ಕಾಶಿ ವಿಶ್ವನಾಥ ದೇವಸ್ಥಾನ ಉಡಾಯಿಸುವುದಾಗಿ ಉಗ್ರರ ಬೆದರಿಕೆ
ಲಖನೌ, ಜೂನ್ 6: ಕಾಶಿ ವಿಶ್ವನಾಥ ದೇವಸ್ಥಾನ ಸೇರಿದಂತೆ ಉತ್ತರಪ್ರದೇಶದ ವಾರಣಾಸಿಯ ವಿವಿಧೆಡೆ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ ಬೆದರಿಕೆ ಹಾಕಿದೆ.
ಉಗ್ರರ ದಾಳಿಯ ಬೆದರಿಕೆ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೆಡೆ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ವಾರಣಾಸಿ ಕಾಶಿ ವಿಶ್ವನಾಥ ದೇವಸ್ಥಾನ, ಕೃಷ್ಣ ಜನ್ಮಭೂಮಿ, ಹಾಪುರ್ ಮತ್ತು ಶಹರಾನ್ಪುರ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ದಾಳಿಗಳನ್ನು ನಡೆಸುವುದಾಗಿ ಲಷ್ಕರ್ ರವಾನಿಸಿರುವ ಪತ್ರದಲ್ಲಿ ಬೆದರಿಕೆ ಹಾಕಿದೆ ಎಂದು ವರದಿ ತಿಳಿಸಿದೆ.

ಜೂನ್ 6, 8 ಮತ್ತು 10ರಂದು ಈ ಪ್ರಸಿದ್ಧ ಸ್ಥಳಗಳನ್ನು ಬಾಂಬ್ನಿಂದ ಉಡಾಯಿಸುತ್ತೇವೆ ಎಂದು ಬೆದರಿಸಲಾಗಿದೆ. ಈ ಪತ್ರದ ಅಧಿಕೃತತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪತ್ರ ಬಂದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯು ಎಚ್ಚರಿಕೆ ಘೋಷಿಸಿದ್ದು, ರಾಜ್ಯ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ. ಪ್ರಮುಖ ಧಾರ್ಮಿಕ, ಪ್ರವಾಸಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಲಷ್ಕರ್ ಎ ತಯಬಾ ಏರಿಯಾ ಕಮಾಂಡರ್ ಮೌಲಾನಾ ಅಂಬು ಶೇಖ್ ಅವರ ಹೆಸರಿನ ಸಹಿ ಇದೆ.
ರಾಜಧಾನಿ ಲಖನೌ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ಮತ್ತು ಗಸ್ತನ್ನು ಹೆಚ್ಚಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ರೀತಿ ಹುಸಿ ಬೆದರಿಕೆ ಪತ್ರ ಬರೆದಿರುವ ಸಾಧ್ಯತೆ ಇರುವುದರಿಂದ ಜನರು ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
2010ರ ಡಿಸೆಂಬರ್ ತಿಂಗಳಿನಲ್ಲಿ ಪ್ರಸಿದ್ಧ ದಶಶ್ವಮೇಧ ಘಾಟ್ ಸಮೀಪದ ಶೀತ್ಲಾ ಘಾಟ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ದಾಳಿಯ ಹೊಣೆ ಹೊತ್ತುಕೊಂಡಿತ್ತು.












Click it and Unblock the Notifications