Maharashtra: ಮತ ಎಣಿಕೆ ಮೊದಲೇ ಬಿಜೆಪಿ ವಿರುದ್ಧ NCP ನಾಯಕನ ಗಂಭೀರ ಆರೋಪ
ಮುಂಬೈ, ನವೆಂಬರ್ 22: ಬಹುನಿರೀಕ್ಷೆಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024 ನಡೆದು, ಮತ ಎಣಿಕೆಗೆ ಕೌಂಟ್ ಡೌನ್ ಶುರುವಾಗಿದೆ. ನಾಳೆ ಶನಿವಾರ (ನವೆಂಬರ್ 23) ರಾಜ್ಯದ ಅಧಿಕಾರ ಯಾವ ಪಕ್ಷದ ಪಾಲಾಗಲಿದೆ ಎಂದು ತಿಳಿಯಲಿದೆ. ಈ ಮಧ್ಯೆ ಫಲಿತಾಂಶ ಹೊರ ಬೀಳಲು ಹಲುವು ಗಂಟೆಗಳ ಬಾಕಿ ಇರುವಾಗ ಇವಿಎಂ ಮಷಿನ್ ಭದ್ರವಾಗಿ ಇಟ್ಟಿರುವ ಸ್ಟ್ರಾಂಗ್ ರೂಮ್ ಗೆ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರವೇಶಿಸಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ನಾಳೆ ಶನಿವಾರ ನವೆಂಬರ್ 23 ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಇದಕ್ಕು ಮೊದಲೇ ನೆನ್ನೆ ತಡ ರಾತ್ರಿ ಬಿಜೆಪಿಯ 25-30 ಬಿಜೆಪಿ ಕಾರ್ಯಕರ್ತರು ಕರ್ಜಾತ್-ಜಮಖೇಡ್ನ ಇವಿಎಂಗಳ ಸ್ಟ್ರಾಂಗ್ ರೂಮ್ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶುಕ್ರವಾರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ ಪವಾರ್ ಬಣದ) ನಾಯಕ ರೋಹಿತ್ ಪವಾರ್ ಗಂಭೀರ ಆರೋಪ ಮಾಡಿದ್ದಾರೆ.

ರೋಹಿತ್ ಪವಾರ್ ಅವರು ಸಹ ಕರ್ಜಾತ್-ಜಮಖೇಡ್ನಿಂದಲೇ ಸ್ಪರ್ಧಿಸಿದ್ದಾರೆ. ಅದೇ ಕ್ಷೇತ್ರ ವ್ಯಾಪ್ತಿಯ ಸ್ಟ್ರಾಂಗ್ ಕೊಠಡಿಯಲ್ಲಿ ಮತದಾನದ ಬಳಿಕ ಇವಿಎಂ ಇರಿಸಲಾಗಿದೆ. ರೋಹಿತ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಅವರು ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯ ಸಚಿವ ರಾಮ್ ಶಿಂಧೆ ವಿರುದ್ಧ ಪೈಪೋಟಿ ಒಡ್ಡಿದ್ದಾರೆ. ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಶನಿವಾರದ ಫಲಿತಾಂಶದ ಮೇಲೆ ಅಪಾರ ವಿಶ್ವಾಸ ಹೊಂದಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರ ಮೇಲೆ ಅವರು ಆರೋಪ ಮಾಡಿದ್ದಾರೆ.
ಬಿಜೆಪಿ ಗೂಂಡಾಗಿರಿಗೆ ನಾಳೆ ಜನರು ಉತ್ತರಿಸುವರು
ಬಿಜೆಪಿ ನಾಯಕರ ಸ್ಟ್ರಾಂಗ್ ರೂಮ್ ಪ್ರವೇಶ್ ಯತ್ನವನ್ನು ನಮ್ಮ ಪಕ್ಷದ ಕಾರ್ಯಕರ್ತರು ಸೇರಿದಂತೆ ಸಿಆರ್ಪಿಎಫ್ ಸಿಬ್ಬಂದಿಯೊಂದಿಗೆ ತಡೆದಿದ್ದಾರೆ. ತಾಳ್ಮೆಯಿಂದ ಪರಿಸ್ಥಿತಿ ಹದಗೆಡದಂತೆ ನಿಯಂತ್ರಿಸುವ ಮೂಲಕ ಬಿಜೆಪಿ ಪ್ಲಾನ್ ಅನ್ನು ಹುಸಿಗೊಳಿಸಿದ್ದೇವೆ ಎಂದಿದ್ದಾರೆ. ಈ ಕುರಿತು ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಆಗಿದೆ.
ಇಂತಹ ಘಟನೆಗಳು ಆಗದಂತೆ ರಾಜ್ಯ ಚುನಾವಣಾ ಆಯೋಗವು ಸಮರ್ಪಕವಾಗಿ ಗಮನಿಸಬೇಕು. ನಿಗಾ ಇಡಬೇಕು. ಬಿಜೆಪಿ ಕಾರ್ಯಕರ್ತರ ಈ ವಿಫಲಯತ್ನ ನೋಡಿದರೆ ಅವರಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ಅದಕ್ಕೆ ಅವರು ಗೂಂಡಾಗಿರಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಇಂತಹ ಗೂಂಡಾಗಿರಿಗೆ ಕರ್ಜತ-ಜಮಖೇಡ್ ಕ್ಷೇತ್ರ ಜನರು ಮುಂದಿನ 24 ಗಂಟೆಗಳಲ್ಲಿ ಅಂತ್ಯ ಹಾಡಲಿದ್ದಾರೆ ಎಂದು ಬಿಜೆಪಿಗೆ ರೋಹಿತ್ ಪವಾರ್ ಅವರು ಟಾಂಗ್ ನೀಡಿದ್ದಾರೆ. ಸದ್ಯ ಈ ಕುರಿತು ಬಿಜೆಪಿಯಿಂದ ಯಾವ ಪ್ರತ್ಯುತ್ತರ, ಪ್ರತಿಕ್ರಿಯೆ ಬರುತ್ತದೆ ಎಂದು ಕಾದು ನೋಡಬೇಕಿದೆ.
ನವೆಂಬರ್ 20ರಂದು ಬುಧವಾರವಷ್ಟೇ ಮಹಾರಾಷ್ಟ್ರ ರಾಜ್ಯದ ಎಲ್ಲ 288 ವಿಧಾನಸಭೆ ಸೀಟುಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಅದರ ಫಲಿತಾಂಶ ನಾಳೆ ಶನಿವಾರ ಬಹಿರಂಗೊಳ್ಳಲಿದೆ. ಈಗಾಗಲೇ ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಏಜೆನ್ಸಿಗಳು ಚುನಾವಣೋತ್ತರ ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆ ಮಾಡಿವೆ. ಇದರಲ್ಲಿ ಬಿಜೆಪಿ ನೇತೃತ್ವದ ಮಾಹಾಯುತಿಗೆ ಹೆಚ್ಚು ಸ್ಥಾನ ಬರಲಿದೆ ಎಂದು ತಿಳಿಸಿವೆ.
ಅದರೆ ಎಕ್ಸಿಟ್ ಪೋಲ್ ಅನ್ನು ನಾವು ನಂಬುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ನಾವು ರಾಜ್ಯ ಚುನಾವಣೆ ಆಯೋಗ ಹೊರಡಿಸುವ ಅಧಿಕೃತ ಫಲಿತಾಂಶದ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದಿದ್ದಾರೆ.












Click it and Unblock the Notifications