ನಿಗದಿಯಂತೆಯೇ ನಡೆಯಲಿದೆ ಲೋಕಸಭೆ ಚುನಾವಣೆ: ಸುನೀಲ್ ಅರೋರಾ
ನವದೆಹಲಿ, ಮಾರ್ಚ್ 1: ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ನಡೆದ ನಂತರ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದು, ಈ ಕಾರಣಕ್ಕೆ ದೇಶದಲ್ಲಿ ನಡೆಯಬೇಕಿರುವ ಲೋಕಸಭೆ ಚುನಾವಣೆ ತಡವಾಗುವುದಿಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಉತ್ತರಪ್ರದೇಶದಲ್ಲಿ ಚುನಾವಣೆ ಸಿದ್ಧತೆ ಬಗ್ಗೆ ಪರಿಶೀಲಿಸಿದ ನಂತರ ಮಾತನಾಡಿ, ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಇನ್ನು ಚುನಾವಣೆ ದಿನಾಂಕದ ಘೋಷಣೆಯನ್ನು ಮಾಮೂಲಿಯಂತೆ ಸುದ್ದಿಗೋಷ್ಠಿ ನಡೆಸಿ, ತಿಳಿಸಲಾಗುವುದು ಎಂದಿದ್ದಾರೆ.
ಹೊಸ ಅಧಿಸೂಚನೆ ಪ್ರಕಾರ, ಚುನಾವಣೆ ನಿಲ್ಲುವ ಅಭ್ಯರ್ಥಿಗಳು ವಿದೇಶದಲ್ಲಿರುವ ತಮ್ಮ ಆಸ್ತಿ ವಿವರಗಳನ್ನು ಸಹ ನೀಡಬೇಕು. ಆದಾಯ ತೆರಿಗೆ ಇಲಾಖೆ ಆ ದಾಖಲೆಗಳ ಪರಿಶೀಲನೆ ನಡೆಸಿ, ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ಅದನ್ನು ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುತ್ತದೆ. ಆ ನಂತರ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಅರೋರಾ ಹೇಳಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಫುಟ್ ಬಾಲ್ ನಂತೆ ಆಗಿದೆ. ಒಂದು ಬಗೆಯ ಫಲಿತಾಂಶ ಬಂದರೆ ಇವಿಎಂ ಓಕೆ. ಮತ್ತೊಂದು ಫಲಿತಾಂಶ ಬಂದರೆ ಇವಿಎಂ ಸರಿಯಿಲ್ಲ. ಎರಡು ದಶಕಗಳಿಂದ ಇವಿಎಂ ಬಳಕೆಯಲ್ಲಿದೆ. ಕಳೆದ ಲೋಕಸಭಾ ಚುನಾವಣಾ ಫಲಿತಾಂಶ ಹಾಗೂ ಅದಾಗಿ ನಾಲ್ಕು ತಿಂಗಳಿಗೆ ಬಂದ ದೆಹಲಿ ವಿಧಾನಸಭಾ ಫಲಿತಾಂಶ ಗಮನಿಸಿ. ಎರಡೂ ಭಿನ್ನ ಎಂದು ಅರೋರಾ ಹೇಳಿದ್ದಾರೆ.












Click it and Unblock the Notifications