ಮನೆ, ರಸ್ತೆ, ಜೀವ ಹಾನಿ; ಕೇರಳದ ಮಳೆ ಅವಘಡದ 10 ಅಂಕಿ-ಅಂಶಗಳು
ಐದು ದಿನಗಳ ಕಾಲ ಸುರಿದಿದ್ದ ಭೀಕರ ಮಳೆ 1924ರಲ್ಲಿ ಇಂತಹ ಭೀಕರ ಪರಿಸ್ಥಿತಿಯನ್ನು ಕೇರಳದಲ್ಲಿ ತಂದಿತ್ತು ಅಂತ ಹೇಳುತ್ತಿದ್ದಾರೆ. ತೊಂಬತ್ನಾಲ್ಕು ವರ್ಷದ ಹಿಂದೆ ನಡೆದದ್ದು ಯಾರಿಗೆ ನೆನಪಿರಬಹುದು. ಆದರೆ ಈಗ ಸುರಿಯುತ್ತಿರುವ ಮಳೆ ಕನಿಷ್ಠ ಇನ್ನೊಂದೈವತ್ತು ವರ್ಷಕ್ಕೆ ನೆನಪಿರಬಹುದು. ಹಾಗಿದೆ ಮಳೆಯ ಅಟಾಟೋಪ.
ಕೇರಳಕ್ಕೆ ಕೇರಳವೇ ನದಿ-ಸಮುದ್ರದಂತಾಗಿದೆ. ಎಲ್ಲಿ ನೋಡಿದರೂ ನೀರು. ಜತೆಗೆ ಚಚ್ಚಿ ಬಾರಿಸುತ್ತಿರುವ ಮಳೆ. ಹೋದ ಜೀವಗಳ ಲೆಕ್ಕ ಒಂದೊಂದಾಗಿ ಈಚೆ ಬರುತ್ತಿವೆ. ಇದು ತಗ್ಗು ಪ್ರದೇಶ- ಅಲ್ಲಿ ಎತ್ತರ ಎಂಬ ಭೇದವಿಲ್ಲದೆ ಎಲ್ಲೆಂದರಲ್ಲಿ ನೀರು ನುಗ್ಗಿ ಸಾಮ್ರಾಜ್ಯ ಸ್ಥಾಪಿಸಿದೆ. ನೊಂದವರು ಯಾರೆಂದು ನೋಡಿದರೆ ಮಹಿಳೆಯರು, ಮಕ್ಕಳು, ಮಹಿಳೆಯರು ಎಂಬ ಯಾವ ಮುಲಾಜು ಕಾಣುತ್ತಿಲ್ಲ.
ಕೇರಳದ ಮಹಾಮಳೆಯ ನಡುವಲ್ಲೂ ಅಲ್ಲಲ್ಲಿ ಇಣುಕುವ ಮಾನವೀಯತೆ
ಆಗಸ್ಟ್ ಹದಿನೈದನೇ ತಾರೀಕಿನವರೆಗೆ ಮಳೆ ಹೀಗೇ ಮುಂದುವರಿಯಬಹುದು ಎಂಬುದು ಹವಾಮಾನ ತಜ್ಞರ ಮುನ್ಸೂಚನೆ. ಈಗಾಗಲೇ ಇನ್ನೂರಕ್ಕೂ ಹೆಚ್ಚು ಕಡೆ ಭೂ ಕುಸಿತದ ವರದಿಯಾಗಿದೆ. ಆಗಸ್ಟ್ ಎಂಟನೇ ತಾರೀಕಿನಿಂದ ಈಚೆಗೆ ಮಳೆಯು ಮಾಡಿರುವ ಅನಾಹುತ ಇದೆಯಲ್ಲಾ, ಅದೇ ಒಂದು ತೂಕದ್ದು. ಕೇರಳದಲ್ಲಿ ಏನಾಗಿದೆ ಎಂದು ಹೇಳುವ ಅಂಕಿ-ಅಂಶದ ವರದಿಯೊಂದು ನಿಮ್ಮ ಮುಂದಿದೆ.
ನಷ್ಟದ ಪ್ರಮಾಣ 8,316 ಕೋಟಿ ರುಪಾಯಿ
"ಈ ಪ್ರಾಕೃತಿಕ ವಿಕೋಪದ ಪರಿಣಾಮ ದೀರ್ಘ ಕಾಲ ಅನುಭವಿಸಬೇಕಾಗುತ್ತದೆ. ಪ್ರಾಥಮಿಕವಾಗಿ ಅಂದಾಜು ಮಾಡಿರುವಂತೆ 20,000 ಮನೆಗಳು ಪೂರ್ತಿಯಾಗಿ ಹಾನಿಗೊಳಗಾಗಿವೆ. 10,000 ಕಿ.ಮೀ.ನಷ್ಟು ರಾಜ್ಯದ ಲೋಕೋಪಯೋಗಿ ರಸ್ತೆಗಳು ಹಾನಿಯಾಗಿವೆ. ಇನ್ನು ಈ ಹಂತದಲ್ಲಿ ಅಂದಾಜು ಮಾಡಿರುವಂತೆ ನಷ್ಟದ ಪ್ರಮಾಣ 8,316 ಕೋಟಿ ರುಪಾಯಿ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
27 ಡ್ಯಾಮ್ ಗಳ ಎಲ್ಲ ಬಾಗಿಲು ತೆರೆದು ಬಿಟ್ಟಾಗಿದೆ
ಕೇರಳದ ಕನಿಷ್ಠ 10 ಜಿಲ್ಲೆಗಳ ಮೇಲೆ ಈ ಮಳೆಯಿಂದ ಗಂಭೀರವಾದ ಪರಿಣಾಮವಾಗಿದೆ. ವಿಪರೀತ ಮಳೆಯ ಕಾರಣಕ್ಕೆ ನೀರಿನ ಮಟ್ಟ ಗರಿಷ್ಠ ಪ್ರಮಾಣ ಮುಟ್ಟುವುದಕ್ಕೆ ಸಮೀಪದಲ್ಲಿ ಇರುವುದರಿಂದ ರಾಜ್ಯದಲ್ಲಿರುವ 27 ಡ್ಯಾಮ್ ಗಳ ಎಲ್ಲ ಬಾಗಿಲನ್ನೂ ತೆರೆಯಲಾಗಿದೆ.
ಕೇರಳ: ಇಡುಕ್ಕಿ ಜಲಾಶಯದ ಎಲ್ಲಾ 5 ಗೇಟ್ ಓಪನ್!
ವಿಶೇಷ ಪ್ಯಾಕೇಜ್ ಪಡೆಯುವ ಪ್ರಯತ್ನ
ರಸ್ತೆಗಳಿಗೆ ಸಿಕ್ಕಾಪಟ್ಟೆ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಎಲ್ಲವೂ ಹಾನಿಗೊಳಗಾಗಿವೆ. ರಸ್ತೆ ಸರಿಪಡಿಸುವುದಕ್ಕೆ ವಿಶೇಷ ಪ್ಯಾಕೇಜ್ ಪಡೆಯುವ ಪ್ರಯತ್ನದಲ್ಲಿದ್ದೇವೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಜೀವನ್ ಬಾಬು ಹೇಳಿದ್ದಾರೆ.
ಕೇಂದ್ರದಿಂದ 100 ಕೋಟಿ ಹೆಚ್ಚುವರು ನೆರವು
ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಮಾತನಾಡಿ, ಅಗತ್ಯ ಇರುವ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ. ಜತೆಗೆ ಕೇರಳಕ್ಕೆ ಹೆಚ್ಚುವರಿಯಾಗಿ ನೂರು ಕೋಟಿ ರುಪಾಯಿ ನೀಡುವುದಾಗಿ ಕೂಡ ತಿಳಿಸಿದ್ದಾರೆ.
ಕೇರಳ ನೆರೆ ಪೀಡಿತರ ನೆರವಿಗೆ ತಿಂಗಳ ವೇತನ ನೀಡಿದ ರೇವಣ್ಣ, ಉಗ್ರಪ್ಪ
ಕರ್ನಾಟಕ ರಾಜ್ಯ ಸರಕಾರದಿಂದ 10 ಕೋಟಿ ನೆರವು
ಕೇರಳ ಮಳೆ ಪರಿಹಾರ ನಿಧಿಗೆ ಕರ್ನಾಟಕ ರಾಜ್ಯ ಸರಕಾರವು 10 ಕೋಟಿ ರುಪಾಯಿ, ತಮಿಳುನಾಡಿನಲ್ಲಿನ ವಿರೋಧ ಪಕ್ಷ ಡಿಎಂಕೆ 1 ಕೋಟಿ, ನಟ-ರಾಜಕಾರಣಿ ಕಮಲ್ ಹಾಸನ್ ಮತ್ತು ವಿಜಯ್ ಟಿವಿ 50 ಲಕ್ಷ ದೇಣಿಗೆ ಕೊಟ್ಟಿರುವುದು ಸುದ್ದಿಯಾಗಿದೆ.
ಉಚಿತವಾಗಿ ಪಾಸ್ ಪೋರ್ಟ್ ಬದಲಾವಣೆ
ಈ ಮಳೆಯಲ್ಲಿ ಪಾಸ್ ಪೋರ್ಟ್ ಹಾನಿಯಾದವರಿಗೆ ಕೇಂದ್ರ ಸರಕಾರದಿಂದ ಉಚಿತವಾಗಿ ಬದಲಾವಣೆ ಮಾಡಿಕೊಡುವುದಾಗಿ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.
ವೈರಲ್ ವಿಡಿಯೋ: ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ!
60 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರ ಶಿಬಿರದಲ್ಲಿ
ಇದೀಗ ಬಂದಿರುವ ಅಧಿಕೃತ ಅಂಕಿ-ಅಂಶದ ಪ್ರಕಾರವೇ ಹೇಳಬೇಕು ಅಂದರೆ, ಮಹಿಳೆಯರು-ಮಕ್ಕಳು- ಹಿರಿಯರು ಸೇರಿದಂತೆ 60 ಸಾವಿರಕ್ಕೂ ಹೆಚ್ಚು ಮಂದಿಯನ್ನು 14 ಜಿಲ್ಲೆಗಳಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ಇರಿಸಲಾಗಿದೆ.
6 ಜಿಲ್ಲೆಗಳಲ್ಲಂತೂ ಪರಿಸ್ಥಿತಿ ಗಂಭೀರ
ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಪ್ರಮುಖ ಆರು ಜಿಲ್ಲೆಗಳಾದ ತ್ರಿಶೂರ್, ಎರ್ನಾಕುಲಂ, ಅಲೆಪ್ಪಿ, ವಯ್ನಾಡ್, ಕೋಳಿಕ್ಕೊಡ್ ಹಾಗೂ ಇಡುಕ್ಕಿಯಲ್ಲಿ ಒಟ್ಟಾರೆ 320 ಶಿಬಿರಗಳನ್ನು ತೆರೆಯಲಾಗಿದೆ.
ಯೋಧರಿಂದ ರಕ್ಷಣಾ ಕಾರ್ಯಾಚರಣೆ
ಸೇನೆಯ ಯೋಧರು, ಮದ್ರಾಸ್ ರೆಜಿಮೆಂಟ್ ನವರು, ನೌಕಾ ದಳ, ವಾಯು ಸೇನೆ, ಎನ್ ಡಿಆರ್ ಎಫ್ ನ ಹದಿನಾಲ್ಕು ತಂಡಗಳು ತ್ರಿಶೂರ್, ಎರ್ನಾಕುಲಂ, ಅಲೆಪ್ಪಿ, ವಯ್ನಾಡ್, ಕೋಳಿಕ್ಕೊಡ್ ಹಾಗೂ ಇಡುಕ್ಕಿಯಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿವೆ.
ಭೂಮಿ ಹಾಗೂ ಮನೆ ಕಳೆದುಕೊಂಡವರಿಗೆ 10 ಲಕ್ಷದವರೆಗೆ ಪರಿಹಾರ
ಮಳೆ ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಮನೆ ಕಳೆದುಕೊಂಡವರಿಗೆ 4 ಲಕ್ಷ ರುಪಾಯಿ, ಭೂಮಿ ಹಾಗೂ ಮನೆ ಎರಡೂ ಕಳೆದುಕೊಂಡವರಿಗೆ 10 ಲಕ್ಷ ರುಪಾಯಿವರೆಗೆ ಪರಿಹಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.