ಪತ್ರಕರ್ತ ಬುಖಾರಿ ಹತ್ಯೆ ಸಂಚುಕೋರ ಓದಿದ್ದು ಬೆಂಗಳೂರಿನಲ್ಲಿ!
ನವದೆಹಲಿ, ಜೂನ್ 28: ಜಮ್ಮು ಮತ್ತು ಕಾಶ್ಮೀರದ ಪತ್ರಕರ್ತ ಶೂಜತ್ ಬುಖಾರಿ ಹತ್ಯೆಗೆ ಸಂಚು ರೂಪಿಸಿದ್ದ ಮಾಸ್ಟರ್ ಮೈಂಡ್ ಬೆಂಗಳೂರಿನಲ್ಲಿ ಓದಿದ್ದ ಎಂಬ ವಿಚಾರ ಬಹಿರಂಗವಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಈತ ಎಂಬಿಎ ಪದವಿ ಪಡೆದಿದ್ದ ಎಂದು ಗೊತ್ತಾಗಿದೆ.
ಬುಖಾರಿ ಸಂಪಾದಕರಾಗಿದ್ದ ರೈಸಿಂಗ್ ಕಾಶ್ಮೀರ್ ಪತ್ರಿಕೆ ಪಾಕಿಸ್ತಾನದ ಪೋಷಣೆಯಲ್ಲಿರುವ ಉಗ್ರ ಸಂಘಟನೆಗಳ ವಿರುದ್ಧ ನೆಲೆಯಲ್ಲಿ ನಿಂತಿತ್ತು. ಈ ಕಾರಣಕ್ಕೆ ಅವರನ್ನು ಕೊಲೆ ಮಾಡಲು ಸಜ್ಜದ್ ಗುಲ್ ಖೆಡ್ಡಾ ತೋಡಿದ್ದ.
ಗುಲ್ ಬೆಂಗಳೂರಿನಲ್ಲಿ ಎಂಬಿಎ ಓದಿಕೊಂಡ ಉನ್ನತ ವ್ಯಾಸಾಂಗ ಮಾಡಿದ ಯುವಕನಾಗಿದ್ದು ಈತ ಲಷ್ಕರ್ ಇ ತಯ್ಯಬಾ (ಎಲ್ಇಟಿ) ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡುವಲ್ಲಿ ನಿರತನಾಗಿದ್ದ. ಈತನೇ ಹತ್ಯೆಯ ರೂವಾರಿ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ಈತ ಮತ್ತು ಮುಖ್ಯಸ್ಥ ಹಫೀಜ್ ಸಯೀದ್ ಕಾಶ್ಮೀರದ ಸ್ಥಳೀಯ ಉಗ್ರರಿಗೆ ಬುಖಾರಿ ಕತೆ ಮುಗಿಸುವಂತೆ ಆದೇಶ ನೀಡಿದ್ದರು ಎಂಬುದು ಗೊತ್ತಾಗಿದೆ.
ಬೆಂಗಳೂರಿನಿಂದ ರಾವಲ್ಪಿಂಡಿ
ಬೆಂಗಳೂರಿನ ಕಾಲೇಜಿನಿಂದ ಎಂಬಿಎ ಪದವೀಧರನಾಗಿ ಗುಲ್ ಹೊರ ಬಿದ್ದಿದ್ದ. ನಂತರ ಈತ ಒಂದಷ್ಟು ದಿನ ಪ್ರಯೋಗಾಲಯದಲ್ಲಿ ತಂತ್ರಜ್ಞನಾಗಿ ತರಬೇತಿ ಪಡೆದಿದ್ದ. ನಂತರ ಆರ ಸೇರಿದ್ದು ಉಗ್ರ ಸಂಘಟನೆಗೆ.
ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಗುಲ್ ನೆಲೆಸಿದ್ದಾನೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದಾನೆ ಎಂದಿದ್ದಾರೆ.
ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ
ಈತ ಹಿಂದೊಮ್ಮೆ ಕಾಶ್ಮೀರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಒಂದಷ್ಟು ದಿನಗಳ ಕಾಲ ಶ್ರೀನಗರ ಸೆಂಟ್ರಲ್ ಜೈಲಿನಲ್ಲಿದ್ದ ಆತ ಬಳಿಕ ದೆಹಲಿಯ ತಿಹಾರ್ ಜೈಲಿಗೆ ರವಾನಿಸಲಾಗಿತ್ತು. ಅಲ್ಲಿಂದ ಆತ ಪಾಕಿಸ್ತಾನಕ್ಕೆ ತಪ್ಪಿಸಿಕೊಂಡಿದ್ದ.












Click it and Unblock the Notifications