ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯಗೊಳಿಸಿದ್ದರ ಹಿಂದಿನ ಕಾರಣವೇನು?
ನವದೆಹಲಿ, ಮೇ.18: ನಾಲ್ಕನೇ ಅವಧಿಯ ಭಾರತ ಲಾಕ್ ಡೌನ್ ವಿಸ್ತರಣೆಗೊಳಿಸಿದ ಕೇಂದ್ರ ಗೃಹ ಸಚಿವಾಲಯವು ಆರೋಗ್ಯ ಸೇತು ಆಪ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಗ್ರಹಕ್ಕೆ ಆಪ್ ಸಹಕಾರಿಯಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮೇ.17ರಂದು ಭಾರತ ಲಾಕ್ ಡೌನ್ 4.O ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರವು ಆರೋಗ್ಯ ಸೇತು ಆಪ್ ಬಳಕೆ ಬಗ್ಗೆ ಉಲ್ಲೇಖಿಸಿದೆ. ಆಪ್ ನ್ನು ಕೆಲವು ಬದಲಾವಣೆಗಳೊಂದಿಗೆ ಅಪ್ ಅಭಿವೃದ್ಧಿಪಡಿಸಲಾಗಿದ್ದು, ಈ ಆಪ್ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.
ಕೆಲಸ ಮಾಡುವ ಸ್ಥಳ ಹಾಗೂ ಉದ್ಯೋಗಿಗಳು, ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಸೇತು ಆಪ್ ಕಡ್ಡಾಯವಾಗಿದೆ. ದೇಶದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳು ಆರೋಗ್ಯ ಸೇತು ಆಪ್ ಹೊಂದಲೇಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.

ಪ್ರತಿನಿತ್ಯದ ಅಂಕಿ-ಅಂಶಗಳು ಲಭ್ಯ:
ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಬಗ್ಗೆ ಪ್ರತಿನಿತ್ಯವೂ ಅಂಕಿ-ಅಂಶಗಳನ್ನು ಆರೋಗ್ಯ ಸೇತು ಆಪ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕಿತರಿದ್ದಲ್ಲಿ ಆಪ್ ಹೊಂದಿರುವವರಿಗೆ ಎಚ್ಚರಿಕೆ ಸಂದೇಶವು ಬರುತ್ತದೆ. ಇದರ ಜೊತೆಗೆ ಕೊರೊನಾ ವೈರಸ್ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಆಪ್ ಸಹಕಾರಿ ಆಗಲಿದೆ. ಕಂಟೇನ್ಮೆಂಟ್ ಪ್ರದೇಶಗಳಲ್ಲಿ ನೂರಕ್ಕೆ ನೂರರಷ್ಟು ಪ್ರತಿಶತ ಜನರು ಆಪ್ ಬಳಸುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ತಿಳಿಸಿದೆ.
ಫ್ರೆಂಚ್ ಹ್ಯಾಕರ್ ಆರೋಪ ತಳ್ಳಿಹಾಕಿದ ಕೇಂದ್ರ:
ಆರೋಗ್ಯ ಸೇತು ಆಪ್ ನ್ನು ಸುಲಭವಾಗಿ ಹ್ಯಾಕರ್ ಗಳು ಹ್ಯಾಕ್ ಮಾಡಬಹುದಾಗಿದೆ ಎಂದು ಫ್ರೆಂಚ್ ಹ್ಯಾಕರ್ ಎಲಿಯಟ್ ಆಂಡರ್ ಸನ್ ಆರೋಪಿಸಿದ್ದರು. ಆರೋಗ್ಯ ಸೇತು ಬಳಕೆಗೆ ಅಷ್ಟೊಂದು ಸುರಕ್ಷಿತವಲ್ಲ. ಏಕೆಂದರೆ 90 ಮಿಲಿಯನ್ ಜನರ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯು ಸೋರಿಕೆಯಾಗುವ ಅಪಾಯವಿರುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಆರೋಪವನ್ನು ಕೇಂದ್ರ ಗೃಹ ಸಚಿವಾಲಯವು ತಳ್ಳಿ ಹಾಕಿದೆ. ಆಪ್ ಸಂಪೂರ್ಣ ಸುರಕ್ಷಿತವಾಗಿದೆ. ಯಾವುದೇ ರೀತಿ ಹ್ಯಾಕ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.












Click it and Unblock the Notifications