Maharashtra Politics: 3 ತಿಂಗಳಲ್ಲಿ ಎಲ್ಲವೂ ಬದಲಾಗಲಿದೆ- ಶರದ್ ಪವಾರ್ ಕೂಲ್ ಹೇಳಿಕೆ ಹಿಂದಿನ ಮರ್ಮವೇನು?
ಮುಂಬೈ, ಜುಲೈ 03: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ. ಅಜಿತ್ ಪವಾರ್ ಅವರು ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಎನ್ಸಿಪಿಯ ಪ್ರಮುಖ ಶಾಸಕರು ಅಜಿತ್ ಪವಾರ್ ಹಾದಿಯನ್ನೇ ಹಿಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಹಿರಿಯ ರಾಜಕಾರಣಿ, ಎನ್ಸಿಪಿ ನಾಯಕ ಶರದ್ ಪವಾರ್ ಅವರು ಕೂಲ್ ಆಗಿಯೇ ಹೇಳಿಕೆ ನೀಡುವುದು ಎಲ್ಲರ ಕಣ್ಣರಳಿಸುವಂತೆ ಮಾಡಿದೆ.
ಈ ಬೆಳವಣಿಗೆಗಳ ಕುರಿತಾಗಿ ಮಹಾರಾಷ್ಟ್ರದ ಸತಾರದಲ್ಲಿ ಮಾತನಾಡಿರುವ ಅವರು, 'ಪ್ರತಿಪಕ್ಷಗಳನ್ನು ಮುಗಿಸುವ ಪ್ರಯತ್ನ ಇದಾಗಿದೆ' ಎಂದು ಹೇಳಿದ್ದಾರೆ.

'ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಎಲ್ಲರೂ ಶ್ರಮಿಸಬೇಕು. ರಾಜ್ಯದಲ್ಲಿ ಧಾರ್ಮಿಕ ವಾತಾವರಣವನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿವೆ' ಎಂದಿದ್ದಾರೆ.
ಬಿಜೆಪಿಯನ್ನು ಟಾರ್ಗೆಟ್ ಮಾಡಿದ ಅವರು, ದೇಶಾದ್ಯಂತ ವಿರೋಧ ಪಕ್ಷಗಳ ಸರ್ಕಾರವನ್ನು ಕೊನೆಗಾಣಿಸಲು ಕೇಸರಿ ಪಕ್ಷದ ನಾಯಕರು ಶ್ರಮಿಸುತ್ತಿದ್ದಾರೆ. ಅದನ್ನು ಮಹಾರಾಷ್ಟ್ರದಲ್ಲಿಯೂ ಮಾಡುತ್ತಿದ್ದಾರೆ. ಇದೊಂದು ಹೀನ ಪ್ರವೃತ್ತಿ ಎಂದು ಟೀಕಿಸಿದ್ದಾರೆ.
ನಾನು ಇನ್ನೂ ಶಕ್ತಿಯುತವಾಗಿದ್ದೇನೆ. ನಮ್ಮನ್ನು ತೊರೆದವರಿಗೆ ಅವರ ಸರಿಯಾದ ಸ್ಥಳವನ್ನು ತೋರಿಸುತ್ತೇನೆ. ನಮಗೆ ಮೋಸ ಮಾಡಿದವರನ್ನು ದೂರವಿಟ್ಟು ಮಹಾರಾಷ್ಟ್ರದಾದ್ಯಂತ ಸಂಚರಿಸುತ್ತೇನೆ. ಅಭಿವೃದ್ಧಿಯ ಹಾದಿಯಲ್ಲಿ ನನ್ನ ಸಹೋದ್ಯೋಗಿಗಳ ಹೊಸ ತಂಡವನ್ನು ರಚಿಸುತ್ತೇನೆ ಎಂದು ಹೇಳಿದ್ದಾರೆ.

ನಾವು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೆವು. ಆದರೆ ನಮ್ಮ ಸರ್ಕಾರವನ್ನು ಕೆಲವು ಜನರು ಉರುಳಿಸಿದರು. ದೇಶದ ಇತರ ಕೆಲವು ರಾಜ್ಯಗಳಲ್ಲಿಯೂ ಇದೇ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ನನ್ನ ಪಕ್ಷದ ಎಲ್ಲಾ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಇದು ಎನ್ಸಿಪಿಯ ಅಸ್ತಿತ್ವವನ್ನು ಅಸ್ಥಿರಗೊಳಿಸುವ ಮತ್ತು ಅಂತ್ಯಗೊಳಿಸುವ ಸಂಚು. ಇನ್ನು 3 ತಿಂಗಳಲ್ಲಿ ಇಡೀ 'ಚಿತ್ರ' ಬದಲಾಗಲಿದೆ. ನಾವು ಮತ್ತೊಮ್ಮೆ ಎನ್ಸಿಪಿಯನ್ನು ಮೊದಲಿನಿಂದ ರಚಿಸುತ್ತೇವೆ. ಇಂದಿನಿಂದ ಬದಲಾವಣೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅವರು ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸುಮಾರು ಅರ್ಧದಷ್ಟು ಎನ್ಸಿಪಿ ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಶರದ್ ಪವಾರ್ ಅವರ ಕೆಲವು ಆಪ್ತರು ಮತ್ತು ನಿಷ್ಠಾವಂತರು ಭಾನುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಅಜಿತ್ ಪವಾರ್ ಅವರ ದ್ರೋಹವು ಪ್ರತಿಪಕ್ಷಗಳ ಏಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ.












Click it and Unblock the Notifications