Manipur: ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಕೇಸ್: ದೂರು ನಿರ್ಲಕ್ಷಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗ!
ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಜುಲೈ 12 ರಂದು ಸಲ್ಲಿಸಿದ ದೂರಿನ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯೂ) ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ. ಬದಲಿಗೆ ಮಹಿಳಾ ಆಯೋಗ ದೂರನ್ನು ನಿರ್ಲಕ್ಷಿಸಿದೆ ಎಂದು ಹೇಳಲಾಗುತ್ತಿದೆ.
ಮನುಕುಲವೇ ತಲೆತಗ್ಗಿಸುವಂತಹ ವಿಡಿಯೋ ಆನ್ಲೈನ್ನಲ್ಲಿ ಕಾಣಿಸಿಕೊಳ್ಳುವ ಒಂದು ವಾರದ ಮೊದಲು ದೂರು ದಾಖಲಿಸಲಾಗಿದೆ. ಆದರೆ ಮಹಿಳಾ ಸಮಿತಿಯು ಒಂದು ವಾರದವರೆಗೆ ದೂರನ್ನು ನಿರ್ಲಕ್ಷಿಸಿತ್ತು ಎಂದು ತಿಳಿದು ಬಂದಿದೆ.

ಮೇ 4 ರಂದು ನಡೆದ ಘಟನೆಯ ವಿಡಿಯೋ ಜುಲೈ 19 ರಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರ ಮೇಲೆ ನಡೆದ ಅಮಾನವೀಯ ಘಟನೆಯನ್ನು ದೇಶದೆಲ್ಲೆಡೆ ಖಂಡಿಸಲಾಗುತ್ತಿದೆ.
ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಪುರುಷರ ಗುಂಪಿನಿಂದ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ. ಅವರನ್ನು ಭತ್ತದ ಗದ್ದೆಯ ಕಡೆಗೆ ವಿವಸ್ತ್ರಗೊಳಿಸಿ ಬಲವಂತವಾಗಿ ಮೆರವಣಿಗೆ ಮಾಡಲಾಯಿತು. ಅಲ್ಲಿ ಅವರಲ್ಲಿ ಒಬ್ಬನನ್ನು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಲಾಯಿತು. 70 ದಿನ ಕಳೆದರೂ ಪ್ರಕರಣದಲ್ಲಿ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶದ ನಂತರ ನಾಲ್ವರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಹೆರಾದಾಸ್ ನನ್ನು ತೌಬಲ್ ಜಿಲ್ಲೆಯಲ್ಲಿ ವೈರಲ್ ವಿಡಿಯೋ ಸಹಾಯದಿಂದ ಬಂಧಿಸಲಾಗಿದೆ. ಹಸಿರು ಟೀ ಶರ್ಟ್ ಧರಿಸಿದ್ದ ಪ್ರಮುಖ ಆರೋಪಿಯನ್ನು ಸದ್ಯ ವಿಡಿಯೋದ ಸಹಾಯದಿಂದ ಬಂಧಿಸಲಾಗಿದೆ. ಘಟನೆಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.
ಎನ್ಸಿಡಬ್ಲ್ಯೂಗೆ ವಿಡಿಯೋ ವೈರಲ್ಗೂ ಮುನ್ನ ದೂರು ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ದೂರಿನಲ್ಲಿ "ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ನಿಮ್ಮ ಗಂಭೀರ ಮತ್ತು ತಕ್ಷಣದ ಗಮನವನ್ನು ಸೆಳೆಯಲು ನಾವು ಬಯಸುತ್ತೇವೆ. ನಿರ್ದಿಷ್ಟವಾಗಿ ಮಣಿಪುರ ಸಂಘರ್ಷದಲ್ಲಿ ಮೈಟಿ ವಿಜಿಲೆಂಟ್ಸ್ ಕುಕಿ-ಜೋಮಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಪರಿಹರಿಸಲು ಮತ್ತು ಖಂಡಿಸಲು ನಾವು NCW ಗೆ ತುರ್ತು ಮನವಿ ಮಾಡುತ್ತೇವೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರನ್ನು ನಿರ್ಲಕ್ಷಿಸಿದ ಕಾರಣಕ್ಕೆ ಆಮ್ ಆದ್ಮಿ ಪಕ್ಷವು ಎನ್ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ಕೋರಿದೆ. ವೀಡಿಯೊ ವೈರಲ್ ಆಗುವ ಕೆಲವು ದಿನಗಳ ಮೊದಲು ಅವರು ಸಲ್ಲಿಸಿದ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ. ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದ್ದು 150 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ದಿನ ಸುಮಾರು 800 ರಿಂದ 1,000 ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮವೊಂದಕ್ಕೆ ನುಗ್ಗಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಮನೆಗಳನ್ನು ಸುಟ್ಟು ಹಾಕಿದ್ದರು. ಈ ವೇಳೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಅರಣ್ಯಕ್ಕೆ ಓಡಿಹೋದರು. ನಂತರ ಅವರನ್ನು ನಾಂಗ್ಪೋಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿತ್ತು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ದಾಳಿಕೋರರ ಗುಂಪು ಅಪಹರಿಸಿತ್ತು. ದುಷ್ಕರ್ಮಿಗಳು ಮೇಟಿ (Meitei) ಸಂಘಟನೆಗಳ ಸದಸ್ಯರು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications