KSRTC: ಕೆಎಸ್ಆರ್ಟಿಸಿ ಡ್ರೈವಿಂಗ್ ಸ್ಕೂಲ್, 6 ತಿಂಗಳಿನಲ್ಲಿ 55 ಲಕ್ಷ ರೂ. ಆದಾಯ
ತಿರುವನಂತಪುರ, ಫೆಬ್ರವರಿ 11: ಕೆಎಸ್ಆರ್ಟಿಸಿಯ ಡ್ರೈವಿಂಗ್ ಸ್ಕೂಲ್ ಕಾರ್ಯಕ್ರಮ ಸಂಸ್ಥೆಗೆ ಆದಾಯವನ್ನು ತಂದುಕೊಡುತ್ತಿದೆ. ಕರ್ನಾಟಕದಲ್ಲಿ ನಿಗಮದ ಆರ್ಥಿಕ ನಷ್ಟ ಭರಿಸಲು ಪ್ರಯಾಣ ದರ ಏರಿಕೆ ಮಾಡಿರುವಾಗ, ಪಕ್ಕದ ರಾಜ್ಯ ಟಿಕೆಟ್ ರಹಿತ ಆದಾಯ ಸಂಗ್ರಹಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಆರಂಭಿಸಿರುವ 9 ಡ್ರೈವಿಂಗ್ ಸ್ಕೂಲ್ಗಳು ಆರು ತಿಂಗಳಿನಲ್ಲಿ 55 ಲಕ್ಷ ರೂ. ಆದಾಯ ತಂದಿವೆ.
ಕೇರಳ ರಸ್ತೆ ಸಾರಿಗೆ ನಿಗಮ ಆರ್ಥಿಕ ನಷ್ಟದಿಂದ ಹೊರಬರಲು ವಿವಿಧ ಯೋಜನೆ ರೂಪಿಸುತ್ತಿದೆ. ಈ ಡ್ರೈವಿಂಗ್ ಸ್ಕೂಲ್ ಕಾರ್ಯಕ್ರಮ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಆದರೆ ಇದಕ್ಕೆ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಕೆಎಸ್ಆರ್ಟಿಸಿ ಮಾಹಿತಿಯಂತೆ ಕೇವಲ ಆರು ತಿಂಗಳಿನಲ್ಲಿ ಡ್ರೈವಿಂಗ್ ಸ್ಕೂಲ್ ಕಾರ್ಯಕ್ರಮ ನಿಗಮಕ್ಕೆ 55 ಲಕ್ಷ ರೂ. ಆದಾಯ ತಂದಿದೆ. ಈಗ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಅಭ್ಯರ್ಥಿಗಳು ನೋಂದಣಿ ಮಾಡುತ್ತಿರುವ ಕಾರಣ ಇನ್ನಷ್ಟು ಶಾಲೆಗಳನ್ನು ತೆರೆಯಲು ನಿಗಮ ಮುಂದಾಗಿದೆ.
ಎಷ್ಟು ಶುಲ್ಕ ನಿಗದಿ ಮಾಡಲಾಗಿದೆ: ತಿರುವನಂತಪುರಂ ಸಿಬ್ಬಂದಿಗಳ ತರಬೇತಿ ಶಾಲೆ ಸೇರಿದಂತೆ ಕೇರಳ ರಾಜ್ಯದಲ್ಲಿ ಕೆಎಸ್ಆರ್ಟಿಸಿ 9 ಪ್ರದೇಶಗಳಲ್ಲಿ ಡ್ರೈವಿಂಗ್ ಸ್ಕೂಲ್ ಆರಂಭಿಸಿದೆ. ಈಗ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ಎದುರಿಸಲು ಇನ್ನೂ ಒಂದು ವರ್ಷ ಕಾಯಬೇಕಿದೆ. ಮಾರ್ಚ್ನಲ್ಲಿ ಇನ್ನೂ ಎರಡು ಶಾಲೆ ಆರಂಭವಾಗಲಿದೆ.
ಈ ಶಾಲೆಯಲ್ಲಿ ವಾಣಿಜ್ಯ ವಾಹನಗಳ ಡ್ರೈವಿಂಗ್ ತರಬೇತಿ ಲೈಸೆನ್ಸ್ ನೀಡಲು 9 ಸಾವಿರ ರೂ. ಮತ್ತು ದ್ವಿಚಕ್ರ ವಾಹನಗಳ ಬೈಕ್ ತರಬೇತಿ, ಲೈಸೆನ್ಸ್ಗೆ 3 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ. ಎರಡೂ ಲೈಸೆನ್ಸ್ ಒಟ್ಟಿಗೆ ಬೇಕು ಎನ್ನುವವರು 11 ಸಾವಿರ ರೂ. ಪಾವತಿಸಬೇಕು.
ತರಬೇತಿಯ ಅವಧಿ 20 ತರಗತಿಗಳು. ದ್ವಿ ಚಕ್ರ ವಾಹನಕ್ಕೆ 30 ತರಗತಿಗಳು. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ತರಗತಿಗಳ ಸಮಯ ನಿಗದಿ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. 700 ಜನರು ಈಗಾಗಲೇ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಕೆಎಸ್ಆರ್ಟಿಸಿ ಡ್ರೈವಿಂಗ್ ಸ್ಕೂಲ್ನಲ್ಲಿ ತರಬೇತಿ ಪಡೆಯಲು ನೂರಾರು ಜನರು ನೋಂದಣಿ ಮಾಡಿದ್ದಾರೆ. 22 ಕಾರು ಮತ್ತು 32 ಬೈಕ್ಗಳನ್ನು ಸದ್ಯ ಡ್ರೈವಿಂಗ್ ಶಾಲೆಗಳು ಹೊಂದಿವೆ. ಕೆಎಸ್ಆರ್ಟಿಸಿ ಬಸ್ ಓಡಿಸುವ ನುರಿತ ಚಾಲಕರು ಈ ತರಬೇತಿಯನ್ನು ನೀಡಲಿದ್ದಾರೆ.
ಕಳೆದ 5 ವರ್ಷಗಳಿಂದ ಭಾರೀ ವಾಹನಗಳನ್ನು ಓಡಿಸಿರುವ, ಲೈಸೆನ್ಸ್ ಹೊಂದಿರುವವರನ್ನು ತರಬೇತಿ ನೀಡಲು ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗುತ್ತಿದೆ. ಡ್ರೈವಿಂಗ್ ಸ್ಕೂಲ್ಗೆ ಬಂದಿರುವ 55 ಲಕ್ಷ ಆದಾಯದಲ್ಲಿ ಖರ್ಚು ಕಳೆದು 33 ಲಕ್ಷ ಉಳಿತಾಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ 'ಶಕ್ತಿ' ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಬಳಿಕ ಸಾರಿಗೆ ನಿಗಮಕ್ಕೆ ಆಗುತ್ತಿರುವ ನಷ್ಟ ಕಡಿಮೆ ಮಾಡಲು ಪ್ರಯಾಣ ದರ ಏರಿಕೆ ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದಂತೆ ರಾಜ್ಯದಲ್ಲಿ ಸರ್ಕಾರಿ ಬಸ್ ಪ್ರಯಾಣ ದರವನ್ನು ಜನವರಿ 5ರಿಂದಲೇ ಜಾರಿಗೊಳಿಸಲಾಗಿದೆ.
ಟಿಕೆಟ್ ರಹಿತ ಆದಾಯ ಸಂಗ್ರಹ ಮಾಡುವ ಬದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಿಸಲಾಗಿದೆ.












Click it and Unblock the Notifications