ಕೇರಳ: ಯುವಕನ ಜೀವ ಬಲಿ ಪಡೆದುಕೊಂಡ 'ನೈತಿಕ ಪೊಲೀಸ್' ಗಿರಿ
ಪ್ರೇಮಿಗಳ ದಿನದಂದು ನಡೆದ ನೈತಿಕ ಪೊಲೀಸ್ ಗಿರಿ ಹಾಗೂ ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ನಡೆದ ಅವಮಾನಕ್ಕೆ ಬೇಸತ್ತು, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಲ್ಲಂ, ಫೆಬ್ರವರಿ 24: ಪ್ರೇಮಿಗಳ ದಿನದಂದು ನಡೆದ ನೈತಿಕ ಪೊಲೀಸ್ ಗಿರಿ ಹಾಗೂ ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ನಡೆದ ಅವಮಾನಕ್ಕೆ ಬೇಸತ್ತು, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೂಲಿ ಕಾರ್ಮಿಕರೊಬ್ಬರ ಮಗನಾಗಿರುವ 23 ವರ್ಷದ ಅನೀಶ್ ತನ್ನ ಗೆಳೆತಿಯೊಂದಿಗೆ ಪ್ರೇಮಿಗಳ ದಿನ (ಫೆ.14) ಅಝೀಕಲ್ ಬೀಚಿಗೆ ಹೋಗಿದ್ದ. ಅಲ್ಲಿಗೆ ಬಂದ ತಂಡವೊಂದು ಜೋಡಿಯನ್ನು ತಳಿಸಿದ್ದೂ ಅಲ್ಲದೆ ವಿಡಿಯೋ ರೆಕಾರ್ಡ್ ಕೂಡಾ ಮಾಡಿತ್ತು. ವಿಡಿಯೋದಲ್ಲಿ ಜೋಡಿಗಳು ಹೊಡೆಯದಂತೆ ಬೇಡಿಕೊಳ್ಳುವುದೂ ರೆಕಾರ್ಡ್ ಆಗಿದೆ.[ಮಹಾದೇವಿಗೆ ಸಂಸದರಿಂದಲೂ ಹರಿದುಬಂದ ಸಹಾಯಹಸ್ತ]
ಈ ವಿಡಿಯೋವನ್ನು ದುರುಳರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಯುವಕ ಯುವತಿಯ ಮಾನಹರಣ ಮಾಡಿದ್ದರು. ಈ ಕುರಿತು ಅನೀಶ್ ತನಗೆ ಹೊಡೆದವರ ಮೇಲೆ ಕೇಸು ಕೂಡಾ ದಾಖಲಿಸಿದ್ದ. ಇದಾದ ನಂತರ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.[ಮಲಯಾಳಿ ನಟಿ ಮೇಲೆ ದೌರ್ಜನ್ಯ : ಆರೋಪಿ ನಂ.1 ಪಲ್ಸರ್ ಸುನಿ ಅರೆಸ್ಟ್]
ಆದರೆ ವಿಡಿಯೋದಿಂದ ಮರ್ಯಾದೆಗೆ ಅಂಜಿ ಯುವಕ ಮನೆಯಿಂದ ಹೊರ ಬಂದಿರಲಿಲ್ಲ ಎನ್ನಲಾಗಿದೆ. ಕೊನೆಗೆ ಅವಮಾನದಿಂದ ಬೇಸತ್ತ ಯುವಕ ಕೊಲ್ಲಂನ ತನ್ನ ಮನೆಯ ಹೊರಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೊರಗಡೆ ಕೆಲಸಕ್ಕೆ ಹೋಗಿದ್ದ ಅನೀಶ್ ತಾಯಿ ಮನೆಗೆ ಮರಳಿದಾಗ ಪಾಲಕ್ಕಾಡ್ ಜಿಲ್ಲೆಯ ಅನಘಟ್ಟದಲ್ಲಿರುವ ತಮ್ಮ ಮನೆ ಪಕ್ಕ ಅನೀಶ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ.
ಅನೀಶ್ ಸಾಯುವ ಮೊದಲು ಸುಸೈಡ್ ನೋಟ್ ಬರೆದಿಟ್ಟಿದ್ದು ಪ್ರೇಮಿಗಳ ದಿನ ನಡೆದ ಘಟನೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದು ರಾಜ್ಯದಲ್ಲಿ ಬೇರೆ ಯಾವುದಾದರೂ ಈ ರೀತಿಯ ಘಟನೆಗಳೂ ನಡೆದಿದೆಯಾ ಎಂದು ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಘಟನೆಗೆ ಪೊಲೀಸ್ ಇಲಾಖೆಯೇ ಬೇಜಾವಬ್ದಾರಿ ವರ್ತನೆಯೇ ಕಾರಣ ಎಂಬ ಆರೋಪಗಳೂ ಕೇಳಿ ಬಂದಿವೆ.