ದಾಭೋಲ್ಕರ್ ಹತ್ಯೆಯ 5 ವರ್ಷದ ನಂತರ ಪ್ರಮುಖ ಆರೋಪಿ ಬಂಧನ
ಔರಂಗಾಬಾದ್, ಆಗಸ್ಟ್ 18 : ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಇಂದು ಪ್ರಮುಖ ಶಂಕಿತ ಆರೋಪಿ ಸಚಿನ್ ಪ್ರಕಾಶ್ ರಾವ್ ಅಂಡುರೆ ಎಂಬುವವನನ್ನು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಬಂಧಿಸಿದ್ದಾರೆ.
ಮೂಢನಂಬಿಕೆ ಮತ್ತು ಮಾಟಮಂತ್ರದ ವಿರುದ್ಧ ಹೋರಾಟ ನಡೆಸಿದ್ದ ವಿಚಾರವಾದಿ, ಲೇಖಕ, ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಧ್ಯಕ್ಷ ನರೇಂದ್ರ ಅಚ್ಯುತ್ ದಾಬೋಲ್ಕರ್ (67) ಅವರನ್ನು 2013ರ ಆಗಸ್ಟ್ 20ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.
ಸರಿಯಾಗಿ 5 ವರ್ಷಗಳ ನಂತರ ಪ್ರಮುಖ ಆರೋಪಿಯ ಬಂಧಿನ, ಕರ್ನಾಟಕದ ಸಂಶೋಧಕ ಮತ್ತು ವಿಚಾರವಾದಿ ಡಾ. ಎಂಎಂ ಕಲಬುರ್ಗಿ, ಎಡಪಂಥೀಯ ರಾಜಕಾರಣಿ ಗೋವಿಂದ್ ಪನ್ಸಾರೆ, ಕನ್ನಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮೇಲೆಯೂ ಬೆಳಕು ಚೆಲ್ಲುವ ಸಾಧ್ಯತೆಯಿದೆ.

ಐದು ವರ್ಷಗಳ ನಂತರವೂ ನರೇಂದ್ರ ದೋಭೋಲ್ಕರ್ ಹತ್ಯೆ ಮಾಡಿದವರನ್ನು ಬಂಧಿಸಲು ತನಿಖೆ ನಡೆಸಲು ವಿಫಲವಾಗಿದ್ದ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳ ಮೇಲೆ ಮುಂಬೈ ಹೈಕೋರ್ಟ್ ಕೆಂಡ ಕಾರಿತ್ತು. ಇದಾದ ಕೆಲವೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ದಾಭೋಲ್ಕರ್ ಅವರಿಗೆ 1983ರಿಂದಲೇ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ, ಅವರು ಪೊಲೀಸ್ ರಕ್ಷಣೆಯನ್ನು ನಿರಾಕರಿಸಿದ್ದರು. 2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆ 7.20ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತರಿಬ್ಬರು ದಾಭೋಲ್ಕರ್ ಮೇಲೆ ಅತಿ ಹತ್ತಿರದಿಂದ ಗುಂಡಿನ ಮಳೆ ಸುರಿಸಿದ್ದರು.











Click it and Unblock the Notifications