Get Updates
Get notified of breaking news, exclusive insights, and must-see stories!

'ಶಹೆನ್‌ಶಾ' ರಾಬರ್ಟ್ ವಾದ್ರಾ ಶೀಘ್ರದಲ್ಲೇ ಜೈಲಿಗೆ: ಪ್ರಧಾನಿ ಮೋದಿ

ಫತೇಹಬಾದ್, ಮೇ 8: ಕಾಂಗ್ರೆಸ್ ವಂಶಾಡಳಿತದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹರಿಯಾಣದ ಫತೇಹ್‌ಬಾದ್‌ನಲ್ಲಿ ಬುಧವಾರ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿಯ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಿಯಾಂಕಾ ಅವರ ಪತಿ, ಉದ್ಯಮಿ ರಾಬರ್ಟ್ ವಾದ್ರಾ ಅವರ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಶಹೆನ್‌ಶಾ (ಸಾಮ್ರಾಟ) ರೈತರನ್ನು ಲೂಟಿ ಮಾಡಿದ್ದಕ್ಕಾಗಿ ನ್ಯಾಯಾಲಯಕ್ಕೆ ಎಳೆದಿರುವುದಕ್ಕೆ ನಡುಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಪ್ರಧಾನಿ ಮೋದಿ, ಅವರನ್ನು ಶೀಘ್ರದಲ್ಲಿಯೇ ಜೈಲಿಗೆ ಕಳುಹಿಸುವುದಾಗಿ ಆಶ್ವಾಸನೆ ನೀಡಿದರು.

ರೈತರಿಗೆ ವಂಚಿಸಿ ಲೂಟಿ ಮಾಡಿದವರನ್ನು ಚೌಕಿದಾರ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಾನೆ. ಮತ್ತೆ ನೀವು ಆಯ್ಕೆ ಮಾಡಿ ಅಧಿಕಾರ ನೀಡಿದರೆ ಅವರನ್ನು ಮುಂದಿನ ಅವಧಿಯೊಳಗೆ ಖಂಡಿತಾ ಜೈಲಿಗೆ ಹಾಕುತ್ತೇನೆ ಎಂದು ಮೋದಿ ಹೇಳಿದರು.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖಾರವಾದ ಪ್ರತಿಕ್ರಿಯೆ ನೀಡಿರುವ ರಾಬರ್ಟ್ ವಾದ್ರಾ, ತಮ್ಮ ಮೇಲೆ ವೈಯಕ್ತಿಕ ದಾಳಿ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಐದು ವರ್ಷಗಳಲ್ಲಿ ಜೈಲಿಗೆ

ಐದು ವರ್ಷಗಳಲ್ಲಿ ಜೈಲಿಗೆ

'ರೈತರನ್ನು ಲೂಟಿ ಮಾಡಿದವರನ್ನು ಈ ಚೌಕಿದಾರ ನ್ಯಾಯಾಲಯಕ್ಕೆ ಎಳೆದಿದ್ದಾನೆ. ಅವರೀಗ ಜಾರಿ ನಿರ್ದೇಶನಾಲಯ ಮತ್ತು ನ್ಯಾಯಾಲಯಗಳಲ್ಲಿ ಜಾಮೀನು ತೆಗೆದುಕೊಳ್ಳಲು ಓಡಾಡುತ್ತಿದ್ದಾರೆ. ತಾನು ಸಾಮ್ರಾಟ ಎಂದು ಭಾವಿಸಿದ್ದ ಅವರೀಗ ನಡುಗುತ್ತಿದ್ದಾರೆ. ಅವರನ್ನು ನಾನು ಈಗಾಗಲೇ ಜೈಲಿನ ಬಾಗಿಲಿನಡೆಗೆ ಕರೆದೊಯ್ದಿದ್ದೇನೆ. ನೀವು ಆಶೀರ್ವಾದ ಮಾಡಿ, ಅವರನ್ನು ಐದು ವರ್ಷಗಳ ಒಳಗೆ ಜೈಲಿಗೆ ಹಾಕುತ್ತೇನೆ' ಎಂದು ಮೋದಿ ಹೇಳಿದರು.

ರಾಬರ್ಟ್ ವಾದ್ರಾ ಆಕ್ಷೇಪ

ರಾಬರ್ಟ್ ವಾದ್ರಾ ಆಕ್ಷೇಪ

'ಈ ರೀತಿ ಹೇಳಿಕೆ ನೀಡುವ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸುತ್ತಿದ್ದೀರಿ. ನನಗೆ ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಹೊರಬೀಳಲಿದೆ. ನಮ್ಮ ದೇಶವನ್ನು ದೇವರು ಕಾಪಾಡಲಿ. ನಿಮ್ಮ ಸಮಾವೇಶದಲ್ಲಿ ನನ್ನ ಹೆಸರು ಕೇಳಿ ಆಘಾತವಾಯಿತು. ಮಹತ್ವದ ಸಂಗತಿಗಳಾದ ಬಡತನ, ನಿರುದ್ಯೋಗ, ಮಹಿಳಾ ಸಬಲೀಕರಣದಂತಹ ವಿಚಾರಗಳು ನಿಮ್ಮೆಡೆಗೆ ದಿಟ್ಟಿಸುತ್ತಿವೆ. ಆದರೆ, ನೀವು ಎಲ್ಲವನ್ನೂ ಬಿಟ್ಟು ಮಾತಾಡಲು ನನ್ನನ್ನು ಆಯ್ಕೆ ಮಾಡಿಕೊಂಡಿದ್ದೀರಿ' ಎಂದು ವಾದ್ರಾ ಹೇಳಿದ್ದಾರೆ.

ದೇಶದ್ರೋಹ ಕಾನೂನು

ದೇಶದ್ರೋಹ ಕಾನೂನು

'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನು ತೆಗೆದುಹಾಕುವ ಭರವಸೆ ನೀಡಿದೆ. ತುಕ್ಡೇ ತುಕ್ಡೇ ಗ್ಯಾಂಗ್, ಭಾರತವನ್ನು ಅವಮಾನಿಸಿದವರು, ದೇಶದ ಧ್ವಜವನ್ನು ಅವಮಾನಿಸಿದವರು ಮತ್ತು ನಕ್ಸಲರ ಪರವಾಗಿ ಇರುವವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಕಾಂಗ್ರೆಸ್ ಬಯಸಿದೆ. ಕಾಂಗ್ರೆಸ್‌ನ ಈ ಭರವಸೆಗಳನ್ನು ನೀವು ಒಪ್ಪುತ್ತೀರಾ ಎಂಬುದನ್ನು ನಾನು ತಿಳಿಯಲು ಬಯಸಿದ್ದೇನೆ' ಎಂದು ಮೋದಿ ಹೇಳಿದರು.

ಜಮೀನು ವಂಚನೆ ಆರೋಪ

ಜಮೀನು ವಂಚನೆ ಆರೋಪ

ಭೂಪಿಂದರ್ ಸಿಂಗ್ ಹೂಡಾ ಅವರು ಹರಿಯಾಣದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುರುಗಾವ್‌ನಲ್ಲಿ ರೈತರನ್ನು ವಂಚಿಸಿ ಅಕ್ರಮವಾಗಿ ಭೂಮಿ ಪಡೆದುಕೊಂಡಿದ್ದಾರೆ ಎಂದು ರಾಬರ್ಟ್ ವಾದ್ರಾ ವಿರುದ್ಧ ಆರೋಪಿಸಲಾಗಿದೆ. 2015ರ ಮೇ 14ರಂದು ಹರಿಯಾಣದ ಬಿಜೆಪಿ ಸರ್ಕಾರವು ಈ ಒಪ್ಪಂದಗಳ ಕುರಿತು ತನಿಖೆ ನಡೆಸಲು ನ್ಯಾಯಮೂರ್ತಿ ಧಿಂಗ್ರಾ ಆಯೋಗವನ್ನು ರಚಿಸಿತ್ತು.

ಏಕವ್ಯಕ್ತಿ ಆಯೋಗವು 2016ರ ಆಗಸ್ಟ್ 31ರಂದು 182 ಪುಟಗಳ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಈ ವರದಿಯನ್ನು ಬಹಿರಂಗಪಡಿಸಿಲ್ಲ.

ಅಕ್ರಮ ಹಣ ವರ್ಗಾವಣೆ

ಅಕ್ರಮ ಹಣ ವರ್ಗಾವಣೆ

ಅಲ್ಲದೆ ಅಕ್ರಮ ಹಣ ವರ್ಗಾವಣೆ ಆರೋಪವನ್ನೂ ವಾದ್ರಾ ಎದುರಿಸುತ್ತಿದ್ದಾರೆ. ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಲಂಡನ್‌ನ ಬ್ರೈಸ್ಟನ್ ಸ್ಕ್ವೇರ್‌ನಲ್ಲಿ ಅವರು 1.9 ಮಿಲಿಯನ್ ಪೌಂಡ್ ಮೌಲ್ಯದ ಜಮೀನನ್ನು ಅಕ್ರಮವಾಗಿ ಖರೀದಿಸಿದ ಆರೋಪಕ್ಕೆ ಒಳಗಾಗಿದ್ದಾರೆ.

ಈ ಪ್ರಕರಣವನ್ನು ವಜಾಗೊಳಿಸುವಂತೆ ವಾದ್ರಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್ ಹೆಚ್ಚು ಕಾಲಾವಕಾಶ ನೀಡಿತ್ತು. ಮುಂದಿನ ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಪಡಿಸಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ವಿನೋದ್ ಗೋಯೆಲ್ ಅವರನ್ನು ಒಳಗೊಂಡ ನ್ಯಾಯಪೀಠ ಆದೇಶ ಹೊರಡಿಸಿತ್ತು. ಎರಡು ವಾರದ ಬಳಿಕ ಇಡಿಯ ಅಫಿಡವಿಟ್‌ಗೆ ಪ್ರತಿಯಾಗಿ ಪ್ರತಿಕ್ರಿಯೆ ನೀಡುವಂತೆ ವಾದ್ರಾ ಮತ್ತು ಅವರ ಆಪ್ತ ಮನೋಜ್ ಅರೋರಾಗೆ ಸೂಚಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+