ಮಗು ಸೇರಿ ಮೂವರನ್ನು ಮನೆಯೊಳಗೆ ಕೂಡಿ ಹಾಕಿ ನೆರೆ ಮನೆಗೆ ಬೆಂಕಿ ಹಚ್ಚಿದ್ದ ವ್ಯಕ್ತಿ ಬಂಧನ
ಬೆಂಕಿ ಕಾಣಿಸಿಕೊಂಡ ಕಾರಣ ಮನೆಯಲ್ಲಿದ್ದವರು ತಪ್ಪಿಸಿಕೊಂಡ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ, ಮಾರ್ಚ್ 05: ಐದು ವರ್ಷದ ಮಗು ಸೇರಿದಂತೆ ಮೂವರ ಕುಟುಂಬವನ್ನು ಮನೆಯೊಳಗೆ ಬೀಗ ಹಾಕಿ ಕೂಡಿಹಾಕಿ ನೆರೆ ಮನೆಯವರೇ ಮನೆಗೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ಕೇರಳದ ಕಟ್ಟಕಡದಲ್ಲಿ ನಡೆದಿದೆ. ನೆರೆಮನೆಯ ಮಾಜಿ ಸೈನಿಕ ಅಜಯಕುಮಾರ್ ಎಂಬುವವರು ಮನೆಗೆ ಬೆಂಕಿ ಹಚ್ಚಿದ್ದು ಕಟ್ಟಕಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ಕಾರಣ ಮನೆಯಲ್ಲಿದ್ದವರು ತಪ್ಪಿಸಿಕೊಂಡ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಟ್ಟಕಡ ಸಮೀಪದ ಅಂಬಲತಿಂಕಲ ಎಂಬಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪದ್ಮಜಾ, ಅವರ ಮಗಳು ಮತ್ತು ಅವರ ಮೊಮ್ಮಗಳು ಸೇರಿದಂತೆ ಕುಟುಂಬ ಸದಸ್ಯರು ಮನೆಯಲ್ಲಿದ್ದಾಗ ಅಜಯಕುಮಾರ್ ಮಾಸ್ಕ್ ಧರಿಸಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯವರು ತಪ್ಪಿಸಿಕೊಳ್ಳದಂತೆ ಮುಂಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿದ್ದರು.

ಮನೆಯೊಳಗೆ ಬೆಂಕಿ ವ್ಯಾಪಿಸಿದಾಗ ಪದ್ಮಜಾ, ಅವರ ಮಗಳು, ಮೊಮ್ಮಗಳನ್ನು ಎತ್ತಿಕೊಂಡು ತಕ್ಷಣ ಹಿಂಬಾಗಿಲು ತೆರೆದು ಹೊರಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಮನೆಯಲ್ಲಿದ್ದ ಪೀಠೋಪಕರಣಗಳು, ಬಟ್ಟೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಭಾರೀ ಅನಾಹುತದಿಂದ ಜೀವ ಉಳಿಸಿಕೊಂಡ ಕುಟುಂಬ ಇನ್ನೂ ಅತಂಕದಿಂದ ಹೊರ ಬಂದಿಲ್ಲ.

ಘಟನಾ ಸ್ಥಳದಲ್ಲಿ ಪೊಲೀಸ್ ತಂಡ ವಿಸ್ತೃತ ತನಿಖೆ ನಡೆಸಿದ್ದು, ಹಿಂಸಾಚಾರಕ್ಕೆ ಆಸ್ತಿ ವಿವಾದವೇ ಕಾರಣ ಎಂದು ತೀರ್ಮಾನಿಸಿದೆ. ಮಾಜಿ ಸೈನಿಕ ಅಜಯಕುಮಾರ್ ಈ ಹಿಂದೆ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications