'ಲೂಟಿ ಮಾಡಿ ಪರಾರಿಯಾಗಿ' ಇದು ಮೋದಿ ಸರ್ಕಾರದ ನೀತಿ: ಕಾಂಗ್ರೆಸ್ ಕಿಡಿ
ನವದೆಹಲಿ, ಫೆಬ್ರವರಿ 15: 'ನೀರವ್ ಮೋದಿ' ಭಾಗಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಗರಣ ಹೊರಬರುತ್ತಿದ್ದಂತೆ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
"ಮೊದಲಿಗೆ ಲಲಿತ್ ಮೋದಿ ಭಾರತದಿಂದ ಪರಾರಿಯಾದರು. ಅದಾದ ನಂತರ ವಿಜಯ್ ಮಲ್ಯ, ಎಬಿಜಿಯ ರಿಶಿ ಅಗರ್ವಾಲ್, ಇದೀಗ ನೀರವ್ ಮೋದಿ ಭಾರತ ಬಿಟ್ಟು ಪರಾರಿಯಾಗಿದ್ದಾರೆ," ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'ಪಿಎನ್ ಬಿ' ವಂಚನೆ ಕುರಿತು ಕುರಿತು ಜುಲೈ 26, 2016ರಲ್ಲೇ ಪ್ರಧಾನಿ ಕಚೇರಿ ಗಮನಕ್ಕೆ ತರಲಾಗಿತ್ತು. ಹೀಗಿದ್ದೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅವಧಿಯಲ್ಲಿ ಬ್ಯಾಂಕ್ ಹಣ ಕಳೆದುಕೊಂಡಿದ್ದಲ್ಲದೆ ಅರೋಪಿಗಳು ಪರಾರಿಯಾಗಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಪಿಎನ್ ಬಿ ಹಗರಣವನ್ನು ಭಾರತದ ಅತೀ ದೊಡ್ಡ ಬ್ಯಾಂಕ್ ಹಗರಣ ಎಂದು ಕರೆದಿರುವ ಕಾಂಗ್ರೆಸ್ ಈ ಹಗರಣದಲ್ಲಿ 30 ಬ್ಯಾಂಕ್ ಗಳ ಪಾತ್ರವಿದೆ ಎಂದು ಆರೋಪಿಸಿದೆ. ಈ ಹಗರಣದ ಮೊತ್ತ 11,400 ಕೋಟಿ ರೂಪಾಯಿ ಎಂದು ಪಿಎನ್ ಬಿ ಬ್ಯಾಂಕ್ ಸೆಬಿಗೆ ಸಲ್ಲಿಸಿದ ದೂರಿನಲ್ಲಿ ಹೇಳಿದೆ.
ನರೇಂದ್ರ ಮೋದಿ ಸರ್ಕಾರ ಬೇರೆ ಹಗರಣಗಳನ್ನೂ ಮುಚ್ಚಿಟ್ಟಿದೆ. ಇದೇ ರೀತಿ ಗೀತಾಂಜಲಿ ಜೆಮ್ಸ್ ಲಿ. ಬೇರೆ ಬೇರೆ ಬ್ಯಾಂಕ್ ಗಳಿಗೆ 9,872 ಕೋಟಿ ರೂ. ವಂಚಿಸಿದೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ನರೇಂದ್ರ ಮೋದಿಯವರಿಗೆ ಅರಿವಿದೆ. ಅವರಿಗೆ ಹರಿ ಪ್ರಸಾದ್ ಎನ್ನುವವರು ಜುಲೈ 26ರಂದೇ ಪತ್ರ ಬರೆದಿದ್ದರು. ಇದೇ ರೀತಿ ಹಲವು ದಾಖಲೆಗಳನ್ನು ಮತ್ತು 42 ಎಫ್ಐಆರ್ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಇದರ ಬಗ್ಗೆ ಪ್ರಧಾನಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇಷ್ಟೆಲ್ಲ ದೂರು ಸಲ್ಲಿಸಿಯೂ ನರೇಂದ್ರ ಮೋದಿ ಜತೆ ಉದ್ಯಮಿಗಳ ನಿಯೋಗದಲ್ಲಿ ನೀರವ್ ಮೋದಿ ಜನವರಿ 2018ರಲ್ಲಿ ದಾವೋಸ್ ಗೆ ತೆರಳಿದ್ದರು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಇದೇ ವೇಳೆ ಕಾಂಗ್ರೆಸ್ ಮೋದಿಗೆ 5 ಪ್ರಶ್ನೆಗಳನ್ನು ಕೇಳಿದ್ದು ಆ ಪ್ರಶ್ನೆಗಳು ಹೀಗಿವೆ..
1. ಮೋದಿ ಸರ್ಕಾರದ ಮೂಗಿನಡಿಯಲ್ಲಿ ನೀರವ್ ಮೋದಿ / ಮೆಹುಲ್ ಚೋಕ್ಸಿ ಇಡೀ ಬ್ಯಾಂಕಿಂಗ್ ವ್ಯವಸ್ಥೆಗೆ ಹೇಗೆ ನಕಲಿ ಪತ್ರಗಳ ಮೂಲಕ ವಂಚಿಸಿದರು? ಈ ಅತೀ ದೊಡ್ಡ 'ಬ್ಯಾಂಕ್ ಲೂಟಿ ಹಗರಣಕ್ಕೆ' ಯಾರು ಹೊಣೆ?
2. ಜುಲೈ 26, 2016 ರಂದು ಪ್ರಧಾನಿ ಲಿಖಿತ ದೂರು ಸ್ವೀಕರಿಸಿದ ಹೊರತಾಗಿಯೂ ಬ್ಯಾಂಕಿಂಗ್ ಕ್ಷೇತ್ರದ ಹಿತಾಸಕ್ತಿಗಳನ್ನು ರಕ್ಷಿಸಲು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಹಣಕಾಸು ಸಚಿವಾಲಯ, ಅದರ ಆರ್ಥಿಕ ಗುಪ್ತಚರ ಘಟಕಗಳು ಮತ್ತು ಇತರ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ನಿದ್ರಿಸುತ್ತಿದ್ದಾರೆಯೇ?
3. ಪಿಎನ್ ಬಿ ಬ್ಯಾಂಕಿನ ಜೋನಾಲ್ ಆಫೀಸಿನ ಡಿಜಿಎಂ ಜನವರಿ 29, 2018 ರಂದು (ಅನೆಕ್ಷರ್ ಎ -1) ನೀರವ್ ಮೋದಿ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ ಮಾಡುವಂತೆ ಸಿಬಿಐ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದರು. ಹಾಗಾದಲ್ಲಿ ಅವರು ದೇಶವನ್ನು ಬಿಟ್ಟು ಹೋಗಲು ಸಾಧ್ಯವಿರಲಿಲ್ಲ. ಇವೆಲ್ಲದರ ಹೊರತಾಗಿಯೂ, ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಮತ್ತು ದೇಶವನ್ನು ಬಿಡಲು ನೀರವ್ ಮೋದಿಗೆ ಹೇಗೆ ಅನುಮತಿ ನೀಡಲಾಯಿತು?
4. ಪೂರ್ತಿ ವ್ಯವಸ್ಥೆಗೆ ಹೇಗೆ ಮಣ್ಣೆರೆಚಲಾಯಿತು? ವಂಚನೆಯು ಎಲ್ಲಾ ಆಡಿಟರ್ ಮತ್ತು ತನಿಖಾಧಿಕಾರಿಗಳ ಕಣ್ಣಿಗೆ ಯಾಕೆ ಬೀಳಿಲ್ಲ? ಇದು ಅತ್ಯುನ್ನತ ಮಟ್ಟದಲ್ಲಿ ಹಗರಣದ ಜತೆ ಕೈ ಜೋಡಿಸಿರುವುದನ್ನು ಸೂಚಿಸುವುದಿಲ್ಲವೇ? ನಿರಾವ್ ಮೋದಿ / ಮೆಹುಲ್ ಚೋಕ್ಸಿ ಅವರನ್ನು ಯಾರು ರಕ್ಷಿಸುತ್ತಿದ್ದಾರೆ?
5. ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ 'ರಿಸ್ಕ್ ಮ್ಯಾನೇಜ್ಮೆಂಟ್ ಸಿಸ್ಟೆಮ್' ಮತ್ತು 'ಫ್ರಾಡ್ ಡಿಟೆಕ್ಷನ್ ಎಬಿಲಿಟಿ' ಏನನ್ನೂ ಮಾಡಲಿಲ್ಲ ಯಾಕೆ?
ಎಂದ್ರ ಪ್ರಶ್ನಿಸಿದೆ. ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸುವ ಗೋಜಿಗೇ ಹೋಗಿಲ್ಲ.












Click it and Unblock the Notifications