ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ತಿರುವನಂತಪುರಂ, ಆಗಸ್ಟ್ 20: 'ಚಂಡಮಾರುತದ ಸಾಧ್ಯತೆ ಇದೆ, ಸಮುದ್ರಕ್ಕೆ ಇಳಿಯಬೇಡಿ' ಎಂಬ ಎಚ್ಚರಿಕೆಯಿದ್ದರೂ ಅಂದಿನ ಹಿಟ್ಟಿಗೆ ಕಾಸು ಸಂಪಾದಿಸುವ ಅನಿವಾರ್ಯತೆಯಲ್ಲಿ ದೋಣಿಯನ್ನು ನೀರಿಗೆ ತಳ್ಳಿ ಜೀವದ ಹಂಗು ತೊರೆದು ಮೀನುಗಳನ್ನು ಹಿಡಿಯಲು ಹೊರಡುವ ಸಮುದಾಯವಿದು.

ಮಳೆಗಾಲ, ಚಂಡಮಾರುತದಂತಹ ಸಂದರ್ಭಗಳಲ್ಲಿ ಮೀನುಗಾರರ ಬವಣೆ ಹೇಳತೀರದು. ಬಿರುಗಾಳಿ ಮಳೆಯ ಸನ್ನಿವೇಶಗಳಲ್ಲಿ ಕೆಚ್ಚೆದೆಯಿಂದ ದೋಣಿ ನಡೆಸುವ ಹೋರಾಟದ ಬದುಕು ಅವರಿಗೆ ಹೊಸತಲ್ಲ.

ಕೇರಳದ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಲೆಕ್ಕವಿಲ್ಲದಷ್ಟು ಜನರನ್ನು ಕಾಪಾಡುವಲ್ಲಿ ರಕ್ಷಣಾ ತಂಡದಷ್ಟೇ ಮುಖ್ಯಪಾತ್ರ ವಹಿಸಿದವರು ಈ ಮೀನುಗಾರರು.

ತಮಗೆ ಪರಿಚಿತವಲ್ಲದ ಸ್ಥಳಗಳಲ್ಲಿ, ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿದ್ದರೂ ಅದನ್ನು ಲೆಕ್ಕಿಸದೆ ಮೀನುಗಾರರು ತಮ್ಮ ಕೌಶಲ ಬಳಸಿ ನೂರಾರು ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ವಿದ್ಯುತ್ ತಂತಿ ಹಿಡಿದು ಸರ್ಕಸ್

ವಿದ್ಯುತ್ ತಂತಿ ಹಿಡಿದು ಸರ್ಕಸ್

'ಮಳೆ ವಿಪರೀತ ಸುರಿಯುತ್ತಿತ್ತು. ಅಪಾಯ ಇನ್ನೂ ಹೆಚ್ಚಾಗುವವರೆಗೂ ಕಾಯುವಂತಿರಲಿಲ್ಲ. ಆದರೆ, ನಾವು ಕಂಡಿದ್ದು ಆಘಾತಕಾರಿಯಾಗಿತ್ತು. ಹೆಚ್ಚಿನ ದೋಣಿಗಳು ತೀರಬಿಟ್ಟು ಎಲ್ಲೆಲ್ಲೋ ಸಾಗಿದ್ದವು. ರಬ್ಬರ್ ಮರಗಳ ಕೊಂಬೆಗಳನ್ನು ಹಿಡಿದುಕೊಂಡು ಮುಂದೆ ಸಾಗಿ ಆ ದೋಣಿಗಳನ್ನು ಎಳೆದು ತರಬೇಕಾಗಿತ್ತು.

ಕೆಲವೊಮ್ಮೆ ಕರೆಂಟ್ ತಂತಿಗಳಿಗೂ ಜೋತುಬಿದ್ದುಕೊಂಡು ಸಾಗಬೇಕಾಗಿತ್ತು. ಒಬ್ಬರಿಗೆ ಆಕ್ಸಿಜನ್ ಸಿಲಿಂಡರ್ ಕೂಡ ಒದಗಿಸಿದೆವು. ಅನೇಕ ಜನರನ್ನು ಬದುಕಿಸಲು ಸಾಧ್ಯವಾಯಿತು' ಎಂದು ಎಡೆಯರನಮುಲದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವಳಿಯಾವೇಳಿಯ ಮೀನುಗಾರ ಜ್ಯಾಕ್ ಮಂಡೇಲಾ ಘಟನೆಯ ಭೀಕರತೆಯ ಅನುಭವ ಹಂಚಿಕೊಂಡರು.

ಗರ್ಭಿಣಿ ಮತ್ತು ಮಗುವನ್ನು ರಕ್ಷಿಸಿದ ಧನ್ಯತೆ

ಗರ್ಭಿಣಿ ಮತ್ತು ಮಗುವನ್ನು ರಕ್ಷಿಸಿದ ಧನ್ಯತೆ

ಅರ್ದುಂಕಲ್‌ನಿಂದ ಬಂದ ಮೀನುಗಾರರ ತಂಡವನ್ನು ಎರ್ನಾಕುಲಂನ ಆಲಂಗದ ಪಂಚಾಯತ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು.

'ಗ್ರಾಮದಲ್ಲಿ ಹೆಚ್ಚೂ ಕಡಿಮೆ ಪ್ರತಿ ಮನೆಗೂ ಹೋಗಿದ್ದೇವೆ. ಬೆಳಿಗ್ಗೆಯಿಂದ ರಾತ್ರಿ 11.30ವರೆಗೂ ಕೆಲಸ ಮಾಡುತ್ತಿದ್ದೇವೆ. ಕೆಲವು ಮನೆಗಳಲ್ಲಿ ಯಾರೂ ಇದ್ದಂತೆ ಕಾಣುವುದಿಲ್ಲ. ಆದರೆ ನಾವು ಒಳಗೆ ಈಜಿಕೊಂಡು ಹೋಗಿ ಯಾರಾದರೂ ಸಿಲುಕಿಕೊಂಡಿದ್ದಾರಾ ಎಂದು ಕೂಗಿ ಕೇಳುತ್ತಿದ್ದೆವು.

ಹೀಗೆ ಹುಡುಕುವಾಗ ತುಂಬು ಗರ್ಭಿಣಿಯನ್ನು ಮತ್ತು ಆಕೆಯನ್ನು ಅವುಚಿಕೊಂಡಿದ್ದ ಮಗುವೊಂದನ್ನು ರಕ್ಷಿಸಿದೆವು. ನಮ್ಮ ರಕ್ಷಣೆಯ ಕೂಗಿಗೆ ಸ್ಪಂದಿಸದಷ್ಟು ಅವರು ದುರ್ಬಲರಾಗಿದ್ದರು' ಎಂದು ಅರ್ದುಂಕಲ್‌ನ ಮೀನುಗಾರ ಡೊಮಿನಿಕ್ ಥಾಮಸ್ ವಿವರಿಸುವಾಗ ಅವರ ಮುಖದಲ್ಲಿ ಜೀವ ಉಳಿಸಿದ ಧನ್ಯತೆಯಿತ್ತು.

ಜನರನ್ನು ರಕ್ಷಿಸುವ ಕಾರ್ಯದ ವೇಳೆ ಅವರು ಅನೇಕ ಭಯಾನಕ ಘಟನೆಗಳನ್ನೂ ಕಂಡಿದ್ದಾರೆ. ಮಂಜಾಲಿಯ ಮನೆಯೊಂದರಲ್ಲಿ ಮಹಡಿಯ ಮೆಟ್ಟಿಲಿನ ಕಟ್ಟಿಗೆ ಕೈಗಳನ್ನು ಬಿಗಿದು ಕಟ್ಟಿದ್ದ ಮೃತದೇಹವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಜಿಪಿಎಸ್ ಇದ್ದಿದ್ದರಿಂದ ಬಚಾವ್

ಜಿಪಿಎಸ್ ಇದ್ದಿದ್ದರಿಂದ ಬಚಾವ್

ಕೈಕೊಡುವ ಫೋನ್‌ಗಳು ಮತ್ತು ಅಪರಿಚಿತ ಪ್ರದೇಶಗಳು ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಸವಾಲು ಒಡ್ಡುತ್ತಿವೆ. 'ವೇಗವಾಗಿ ಹರಿದು ಬರುವ ನೀರು ಬಹುದೊಡ್ಡ ಸವಾಲು ನೀಡುತ್ತಿವೆ. ನಾವು ಕೆಸರಿನ ಪ್ರವಾಹಕ್ಕೆ ಅಭಿಮುಖವಾಗಿ ಸಾಗಬೇಕಾಗಿತ್ತು.

ಕೆಲವು ಪ್ರದೇಶಗಳು ಕಡಿದಾಗಿದ್ದರಿಂದ ನಾವು ಹಠಾತ್ ಪ್ರವಾಹ ಪರಿಸ್ಥಿತಿಗೆ ಸನ್ನದ್ಧರಾಗಿರಬೇಕಾಗಿತ್ತು. ನಮ್ಮಲ್ಲಿ ಕೆಲವರ ಬಳಿ ಜಿಪಿಎಸ್ ಇತ್ತು. ಇದರಿಂದ ಸಾಕಷ್ಟು ನೆರವಾಯಿತು. ಏಕೆಂದರೆ ನಮಗೆ ನಾವು ಇರುವ ಸ್ಥಳ, ಜನರನ್ನು ರಕ್ಷಿಸಲು ಹೋಗಬೇಕಾಗಿದ್ದ ಸ್ಥಳ ಯಾವುದು ಎಂಬುದೇ ಗೊತ್ತಿರಲಿಲ್ಲ. ಎಲ್ಲೆಡೆಯೂ ನೀರು ತುಂಬಿಕೊಂಡಿತ್ತು. ಆ ಪ್ರದೇಶವನ್ನು ಕಂಡುಹಿಡಿಯಲು ಎಲ್ಲಿಯೂ ನಾಮಫಲಕವೂ ಕಾಣಿಸುತ್ತಿರಲಿಲ್ಲ.

ನಮ್ಮ ತಂಡದ ಸದಸ್ಯರು ಹಂಚಿಹೋಗಿದ್ದರು. ನಮ್ಮ ಬ್ಯಾಟರಿಗಳು ಜೀವ ಕಳೆದುಕೊಂಡಿದ್ದವು. ಪರಸ್ಪರ ಸಂಪರ್ಕಿಸಲೂ ನಮಗೆ ಯಾವುದೇ ಅವಕಾಶವೂ ಸಿಗುತ್ತಿರಲಿಲ್ಲ' ಎಂದು ಅಳಪ್ಪುಳದ ಮೀನುಗಾರ ಜಾಕ್ಸನ್ ಪೊಳ್ಳಾಯಿಲ್ ಅದರ ಸಂಕಷ್ಟಗಳನ್ನು ತೆರೆದಿಟ್ಟರು.

ಹಾನಿಯಾದರೂ ಜೀವ ಉಳಿಸಿದ ಖುಷಿ

ಹಾನಿಯಾದರೂ ಜೀವ ಉಳಿಸಿದ ಖುಷಿ

ಮೀನುಗಾರರ ದೋಣಿಗಳು ತುಂಡಾದ ಮರಗಳು ಮತ್ತು ಕಾಂಕ್ರೀಟ್ ನೆಲದ ಮೇಲೆಲ್ಲ ಸಂಚರಿಸಬೇಕಾಗಿದ್ದರಿಂದ ಅವುಗಳು ಹಾನಿಗೊಳಗಾಗಿವೆ. ಕೆಲವು ದೋಣಿಗಳ ಎಂಜಿನ್‌ಗಳು, ಚೌಕಟ್ಟುಗಳು ಮುರಿದುಹೋಗಿವೆ.

ನಾವು ನಿಭಾಯಿಸಿದ ಕರ್ತವ್ಯದ ಬಗ್ಗೆ ನಮಗೆ ಖುಷಿಯಿದೆ. ಸಾಕಷ್ಟು ಹಾನಿಯಾಗಿವೆ. ಆದರೆ, ಈಗಿನ ಸಂದರ್ಭದಲ್ಲಿ ಮನುಷ್ಯರ ಜೀವವೇ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಮೀನು ಕೆಲಸಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ಪೀಟರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+