'ಬಹುಸಂಖ್ಯೆಯ ಮುಸ್ಲಿಮರೂ ರಾಮಮಂದಿರ ನಿರ್ಮಾಣ ಬಯಸುತ್ತಿದ್ದಾರೆ'
ಲಕ್ನೋ, ಆಗಸ್ಟ್ 21: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಹುಸಂಖ್ಯೆಯ ಮುಸ್ಲಿಮರು ಬಯಸುತ್ತಿದ್ದಾರೆ ಎಂಬುದಾಗಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಅಯೋಧ್ಯಾ ವಿವಾದವನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ವಿಷಯವನ್ನಾಗಿ ನೋಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶ್ರೀರಾಮನ ಇತರೆ ಭಕ್ತರಂತೆಯೇ ಅಯೋಧ್ಯಾದಲ್ಲಿ ಆದಷ್ಟು ಬೇಗನೇ ರಾಮಮಂದಿರ ನಿರ್ಮಾಣ ಆಗಬೇಕು ಎಂದು ನಾನು ಕೂಡ ಬಯಸಿದ್ದೇನೆ. ಪ್ರಸ್ತುತ ಈ ವಿವಾದವು ಸುಪ್ರೀಂಕೋರ್ಟ್ನಲ್ಲಿದೆ. ಅದರ ತೀರ್ಪಿಗಾಗಿ ನಾವು ಕಾದಿದ್ದೇವೆ. ಬಿಜೆಪಿಯು ಯಾವಾಗಲೂ ರಾಮಮಂದಿರ ನಿರ್ಮಾಣದ ಪರವಾಗಿ ಇದೆ. ಇದು ರಾಜಕೀಯ ವಿಷಯವಲ್ಲ. ಮಿಗಿಲಾಗಿ ಇದು ನಮ್ಮ ನಂಬಿಕೆಗೆ ಸಂಬಂಧಿಸಿದ್ದು ಎಂದು ಮೌರ್ಯ ತಿಳಿಸಿದ್ದಾರೆ.

ನಾವು ಲೋಕಸಭೆಯಲ್ಲಿ ಬಹುಮತ ಹೊಂದಿದ್ದೇವೆ. ಆದರೆ, ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಸೂದೆ ಅಂಗೀಕರಿಸಲು ರಾಜ್ಯಸಭೆಯಲ್ಲಿ ಅಗತ್ಯ ಬೆಂಬಲವಿಲ್ಲ.
ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಕೂಡ ರಾಮ ಮಂದಿರ ನಿರ್ಮಾಣವನ್ನು ಅಪೇಕ್ಷಿಸಿದ್ದಾರೆ. ಆದರೆ, ಕೆಲವು ರಾಜಕೀಯ ಕಾರಣಗಳಿಂದ, ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ನಲ್ಲಿ ಸತತ ವಿಚಾರಣೆ ನಡೆಯುವುದನ್ನು ಬಯಸುತ್ತಿಲ್ಲ. ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಆಗುವುದನ್ನು ಅವರು ಇಷ್ಟಪಡುತ್ತಿಲ್ಲ ಎಂದು ದೂರಿದರು.
ಇದಕ್ಕೂ ಮುನ್ನ ಸೋಮವಾರ ಅವರು, ವಿವಾದ ಬಗೆ ಹರಿಸುವುದಕ್ಕೆ ಎರಡು ಆಯ್ಕೆಗಳನ್ನು ನೀಡಿದ್ದರು. ಅಯೋಧ್ಯಾ ಭೂಮಿಯ ಹಕ್ಕುದಾರರ ನಡುವೆ ಮಾತುಕತೆ ಆರಂಭಿಸಬಹುದು ಅಥವಾ ಸಂಸತ್ನಲ್ಲಿ ಕಾನೂನು ಅಂಗೀಕರಿಸಬಹುದು ಎಂದಿದ್ದರು.












Click it and Unblock the Notifications