ್ತಿದ್ದ ತಮಿಳುನಾಡು ಈಗ ಸೈಲೆಂಟ್ ಆಗುವ ಸ್ಥಿತಿ ಎದುರಾಗಿದೆ. ಹಂಗಾದರೆ ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕೇಬಿಡ್ತಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಕಾವೇರಿ ನೀರಿನ ಕಿರಿಕ್ ಸ್ಟಾಪ್?
ಅಂದಹಾಗೆ ಕಳೆದ 4-5 ವರ್ಷದಿಂದ ಕಾವೇರಿ ನೀರಿಗಾಗಿ ಕಿರಿಕ್ ಇರಲಿಲ್ಲ ಆದ್ರೆ ಈ ವರ್ಷ ಮತ್ತೆ ಕಿರಿಕಿರಿ ಶುರುವಾಗಿದೆ. ಇದೇ ಕಾರಣಕ್ಕೆ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದವು. ಹಾಗೇ ಮತ್ತೊಂದು ಕಡೆ ಕನ್ನಡಿಗರು ಕಾವೇರಿ ನೀರಿಗಾಗಿ ಭುಗಿಲೆದ್ದ ಹೋರಾಟದ ಬಿಸಿ ಅನುಭವಿಸಿದ್ದರು. ಆದರೆ ಈಗ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಶೀಘ್ರದಲ್ಲೇ ತಮಿಳುನಾಡಿನ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಮೂಡಿದೆ. ಹಾಗಾದ್ರೆ ಯಾವುದು ಆ ಡ್ಯಾಂ? ನೀರಿನ ಸಮಸ್ಯೆಗೆ ಹೇಗೆ ಮುಕ್ತಿ ಸಿಗುತ್ತದೆ?
ಮೆಟ್ಟೂರು ಜಲಾಶಯಕ್ಕೆ ಭಾರಿ ನೀರು!
ಹೌದು, ಕರ್ನಾಟಕ ಹಾಗೂ ತಮಿಳುನಾಡು ಭಾಗದಲ್ಲಿ ಹಿಂಗಾರು ಮಳೆಯ ಅಬ್ಬರ ಶುರು ಆದ ಹಿನ್ನೆಲೆ ಮೆಟ್ಟೂರು ಡ್ಯಾಂಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹೀಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನ ಈಗಿನ ಮಾಹಿತಿಯಂತೆ 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂನಲ್ಲಿ 58.15 ಅಡಿ ನೀರು ಸಂಗ್ರಹವಾಗಿದೆ. ಹಾಗೇ 8,424 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಇದೀಗ 252 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇನ್ನು ಇದೇ ರೀತಿ ಸ್ವಲ್ಪ ದಿನಗಳ ಕಾಲ ಮಳೆ ಸುರಿದರೆ, ಮೆಟ್ಟೂರು ಡ್ಯಾಂ ಪೂರ್ಣ ತುಂಬುವ ನಿರೀಕ್ಷೆ ಇದೆ.

ನಮ್ಮಲ್ಲೂ ಮಳೆ ಅಬ್ಬರ ಪಕ್ಕಾ
ಕರ್ನಾಟಕದಲ್ಲಿ ತುಸು ವಿರಾಮ ನೀಡಿರುವ ಹಿಂಗಾರು ಮತ್ತೆ ಆರ್ಭಟಿಸುವ ಮುನ್ಸೂಚನೆ ಇದೆ. ಅಷ್ಟಕ್ಕೂ ದೀಪಾವಳಿ ಹಬ್ಬಕ್ಕೆ ಬಿಡುವು ನೀಡಿದ್ದ ವರುಣ ನವೆಂಬರ್ 15ರಿಂದ ಮತ್ತೆ ಕರಾವಳಿ ಹಾಗೂ ಒಳನಾಡಿನಲ್ಲಿ ಸಕ್ರಿಯವಾಗಿ ಅಬ್ಬರಿಸುವುದು ಪಕ್ಕಾ ಆಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈ ಮೂಲಕ ಕರ್ನಾಟಕದಲ್ಲಿ ಕೆಲ ದಿನದಿಂದ ದುರ್ಬಲವಾದ ಹಿಂಗಾರು ಮಳೆ ನವೆಂಬರ್ 17ರಿಂದ ಮತ್ತೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಮತ್ತೊಂದು ಕಡೆ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದೆ. ಹೀಗಾಗಿಯೇ ಮತ್ತಷ್ಟು ದಿನಗಳ ಕಾಲ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ.
ಅಂತೂ, ಇಂತೂ ವರುಣದೇವ ದಕ್ಷಿಣ ಭಾರತದ ಮೇಲೆ ಕರುಣೆ ತೋರಿಸಿದ್ದಾನೆ. ಇಷ್ಟು ದಿನಗಳ ಕಾಲ ಉತ್ತರ ಭಾರತದಲ್ಲಿ ಭಾರಿ ಮಳೆಯ ಪರಿಣಾಮ ಹಲವು ಸಮಸ್ಯೆ ಎದುರಾಗಿ ಜನರು ನಲುಗಿ ಹೋಗಿದ್ದರು. ಆದರೆ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಕೊರತೆ ಉಂಟಾಗಿ ಜನರು ಆತಂಕಕ್ಕೆ ಒಳಗಾಗಿದ್ದರು. ಈಗ ದಕ್ಷಿಣ ಭಾರತದ ಬರಕ್ಕೆ, ಅಂತ್ಯ ಬೀಳುವ ಲಕ್ಷಣ ಇದ್ದು ಈ ಸಮಯದಲ್ಲೇ ಕಾವೇರಿ ನದಿಯಲ್ಲೂ ಭಾರಿ ಪ್ರಮಾಣದ ನೀರು ಹರಿಯುತ್ತಿದೆ.












Click it and Unblock the Notifications