ತನ್ನ ಕಿಡ್ನಿಯನ್ನೇ ನೀಡಿ ತಮ್ಮನ ಪ್ರಾಣಕ್ಕೆ ರಕ್ಷೆಯಾದ ಅಕ್ಕ
ಆಗ್ರಾ, ಆಗಸ್ಟ್ 8: ರಕ್ಷಾಬಂಧನ ಅಂದರೆ ತಮ್ಮ ಸೋದರಿಯರನ್ನು ಕಾಪಾಡಲು ಅಣ್ಣ- ತಮ್ಮಂದಿರು ನೀಡುವ ಅಭಯ. ಆದರೆ ರಕ್ಷಾ ಬಂಧನಕ್ಕೆ ಒಂದು ದಿನ ಮೊದಲು ಅಕ್ಕ ತನ್ನ ತಮ್ಮನ ಜೀವ ಉಳಿಸಿಕೊಂಡ ಹೆಮ್ಮೆಯಲ್ಲಿದ್ದಾರೆ. ಅದಕ್ಕಾಗಿ ಕಿಡ್ನಿಯನ್ನೇ ತಮ್ಮನಿಗೆ ದಾನ ಮಾಡಿದ್ದಾರೆ.
ನಲವತ್ತೆಂಟು ವರ್ಷದ ವಂದನಾ ಚಂದ್ರ ಅವರು ಮೂವತ್ತೆಂಟು ವರ್ಷದ ವಿವೇಕ್ ಸಾರಾಭಾಯ್ ಗೆ ಕಿಡ್ನಿ ನೀಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ವಿವೇಕ್ ರ ಎರಡು ಕಿಡ್ನಿ ನಿಷ್ಕ್ರಿಯವಾಗಿದ್ದವು. ಭಾನುವಾರ ವಿವೇಕ್ ಆಸ್ಪತ್ರೆಯಿಂದ ಬಿಡುಗಡೆ ಆಗಿ ತಮ್ಮ ಅಕ್ಕನ ಜತೆಗೆ ರಕ್ಷಾ ಬಂಧನ ಆಚರಿಸಿದ್ದಾರೆ.

"ನಾವು ಹಲವು ಆಸ್ಪತ್ರೆಗಳಲ್ಲಿ ಪ್ರಯತ್ನಿಸಿದೆವು. ಆದರೆ ದಾನಿಗಳು ಯಾರೂ ಸಿಗಲಿಲ್ಲ. ಕುಟುಂಬ ಸದಸ್ಯರ ಹಲವು ಪ್ರಯತ್ನಗಳು ಕೂಡ ಸಫಲವಾಗಲಿಲ್ಲ. ನನ್ನ ಸ್ಥಿತಿ ತೀರಾ ಗಂಭೀರವಾಗುತ್ತಾ ಹೋಯಿತು. ನನ್ನ ಬಳಿ ಸಮಯ ತುಂಬ ಕಡಿಮೆಯಿತ್ತು" ಎಂದು ಸಾರಾಭಾಯ್ ಅವರು ತಮ್ಮ ಸ್ಥಿತಿ ಬಗ್ಗೆ ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ.
ಆ ನಂತರ ನನ್ನ ಸೋದರಿ ತಾನಾಗಿಯೇ ಮುಂದೆ ಬಂದರು. ಆಕೆ ನನಗೆ ಎರಡನೇ ಜನ್ಮ ನೀಡಿದರು ಎಂದು ಅವರು ಹೇಳಿದ್ದಾರೆ. ವಂದನಾ ಚಂದ್ರ ಅವರ ನಿರ್ಧಾರ ಕೂಡ ಸಲೀಸು ಅಂತೇನಿರಲಿಲ್ಲ. ಅವರಿಗೆ ಸ್ವಂತ ಕುಟುಂಬವಿದೆ. ಪತಿ ಪುನೀತ್ ಚಂದ್ರ ಸಿವಿಲ್ ಎಂಜಿನಿಯರ್. ಈ ದಂಪತಿಗೆ ಹನ್ನೆರಡು ವರ್ಷದ ಮಗಳಿದ್ದಾಳೆ.
ನನ್ನ ತಮ್ಮ ಅಂದರೆ ತುಂಬ ಪ್ರೀತು. ನನ್ನ ಕಷ್ಟದ ಸಮಯದಲ್ಲಿ ಜತೆಗೆ ಇದ್ದವನು. ನಾನು ಗರ್ಭಿಣಿಯಾಗಿದ್ದಾಗ ಅಡೂಗೆ ಮಾಡುವುದು ಸೇರಿದಂತೆ ಬೇರೆ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದ. ಅವನನ್ನು ಉಳಿಸಿಕೊಳ್ಳೋದು ನನ್ನ ಆದ್ಯತೆ ಆಗಿತ್ತು. ಈ ವರ್ಷದ ರಕ್ಷಾಬಂಧನ ನನ್ನ ಪಾಲಿಗೆ ತುಂಬ ಮುಖ್ಯವಾದದ್ದು. ವಿವೇಕ್ ಗೆ ಮತ್ತೊಂದು ಜನ್ಮ ಸಿಕ್ಕಿದೆ. ಸಾವಿಂದ ಆಚೆ ಬಂದಿದ್ದಾನೆ ಎಂದು ವಂದನಾ ಹೇಳಿದ್ದಾರೆ.
ಕಳೆದ ಮಾರ್ಚ್ ಎಂಟರಂದು ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಸಾರಾಭಾಯ್ ಅವರ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಆಯಿತು. ಆ ನಂತರದ ಚಿಕಿತ್ಸೆ ಹಾಗೂ ಚೇತರಿಕೆ ನಂತರ ಮೊನ್ನೆ ಭಾನುವಾರ ಡಿಸ್ ಚಾರ್ಜ್ ಆದರು. ಅಲ್ಲಿಂದ ವಾಪಸಾದ ನಂತರ ತಮ್ಮಿಬ್ಬರು ಸೋದರಿಯರ ಜತೆಗೆ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ.











Click it and Unblock the Notifications