ಕೊಚ್ಚಿ ಸೆಕ್ಸ್ ಹಗರಣ ಕೊಚ್ಚೆಯಲ್ಲಿ ಚಿದಂಬರಂ?
ಕೊಚ್ಚಿ, ಆ.22: ದೇವರ ನಾಡು ಕೇರಳದಲ್ಲಿ ಸೋಲಾರ್ ಹಗರಣದ ನಂತರ ಮತ್ತೊಂದು ಹಗರಣ ಅಲ್ಲಿನ ಗಣ್ಯರಿಗೆ ಬಿಸಿ ಮುಟ್ಟಿಸುತ್ತಿದೆ. ಕೊಚ್ಚಿಯ ಸೆಕ್ಸ್ ಹಾಗೂ ಬ್ಲಾಕ್ ಮೇಲ್ ಹಗರಣ ಈಗ ಚರ್ಚೆಗೊಳಗಾಗಿದ್ದು, ಈ ಹಗರಣದ ಪ್ರಮುಖ ಆರೋಪಿಯೊಬ್ಬಳು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ನಮ್ಮ ಗಿರಾಕಿಯಾಗಿದ್ದರು ಎನ್ನುವ ಮೂಲಕ ತಲ್ಲಣ ಉಂಟು ಮಾಡಿದ್ದಾಳೆ. ಕೊಚ್ಚಿಯ ಗ್ಯಾಂಗ್ ಈಗ ಹಲವು ರಾಜಕಾರಣಿಗಳು, ನಟರ ನಿದ್ದೆಗೆಡಿಸುತ್ತಿದೆ.
ಅಸಲಿಗೆ ಇದು ಪಕ್ಕಾ ಸೆಕ್ಸ್ ಡೀಲ್ ಹಗರಣ. ರಾಜ್ಯದ ಪ್ರಮುಖ ಉದ್ಯಮಿಗಳನ್ನು ಗುರುತಿಸಿ ಅವರನ್ನು ಕಾಮದ ಬಲೆಗೆ ಬೀಳಿಸಿಕೊಳ್ಳುವುದು, ಪ್ರತಿಷ್ಠಿತ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ ಹೆಣ್ಣಿನ ಸಾಂಗತ್ಯ ಒದಗಿಸುವುದು. ಇದಾದ ಕೆಲ ದಿನಗಳ ನಂತರ ಬ್ಲಾಕ್ ಮೇಲ್ ಮಾಡಿ ಕೋಟಿಗಟ್ಟಲೇ ಹಣ ಪೀಕುವುದು ಇವರ ಉದ್ಯೋಗವಾಗಿತ್ತು.[ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]
ಬೆದರಿಕೆ ಒಡ್ಡಲು ಇವರ ಬಳಿ ಆಡಿಯೋ ವಿಡಿಯೋ ಸಾಕ್ಷಿಗಳು ಸದಾ ಸಿದ್ಧ ಇರುತ್ತಿತ್ತು. ಇದರ ಹಿಂದಿನ ರುವಾರಿ ಜಯಚಂದ್ರನ್ ಗೆ ಆಸರೆ ನೀಡಿದ್ದು ಕೇರಳದ ಶಾಸಕರ ಭವನ. ನಂತರ ಜಯಚಂದ್ರನ್ ಸೇರಿ ಐವರು ಬಂಧನವಾದರೂ ಜಾಮೀನಿನ ಮೇಲೆ ಹೊರ ಬಂದರು. ಇಬ್ಬರು ಮಹಿಳೆ ಆರೋಪಿಗಳು ಮಾತ್ರ ತಮ್ಮ ಆಡಿಯೋ ಟೇಪ್ ಬಹಿರಂಗಪಡಿಸಿದ್ದು ಅದರಲ್ಲಿ ಕೇಳಿ ಬಂದಿರುವ ಹೆಸರುಗಳು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆವಿ ಥಾಮಸ್, ನಟ ಕಲಾಭವನ್ ಮಣಿ ಸೇರಿದಂತೆ ಅನೇಕ ಗಣ್ಯರ ಹೆಸರುಗಳು ಕೇಳಿ ಬಂದಿವೆ. [ರಾಸಲೀಲೆಗೆ ಪಲ್ಲಂಗವಾದ ಕೇರಳ ಹೌಸ್ ಬೋಟ್]

ಕಾಂಗ್ರೆಸ್ ಶಾಸಕನ ಕಚೇರಿಯಲ್ಲಿದ್ದ ಆರೋಪಿ
ಕೊಚ್ಚಿ ಸೆಕ್ಸ್ ಬ್ಲಾಕ್ ಮೇಲ್ ದಂಧೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಸ್ಟರ್ ಮೈಂಡ್ ಜಯಚಂದ್ರನ್ ಬಚ್ಚಿಟ್ಟುಕೊಳ್ಳಲು ಕಾಂಗ್ರೆಸ್ ಶಾಸಕರೊಬ್ಬರ ಕಚೇರಿಯಲ್ಲಿ ಆಶ್ರಯ ಬಯಸಿದ. ಅಲ್ಲಿಂದ ತಿರುವನಂತಪುರದಲ್ಲಿರುವ ಶಾಸಕರ ಹಾಸ್ಟೆಲ್ ನಲ್ಲಿ ಕಳೆದವಾರ ರೆಸ್ಟ್ ಮಾಡುತ್ತಿದ್ದ. ಕೊನೆಗೆ ಕೇರಳ-ತಮಿಳುನಾಡು ಗಡಿ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು. ನಂತರ ಅಲ್ಲಿಂದ ಕೊಚ್ಚಿಗೆ ಕರೆ ತರಲಾಯಿತು.
ಈ ಬಗ್ಗೆ ಕಾಂಗ್ರೆಸ್ ಶಾಸಕ ಟಿ ಶರತ್ಚಂದ್ರ ಪ್ರಸಾದ್ ಅವರ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಕೇರಳ ಕಾಂಗ್ರೆಸ್ ಅಧ್ಯಕ್ಷ ವಿ.ಎಂ ಸುಧೀರನ್ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಹಿಳಾ ಆರೋಪಿಗಳ ಹೇಳಿಕೆಯೇನು?
ಇವರ ಸೆಕ್ಸ್ ದಂಧೆಗೆ ಕೊಚ್ಚಿ ಪ್ರಮುಖ ಅಡ್ಡವಾಗಿತ್ತು. ಸೆಕ್ಸ್ ಬ್ಲಾಕ್ ಮೇಲ್ ಹಗರಣದ ಅರೋಪಿಗಳಾದ ರುಕ್ಸಾನಾ, ಬಿಂದ್ಯಾಸ್ ಥಾಮಸ್ ಇಬ್ಬರು ತಮ್ಮ ದಂಧೆಗೆ ಗಿರಾಕಿಗಳನ್ನು ಕುದುರಿಸುವಾಗ ಮಾತನಾಡುವುದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರಂತೆ. ಆ ಆಡಿಯೋ ಕ್ಲಿಪ್ಪಿಂಗ್ ಬಹಿರಂಗಗೊಂಡಿದೆ. ಇದರಲ್ಲಿ ಪ್ರಮುಖ ರಾಜಕಾರಣಿಗಳ ಹೆಸರುಗಳು ಕೇಳಿ ಬಂದಿದೆ.
ಆದರೆ, ಪೊಲೀಸ್ ಕಸ್ಟಡಿಯಲ್ಲಿ ನಮಗೆ ಸರಿಯಾದ ಟ್ರೀಟ್ ಮೆಂಟ್ ಸಿಗುತ್ತಿಲ್ಲ ಎಂದು ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಪ್ರಮುಖ ರಾಜಕಾರಣಿಗಳು, ಗಣ್ಯರಿಂದ ಬೆದರಿಕೆ ಕರೆ ಬಂದಿದೆ ಎಂದಿದ್ದಾರೆ.

ಮಹಿಳೆಯರು ಮತ್ತೆ ಬಂಧನವಾದ್ರು ಏಕೆ?
ಕಳೆದ ಶನಿವಾರ ಮತ್ತೊಮ್ಮೆ ಈ ಇಬ್ಬರು ಆರೋಪಿಗಳು ಸುದ್ದಿಯಲ್ಲಿದ್ದರು. ಬಿಂದಿಯಾ ಥಾಮಸ್(32) ಹಾಗೂ ರುಕ್ಸಾನಾ ಬಿ ದಾಸ್ (29) ಬಂಧಿಸಲಾಯಿತು. ರವೀಂದ್ರನ್ ಎಂಬ ತಿರುವನಂತಪುರಂ ಮೂಲದ ಉದ್ಯಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧನವಾಗಿದ್ದಾರೆ.

ಜಯಚಂದ್ರನ್ ಹೇಳಿದಂತೆ ನಾವು ಕೇಳಿದೆವು
ಜಯಚಂದ್ರನ್ ಹೇಳಿದಂತೆ ನಾವು ಕೇಳಿದೆವು. ಕರೆ ಮಾಡುವುದು, ರೆಕಾರ್ಡ್ ಮಾಡುವುದು ನಮಗೆ ಕಲಿಸಿಕೊಟ್ಟಿದ್ದ. ಚಿದಂಬರಂ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಕರೆ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಈ ಮಾಹಿತಿ ಪಡೆದು ಜಯಚಂದ್ರನ್ ಅವರ ಲ್ಯಾಪ್ ಟ್ಯಾಪ್ ಸರ್ಚ್ ಮಾಡಿದಾಗ ಅಲ್ಲಿ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು, ನಟರ ಚಿತ್ರಗಳು ಕಂಡು ಬಂದಿವೆ.

ಆರೋಪಿಗಳ ಬಲೆಗೆ ಬೀಳಿಸಿದ ಎನ್ನಾರೈ
ಪಲರಿವಟ್ಟಂ ಬೈಪಾಸ್ ಬಳಿ ಎನ್ನಾರೈ ಗಿರಾಕಿಯೊಬ್ಬರನ್ನು ಭೇಟಿ ಮಾಡಿ ಹಣ ಪಡೆಯಲು ಬಂದಿದ್ದ ರುಕ್ಸಾನಾಳನ್ನು ಪೊಲೀಸರು ಬಲೆಗೆ ಕೆಡವಿಕೊಂಡಿದ್ದಾರೆ. ನಂತರ ಬಿಂದಿಯಾ ಥಾಮಸ್ ಬಂಧಿಸಿ ವಿಡಿಯೋ ಸಿಡಿ, ಆಡಿಯೋ ರೆಕಾರ್ಡ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳುವುದು, ಹೋಟೆಲ್ ನಲ್ಲಿ ರಾಸಲೀಲೆ, ಆನಂತರ ಬೆದರಿಕೆ ಕರೆ ಎಲ್ಲಕ್ಕೂ ಸಾಕ್ಷಿ ಸಿಕ್ಕಿದೆ.
ರುಕ್ಸಾನಾ ಅವರ ಜೊತೆ ಸುಖ ಪಡೆದ ಮೇಲೆ ಕೈಕೊಡಲು ಯತ್ನಿಸಿದ್ದ ಎನ್ನಾರೈ ವ್ಯಕ್ತಿ ಇವರ ಬೆದರಿಕೆಗೆ ಹೆದರಿ ಪೊಲೀಸರ ಮೊರೆ ಹೊಕ್ಕಿದ್ದಾನೆ. ಬಲೆ ಬೀಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications