ಕೇಜ್ರಿವಾಲ್ಗೆ ಯೋಗಗುರು ಬಹಿರಂಗ ಸವಾಲ್
ನಾಗಪುರ, ಮಾ 17: ನರೇಂದ್ರ ಮೋದಿಯ ಪರಮಭಕ್ತ ಯೋಗ ಗುರು ಬಾಬಾ ರಾಮದೇವ್ ಆಮ್ ಆದ್ಮಿ ನೇತಾರ ಅರವಿಂದ್ ಕೇಜ್ರಿವಾಲ್ ಅವರಿಗೆ ಒಂದು ಸವಾಲು ಹಾಕಿದ್ದಾರೆ. ಏ ಸವಾಲ್ ಕೊ ಜವಾಬ್ ದೋ ಭೈ.. ಎಂದಿದ್ದಾರೆ.
ಸವಾಲ್ ಏನೆಂದರೆ, "ಮೋದಿ ವಿರುದ್ಧ ಸ್ಫರ್ಧಿಸಿ ಸೋತಪಕ್ಷದಲ್ಲಿ ರಾಜಕೀಯ ಸನ್ಯಾಸ ತೊಗೊತೀನಿ ಅಂತ ವಾಗ್ದಾನವನ್ನೂ ಕೊಡ್ಬೇಕು" ಅಂತ ರಾಮ್ ದೇವ್ ಅರವಿಂದ್ ಅವರನ್ನು ಆಗ್ರಹಪಡಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಮಾರ್ಚ್ 23ರಂದು ವಾರಣಾಸಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಸಭೆಯಲ್ಲಿ ಸ್ಪರ್ಧಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿಯೂ ಕೇಜ್ರಿವಾಲ್ ಹೇಳಿದ್ದಾರೆ. [ಮೋದಿ ವಿರುದ್ದ ಸ್ಪರ್ಧೆಗೆ ಕೇಜ್ರಿವಾಲ್ ಸಿದ್ದ]
ನರೇಂದ್ರ ಮೋದಿ ವಿರುದ್ದ ಸ್ಪರ್ಧಿಸಿದರೆ ಕೇಜ್ರಿವಾಲ್ ಠೇವಣಿ ಕಳೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಕೇಜ್ರಿವಾಲ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಅಜಂಡಾ ಹಿಂದೆ ಕಾಂಗ್ರೆಸ್ ಕೈ ಇರುವುದು ಸ್ಪಷ್ಟ ಎಂದು ರಾಮದೇವ್ ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಸಾಗುತ್ತಿರುವ ದಾರಿ ನೋಡಿದರೆ ಕಾಂಗ್ರೆಸ್ಸಿನ ಬಿ ಟೀಂ ರೀತಿಯಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿದೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅರವಿಂದ್ ಕೇಜ್ರಿವಾಲ್ಗೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ? ಎಂದು ರಾಮದೇವ್ ಚುಚ್ಚಿದರು.
ಇದು ಚುನಾವಣೆ ಸಮಯ. ಅವರನ್ನು ಇವರು ಚುಚ್ಚುವುದು, ಇವರನ್ನು ಅವರು ಚುಚ್ಚುವುದು ಸಾಮಾನ್ಯ. ರಾಜಕೀಯ ಸನ್ಯಾಸದ ಮಾತುಗಳನ್ನು ನಾವು ಬೇಕಾದಷ್ಟು ಕೇಳಿಸಿಕೊಂಡಿದ್ದೇವೆ. ಆದರೆ, ಇಲ್ಲಿಯವರೆಗೆ ಸನ್ಯಾಸ ಸ್ವೀಕರಿಸಿದ ಒಬ್ಬೇ ಒಬ್ಬ ಪುಣ್ಯಾತ್ಮ ಭಾರತೀಯ ರಾಜಕೀಯ ಭೂಪಟದಲ್ಲಿ ಕಾಣಿಸುವುದಿಲ್ಲ.
ಮೋದಿಗೆ ರಾಮದೇವ್ ಹಿತವಚನ
ನರೇಂದ್ರ ಮೋದಿ ಪ್ರಧಾನಿ ಕುರ್ಚಿಯಲ್ಲಿ ಕುಳಿತು ಕೊಳ್ಳಲು ಬಹಳ ಆತುರರಾಗಿದ್ದಾರೆ. ಇಷ್ಟೊಂದು ಆತುರ ಒಳ್ಳೆಯದಲ್ಲ. ನರೇಂದ್ರ ಮೋದಿಗೆ ತಾಳ್ಮೆ ಇದ್ದರೆ ಒಳ್ಳೆಯದು. ದೇಶ ಮುನ್ನಡೆಸುವ ಈ ಕೆಲಸ ನಿಭಾಯಿಸಲು ಸಮಯಾವಕಾಶ ಬೇಕಾಗುತ್ತದೆ. ಹಾಗಾಗಿ, ಮೋದಿ ಆತುರದಿಂದ ಹೆಜ್ಜೆ ಇಡುವುದು ಸೂಕ್ತವಲ್ಲ.
ನಿತಿನ್ ಗಡ್ಕರಿ ಕ್ಲೀನ್
ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಸಭ್ಯ ಮತ್ತು ನಿಷ್ಕಂಳಕ ಮನುಷ್ಯ. ನೇರ ನುಡಿಯ ಗಡ್ಕರಿ ಮೇಲಿರುವ ಭ್ರಷ್ಟಾಚಾರದ ಆರೋಪಗಳಿಗೆ ಆಧಾರವಿಲ್ಲ. ಇಂದಲ್ಲಾ ನಾಳೆ ಅವರು ತಮ್ಮ ಮೇಲಿರುವ ಆರೋಪಗಳಿಂದ ಮುಕ್ತರಾಗುತ್ತಾರೆ.
ಬಿಜೆಪಿ ಮೇಲೆ ಬೇಸರವಿದೆ
ನನ್ನ ಹಿಂಬಾಲಕ ನಿಶಿಕಾಂತ್ ಯಾದವ್ ಗೆ ಬಿಜೆಪಿ ಟಿಕೆಟ್ ಬಯಸಿದ್ದೆ. ಪಾಟಲಿಪುತ್ರದಿಂದ ಸ್ಪರ್ಧಿಸಲು ನಿಶಿಕಾಂತ್ ಉತ್ಸುಕರಾಗಿದ್ದರು. ನನ್ನ ಮನವಿಗೆ ಬಿಜೆಪಿ ಸೊಪ್ಪು ಹಾಕಲಿಲ್ಲ ಎನ್ನುವ ಬೇಸರವಿದೆ. ನಿಶಿಕಾಂತ್ ಸಮರ್ಥರಾಗಿದ್ದರು ಮತ್ತು ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ತಂದು ಕೊಡುತ್ತಿದ್ದರು. ಬಿಜೆಪಿ ಅಲ್ಲಿ RJD ಪಕ್ಷದಿಂದ ವಲಸೆ ಬಂದ ರಾಮ್ ಕೃಪಾಲ್ ಯಾದವ್ ಗೆ ಟಿಕೆಟ್ ನೀಡಿದೆ.
ಯಡ್ಡಿ, ರಾಮುಲು ಯಾಕೆ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ಅವರನ್ನು ಮತ್ತೆ ಪಕ್ಷಕ್ಕೆ ಕರೆಸಿ, ಟಿಕೆಟ್ ನೀಡಿದ ಕ್ರಮ ಸರಿಯಲ್ಲ. ಇದರಿಂದ ಬಿಜೆಪಿಗೆ ಕೆಟ್ಟ ಹೆಸರು ಬರುತ್ತದೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದಲ್ಲ.
ಕಳಂಕಿತರನ್ನು ದೂರವಿಡಿ
ಭ್ರಷ್ಟರು ಯಾವುದೇ ಪಕ್ಷದಲ್ಲಿದ್ದರೂ ನಾವು ಅದಕ್ಕೆ ವಿರೋಧಿಸುತ್ತೇವೆ. ಬಿಜೆಪಿ ಈಗಾಗಲೇ ಕೆಲವು ಕಳಂಕಿತರಿಗೆ ಟಿಕೆಟ್ ನೀಡಿದೆ. ಉತ್ತಮ ಹಿನ್ನಲೆಯುಳ್ಳ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಿದರೆ ಪಕ್ಷದ ವರ್ಚಸ್ಸೂ ವೃದ್ದಿಯಾಗುತ್ತದೆ.