'ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡು ಹಾರಿಸಿದ್ದಾನೆ' ರಾಹುಲ್ ಗಾಂಧಿ ಟ್ವೀಟ್
ನವದೆಹಲಿ, ಜನವರಿ 30: ಇಂದು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 74ನೇ ಪುಣ್ಯತಿಥಿ. ಹೀಗಾಗಿ ದೇಶಾದ್ಯಂತ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಗುತ್ತಿದೆ. ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲರಿಗೂ ಗೌರವ ಸಲ್ಲಿಸಲು ಜನವರಿ 30 ಅನ್ನು ಸರ್ವೋದಯ ದಿನವಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಮಹಾತ್ಮ ಗಾಂಧಿಯವರ ಹತ್ಯೆಯಾದ ದಿನವೂ ಆಗಿದೆ. 1948ರ ಜನವರಿ 30ರಂದು ಬಿರ್ಲಾ ಹೌಸ್ನಲ್ಲಿ ಸಂಜೆಯ ಪ್ರಾರ್ಥನೆಯ ವೇಳೆ ಗಾಂಧೀಜಿಯವರು ನಾಥೂರಾಂ ಗೋಡ್ಸೆಯಿಂದ ಹತ್ಯೆಗೀಡಾದರು. ಈ ದಿನ ರಾಷ್ಟ್ರದ ಅತ್ಯಂತ ದುಃಖದ ದಿನವಾಗಿದೆ. ಗಾಂಧೀಜಿಯವರ ಮರಣದ ನಂತರ ಭಾರತ ಸರ್ಕಾರವು ಜನವರಿ 30 ರಂದು ಹುತಾತ್ಮರ ದಿನವನ್ನಾಗಿ ಆಚರಿಸಲು ಘೋಷಿಸಿತು.
ಹುತಾತ್ಮರ ದಿನ: ಈ ದಿನದಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ರಾಜ್ ಘಾಟ್ ಸ್ಮಾರಕದಲ್ಲಿರುವ ಮಹಾತ್ಮ ಗಾಂಧಿಯವರ ಸಮಾಧಿ ಬಳಿ ತೆರಳಿ ನಮನ ಸಲ್ಲಿಸುತ್ತಾರೆ. ಭಾರತೀಯ ಹುತಾತ್ಮರು ಮತ್ತು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸುತ್ತಾರೆ. ಭಾರತೀಯ ಹುತಾತ್ಮರ ಸ್ಮರಣೆಗಾಗಿ ಜನರು ಎರಡು ನಿಮಿಷಗಳ ಮೌನವನ್ನು ಆಚರಿಸುತ್ತಾರೆ. ಕೇಂದ್ರ ಸರಕಾರದ ಸೂಚನೆಯಂತೆ ಬೆಳಗ್ಗೆ 11 ಗಂಟೆಗೆ ದೇಶಾದ್ಯಂತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿ ಎರಡು ನಿಮಿಷ ಮೌನ ಆಚರಿಸಲಾಗುತ್ತದೆ.
|
'ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡು ಹಾರಿಸಿದ್ದಾನೆ'
ಈ ದಿನವನ್ನು ಹುತಾತ್ಮರ ದಿನ ಎಂದು ಕರೆಯಲಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿದ್ದಾರೆ. ಬಾಪು ಇನ್ನೂ ಬದುಕಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ರಾಹುಲ್ ಗಾಂಧಿ ಹಿಂದುತ್ವವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಹಿಂದುತ್ವವಾದಿಯೊಬ್ಬ ಗಾಂಧೀಜಿಗೆ ಗುಂಡು ಹಾರಿಸಿದ್ದಾನೆ. ಗಾಂಧೀಜಿ ಇನ್ನಿಲ್ಲ ಎಂದು ಹಿಂದುತ್ವವಾದಿಗಳೆಲ್ಲ ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತವಾಗಿದ್ದಾರೆ' ಎಂದು ಬರೆದಿದ್ದಾರೆ.
ಮಹಾನ್ ವ್ಯಕ್ತಿಗಳಿಗೆ ಗೌರವ
ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಕೂಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, "ಬಾಪು ಅವರ ಪುಣ್ಯತಿಥಿಯಂದು ಅವರ ಸ್ಮರಣಾರ್ಥ, ಅವರ ಉದಾತ್ತ ಆದರ್ಶಗಳನ್ನು ಜನಪ್ರಿಯಗೊಳಿಸುವ ನಮ್ಮ ಸಾಮೂಹಿಕ ಪ್ರಯತ್ನ ಮುಂದುವರಿಯುತ್ತದೆ. ಇಂದು ಹುತಾತ್ಮರ ದಿನ ನಮ್ಮ ದೇಶವನ್ನು ಧೈರ್ಯದಿಂದ ರಕ್ಷಿಸಿದ ಎಲ್ಲ ಮಹಾನ್ ವ್ಯಕ್ತಿಗಳಿಗೆ ನಾನು ಗೌರವ ಸಲ್ಲಿಸುತ್ತೇನೆ. ಅವರ ಸೇವೆ ಮತ್ತು ಶೌರ್ಯ ಸದಾ ಸ್ಮರಣೀಯ'' ಎಂದು ಟ್ವೀಟ್ ಮಾಡಿದ್ದಾರೆ.
|
ಸ್ವದೇಶಿ, ಸ್ವಭಾಷಾ ಮತ್ತು ಸ್ವರಾಜ್ಯದ ಚೈತನ್ಯ ಬಾಪುಜಿ
ಅಮಿತ್ ಶಾ ಕೂಡ ಬಾಪು ಅವರನ್ನು ಸ್ಮರಿಸಿ ನಮನ ಸಲ್ಲಿಸಿದರು. ‘ಮಹಾತ್ಮಾ ಗಾಂಧೀಜಿ ಅವರು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ವದೇಶಿ, ಸ್ವಭಾಷಾ ಮತ್ತು ಸ್ವರಾಜ್ಯದ ಚೈತನ್ಯವನ್ನು ತುಂಬಿದರು. ಅವರ ಆಲೋಚನೆಗಳು ಮತ್ತು ಆದರ್ಶಗಳು ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರದ ಸೇವೆ ಮಾಡಲು ಯಾವಾಗಲೂ ಪ್ರೇರೇಪಿಸುತ್ತವೆ. ಇಂದು ಪೂಜ್ಯ ಬಾಪು ಅವರ ಪುಣ್ಯತಿಥಿ. ನಾನು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ' ಎಂದು ಬರೆದಿದ್ದಾರೆ.
ಲಕ್ಷಾಂತರ ಜನರಿಗೆ ಸ್ಫೂರ್ತಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬಾಪು ಅವರಿಗೆ ಗೌರವ ಸಲ್ಲಿಸಿದರು. 'ಶಾಂತಿಯ ಸಂದೇಶ ಮಹಾತ್ಮ ಗಾಂಧಿಯವರ ಸಾರ್ವತ್ರಿಕ ಸಹೋದರತ್ವದ ಸಂದೇಶ ಇಂದಿಗೂ ಪ್ರತಿಧ್ವನಿಸುತ್ತದೆ. ಸತ್ಯ ಮತ್ತು ಸಮಾನತೆಯ ಅವರ ಅನ್ವೇಷಣೆ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ' ಎಂದು ಬರೆದಿದ್ದಾರೆ.
Recommended Video