Manish Kashyap News: ನಕಲಿ ವಿಡಿಯೋ ಹಾವಳಿ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ದಕ್ಷಿಣ ಭಾರತದ ರಾಜ್ಯದಲ್ಲಿ ಬಿಹಾರದ ವಲಸಿಗರ ಮೇಲೆ ದಾಳಿ ನಡೆಯುತ್ತಿದೆ ಎಂದು ಹರಡುತ್ತಿದ್ದ ಸುಳ್ಳು ಸುದ್ದಿ ಕುರಿತು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಖಾಸಗಿ ನ್ಯೂಸ್ ವೆಬ್ಸೈಟ್ ಒಂದರ ಸಂಪಾದಕ ಮತ್ತು ಮಾಲೀಕರ ಮೇಲೆ ಬಲವಂತದಿಂದ ವಿಚಾರಣೆ ನಡೆಸಬಾರದು ಎನ್ನುವ ತೀರ್ಪನ್ನ ಸರ್ವೋಚ್ಚ ನ್ಯಾಯಾಲಯ ಹೊರಡಿಸಿದೆ.
ಮತ್ತೊಂದ್ಕಡೆ ಅರ್ಜಿದಾರರು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದಡಿ ತಮಿಳುನಾಡಿನಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಮಾಡಿದ ಮನವಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅಲ್ಲದೆ ಈ ವಿಚಾರವಾಗಿ ಆರೋಪ ಎದುರಿಸುತ್ತಿರುವ ಖಾಸಗಿ ನ್ಯೂಸ್ ವೆಬ್ಸೈಟ್ನ ಸಂಪಾದಕ ಮತ್ತು ಮಾಲೀಕರು ಮದ್ರಾಸ್ ಹೈಕೋರ್ಟ್ಗೆ ತೆರಳುವಂತೆ ಸೂಚಿಸಲಾಗಿದೆ. ಅರ್ಜಿದಾರರ ಪರವಾಗಿ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು.

ಸುಪ್ರೀಂ ತೀರ್ಪಿನಲ್ಲಿ ಏನಿದೆ?
ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನ್ವಯ, 4 ವಾರಗಳ ತನಕ ಬಲವಂತದಿಂದ ಸಂಪಾದಕರ ಮೇಲೆ ಪೊಲೀಸರು ವಿಚಾರಣೆ ನಡೆಸಬಾರದು ಎಂದು ಸೂಚಿಸಲಾಗಿದೆ. ಹಾಗೇ ಎಫ್ಐಆರ್ ರದ್ದುಗೊಳಿಸುವ ಮನವಿ ತಿರಸ್ಕರಿಸಿ, ಚೆನ್ನೈ ಹೈಕೋರ್ಟ್ಗೆ ಅರ್ಜಿದಾರರು ಹಾಜರಾಗಲು ತಿಳಿಸಿದೆ. ಇನ್ನು ವಿಚಾರಣೆ ವೇಳೆ ಈ ವಿಚಾರ ಪ್ರಸ್ತಾಪಿಸಿದ ನ್ಯಾಯಪೀಠ, ನಾವು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಎಫ್ಐಆರ್ ಹೇಗೆ ರದ್ದುಗೊಳಿಸಬಹುದು? ದಯವಿಟ್ಟು ನೀವು ಮದ್ರಾಸ್ ಹೈಕೋರ್ಟ್ಗೆ ಹೋಗಿ ಎಂದು ಸೂಚಿಸಿದೆ ನ್ಯಾಯಪೀಠ.
ಏನಿದು ವಿಡಿಯೋ ಹಾವಳಿ?
ಕೆಲ ತಿಂಗಳ ಹಿಂದೆ ತಮಿಳುನಾಡಿನಲ್ಲಿ ಹಿಂದಿ ಮಾತನಾಡುವ ಕಾರಣಕ್ಕೆ ವಲಸಿಗರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ನಕಲಿ ಹೇಳಿಕೆಯ ಫೇಕ್ ವೀಡಿಯೊಗಳು ವೈರಲ್ ಆಗಿದ್ದವು. ನಂತರ ಇದೇ ನಕಲಿ ವಿಡಿಯೋಗಳ ಆಧಾರದಲ್ಲಿ ಸುದ್ದಿ ಕೂಡ ಪ್ರಸಾರ ಮಾಡಲಾಗಿತ್ತು. ಸ್ಥಳೀಯವಾಗಿ ಈ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗುವ ಜೊತೆಗೆ ರಾಷ್ಟ್ರ ಮಟ್ಟದಲ್ಲೂ ಚರ್ಚೆಗೆ ಬಂದಿತ್ತು. ಅದರಲ್ಲೂ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಈ ಸುಳ್ಳು ಸುದ್ದಿ ವೈರಲ್ ಆಗಿ, ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು.
ಸ್ಪಷ್ಟನೆ ನೀಡಿದರೂ ಅಪಪ್ರಚಾರ
ಇನ್ನು ಈ ವಿಡಿಯೋ ನಕಲಿ ಎಂಬ ಬಗ್ಗೆ ಅದೆಷ್ಟೇ ಸ್ಪಷ್ಟನೆ ನೀಡಿದರೂ ವಲಸಿಗರ ಮೇಲೆ ದಾಳಿ ನಡೆಯುತ್ತಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗುತ್ತಲೇ ಇತ್ತು. ಹೀಗಾಗಿ ತಮಿಳುನಾಡು ಪೊಲೀಸರು ಹಾಗೂ ಆಡಳಿತಾರೂಢ ಡಿಎಂಕೆ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಮತ್ತೊಂದು ಕಡೆ ಇಂತಹ ನಕಲಿ ವಿಡಿಯೋ ನೋಡಿ ವಲಸಿಗರು ತಮ್ಮ ತಮ್ಮ ಊರಿಗೆ ಮರಳಿದ ಘಟನೆಗಳೂ ನಡೆದವು. ಇಷ್ಟಾದರೂ ನಕಲಿ ವಿಡಿಯೋ ಉಪಟಳ ಕಡಿಮೆ ಆಗಲಿಲ್ಲ. ತಮಿಳುನಾಡಿನಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಈ ನಕಲಿ ವಿಡಿಯೋಗಳು ವೇದಿಕೆ ಒದಗಿಸಿದ್ದವು.
ನಕಲಿ ವಿಡಿಯೋಗ ಹಾವಳಿ!
ಬಿಹಾರ ಸರ್ಕಾರ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿ ಸತ್ಯವನ್ನ ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಸಿತ್ತು. ಇದು ಕೂಡ ಕೆಲಸಕ್ಕೆ ಬರಲಿಲ್ಲ, ಮತ್ತೊಂದು ಕಡೆ ನಕಲಿ ವಿಡಿಯೋಗಳು ಶರವೇಗದಲ್ಲಿ ಎಲ್ಲೆಡೆ ಹರಡುತ್ತಾ ಆತಂಕ ಸೃಷ್ಟಿ ಮಾಡಿದ್ದವು. ಹೀಗಾಗಿ ತಮಿಳುನಾಡು ಪೊಲೀಸರು ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪೈಕಿ ಖಾಸಗಿ ನ್ಯೂಸ್ ವೆಬ್ಸೈಟ್ನ ಸಂಪಾದಕ ಮತ್ತು ಮಾಲೀಕ ಕೂಡ ಸೇರಿದ್ದರು.
ಒಟ್ಟಾರೆ ಆಧುನಿಕ ಕಾಲದಲ್ಲಿ ಸುಳ್ಳು ಸುದ್ದಿ ಹರಡುವ ವಿಡಿಯೋಗಳೇ ಸವಾಲಾಗಿ ಪರಿಣಮಿಸಿವೆ. ಫ್ಯಾಕ್ಟ್ ಚೆಕ್ ಬಗ್ಗೆ ಸುದ್ದಿ ಬಂದರೂ ನಕಲಿ ವಿಡಿಯೋಗಳ ಹಾವಳಿ ಕಡಿಮೆ ಆಗುತ್ತಿಲ್ಲ ಎಂಬುದೇ ದುರದೃಷ್ಟಕರ ಸಂಗತಿ. ಈಗಲಾದರೂ ಇಂತಹ ವಿಡಿಯೋಗಳಿಗೆ ಕಡಿವಾಣ ಬೀಳುತ್ತಾ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications