ಅಮೇಥಿಯಲ್ಲಿ ರಾಹುಲ್ ಗಾಂಧಿ ಹತ್ಯೆಗೆ ಸಂಚು?: ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಪತ್ರ
Recommended Video

ನವದೆಹಲಿ, ಏಪ್ರಿಲ್ 11: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆಯೇ? ಹೀಗೊಂದು ಅನುಮಾನವನ್ನು ಕಾಂಗ್ರೆಸ್ ವ್ಯಕ್ತಪಡಿಸಿದೆ.
ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ, ಈ ವಾರದ ಆರಂಭದಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಆಗ ಅವರತ್ತ ಏಳು ಬಾರಿ ಹಸಿರು ಲೇಸರ್ಅನ್ನು ಗುರಿ ಮಾಡಲಾಗಿತ್ತು ಎಂದು ಕಾಂಗ್ರೆಸ್ ಹೇಳಿದೆ.
ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದಲ್ಲಿ ಸರಿಯಾಗಿ ಭದ್ರತೆ ಒದಗಿಸಿಲ್ಲ. ಯಾವುದೇ ಬೆದರಿಕೆ ಇದ್ದರೆ ಅದರ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಿ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಾಂಗ್ರೆಸ್ನ ಮೂವರು ನಾಯಕರು ಪತ್ರ ಬರೆದಿದ್ದಾರೆ. ರಾಹುಲ್ ಅವರ ಭದ್ರತೆಯ ವಿವರಗಳಿಗೆ ಸಂಬಂಧಿಸಿದ ಶಿಷ್ಟಾಚಾರ ಕಠಿಣವಾಗಿ ಅನುಸರಿಸುವಂತೆ ಅವರು ಕೋರಿದ್ದಾರೆ.
'ಕೆಲವೇ ಅವಧಿಯಲ್ಲಿ ರಾಹುಲ್ ಗಾಂಧಿ ಅವರ ತಲೆಗೆ ಏಳು ಬಾರಿ ಹಸಿರು ಲೇಸರ್ ಗುರಿಯಿರಿಸಲಾಗಿತ್ತು. ಎರಡು ಬಾರಿ ಅವರ ತಲೆಯ ಬಲಭಾಗದತ್ತ ಗುರಿ ಮಾಡಲಾಗಿತ್ತು ಎಂದು ಪತ್ರದಲ್ಲಿ ಹೇಳಲಾಗಿದೆ.
ಇದನ್ನು ಖಚಿತಪಡಿಸುವ ಸಲುವಾಗಿ ರಾಹುಲ್ ಗಾಂಧಿ, ಮಾಧ್ಯಮದ ಜತೆ ಮಾತನಾಡುವ ವೇಳೆ ಹಸಿರು ಬೆಳಕು ಅವರ ಹಣೆಯ ಮೇಲೆ ಮೂಡುವುದನ್ನು ತೋರಿಸುವ ವಿಡಿಯೋವನ್ನು ಕೂಡ ಕಳುಹಿಸಲಾಗಿದೆ. ಈ ಜಂಟಿ ಪತ್ರಕ್ಕೆ ಅಹ್ಮದ್ ಪಟೇಲ್, ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಸಹಿ ಹಾಕಿದ್ದಾರೆ.
|
ಸ್ನೈಪರ್ ಗನ್ ಬಳಕೆ?
ಮಾಜಿ ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಈ ವಿಡಿಯೋವನ್ನು ಪರಿಶೀಲನೆ ಮಾಡಿದ್ದಾರೆ. ಇದು ಸ್ನೈಪರ್ ಗನ್ನಂತಹ ಆಧುನಿಕ ಶಸ್ತ್ರದಿಂದ ಹೊರಟಿರುವ ಲೇಸರ್ ಇರಬಹುದು ಎಂದು ಮೊದಲ ನೋಟಕ್ಕೆ ಅನಿಸಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಭದ್ರತಾ ವೈಫಲ್ಯದ ಆತಂಕ
'ದಾಳಿಯ ಸಾಧ್ಯತೆಯೂ ಎಚ್ಚರಿಕೆ ಮೂಡಿಸುವ ಗಂಭೀರ ಪ್ರಕರಣವಾಗಿದೆ. ಜತೆಗೆ ರಾಹುಲ್ ಗಾಂಧಿ ಅವರ ಭದ್ರತೆಯ ವೈಫಲ್ಯದ ಕುರಿತು ಆತಂಕ ಮೂಡಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷರನ್ನು ರಾಜಕೀಯ ಹತ್ಯೆಗೆ ಗುರಿ ಮಾಡಿರುವ ಸಾಧ್ಯತೆಯ ಕುರಿತು ತೀವ್ರ ಆಘಾತ ಮತ್ತು ಯಾತನೆಗೆ ಒಳಗಾಗಿದ್ದೇವೆ' ಎಂದು ತಿಳಿಸಿದ್ದಾರೆ.

ಇಂದಿರಾ, ರಾಜೀವ್ ಹತ್ಯೆ ನೆನಪು
ರಾಹುಲ್ ಅವರ ತಂದೆ ಮತ್ತು ಅಜ್ಜಿ, ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರು ಹತ್ಯೆಯಾಗಿದ್ದನ್ನು ಉಲ್ಲೇಖಿಸಿರುವ ಕಾಂಗ್ರೆಸ್, ರಾಹುಲ್ ಅವರ ಭದ್ರತೆಯ ವೈಫಲ್ಯವು ತೀವ್ರ ಕಳವಳ ಉಂಟುಮಾಡಿದೆ ಎಂದಿದ್ದಾರೆ.

ದಾಳಿ ನಡೆಸುವ ಅಪಾಯ ಹೆಚ್ಚು
'ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ನಿರಂತರವಾಗಿ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆಸುವ ಅಪಾಯ ಹೆಚ್ಚಿದೆ. ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ಕೇಂದ್ರ ಸರ್ಕಾರ ಹಾಗೂ ಗೃಹಸಚಿವಾಲಯದ ಮೊದಲ ಜವಾಬ್ದಾರಿ ಎಂದು ಪತ್ರದಲ್ಲಿ ಹೇಳಲಾಗಿದೆ.












Click it and Unblock the Notifications