ಮದ್ಯ ದೊರೆ ವಿಜಯ್ ಮಲ್ಯ ಇನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ'
ಬೆಂಗಳೂರು, ಮೇ 25: ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಹಾರಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.
ವಿಜಯ್ ಮಲ್ಯ ಅವರನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧತೆ ನಡೆಸಿದೆ.
ಒಂದು ವೇಳೆ ಜಾರಿ ನಿರ್ದೇಶನಾಲಯದ (ಇ.ಡಿ) ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದರೆ ಮಲ್ಯ ಭಾರತದಲ್ಲಿ ಇರುವ ತಮ್ಮೆಲ್ಲ ಆಸ್ತಿ ಮತ್ತು ಸಂಪತ್ತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳಲಿದ್ದಾರೆ.
ಅಲ್ಲದೆ, ಮಲ್ಯ ಅವರ ಎಲ್ಲ ಆಸ್ತಿ ಮತ್ತು ಸಂಪತ್ತನ್ನು ಹರಾಜಿಗೆ ಹಾಕುವ ಮುನ್ನ ಅವುಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಇ.ಡಿ,ಗೆ ಅಧಿಕಾರ ದೊರಕಲಿದೆ.

100 ಕೋಟಿ ರೂ.ಗಿಂತ ಅಧಿಕ ಪ್ರಮಾಣದ ವಂಚನೆ ಮಾಡಿ ದೇಶದಿಂದ ಪರಾರಿಯಾದ ವ್ಯಕ್ತಿಗಳ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಜತೆಗೆ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಿಸುವ ಕಾನೂನನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ರೂಪಿಸಿತ್ತು. ಅದಕ್ಕೆ ರಾಷ್ಟ್ರಪತಿಗಳ ಅನುಮೋದನೆ ದೊರಕಿತ್ತು.
ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಂದ ಉಂಟಾದ ನಷ್ಟದ ಮೊತ್ತವನ್ನು ಪಡೆದುಕೊಳ್ಳುವ ಈ ಹೊಸ ಕಾನೂನು ಅತ್ಯಂತ ಕಠಿಣವಾಗಿದೆ.
ಒಂದು ವೇಳೆ ಆರ್ಥಿಕ ಅಪರಾಧಿ ಎಂದು ಘೋಷಿಸಿದರೆ ವಿಜಯ್ ಮಲ್ಯ ಕೋರ್ಟ್ನಲ್ಲಿ ಅದನ್ನು ತಮ್ಮ ಆಸ್ತಿ ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ಮಲ್ಯ ತಲೆಮರೆಸಿಕೊಳ್ಳುವುದು ಮುಂದುವರಿಸಿದರೆ ಪ್ರಕರಣದ ಅಂತಿಮ ಶಿಕ್ಷೆ ಪ್ರಕಟಗೊಳ್ಳುವವರೆಗೆ ಕಾಯುವ ಗೋಜಿಗೆ ಹೋಗದೆಯೇ ಇ.ಡಿ. ಎಲ್ಲ ಆಸ್ತಿಗಳನ್ನೂ ಹರಾಜು ಮಾಡಬಹುದು.
ಇದು ಜಾರಿಯಾದರೆ ವಿಜಯ್ ಮಲ್ಯ ಭಾರತಕ್ಕೆ ಬಂದಿಳಿಯವುದು ಅನಿವಾರ್ಯವಾಗಲಿದೆ.
ವಿಜಯ್ ಮಲ್ಯ, ನೀರವ್ ಮೋದಿ ಅವರಂತಹ ಪ್ರಭಾವಿಗಳು ಬ್ಯಾಂಕ್ನಿಂದ ಸಾಲ ಪಡೆದು ವಂಚಿಸಿದ್ದಲ್ಲದೆ, ವಿಚಾರಣೆ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಹಾರಿದ ಕೆಲವು ಘಟನೆಗಳು ನಡೆದ ಬಳಿಕ ಎಚ್ಚೆತ್ತ ಕೇಂದ್ರ ಸರ್ಕಾರ ಸಚಿವ ಸಂಪುಟ 2018ರ ಮಾರ್ಚ್ನಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ ಅನುಮೋದನೆ ನೀಡಿತ್ತು.
ಈ ಕಾನೂನು ಏಪ್ರಿಲ್ನಲ್ಲಿ ಜಾರಿಗೆ ಬಂದಿತ್ತು. ಮುಖ್ಯವಾಗಿ ಇದು ಹಳೆಯ ಪ್ರಕರಣಗಳಿಗೂ ಅನ್ವಯವಾಗುತ್ತದೆ.












Click it and Unblock the Notifications