ಕ್ಷಮಾಪಣೆ ನಂ. 3: ಗಡ್ಕರಿ, ಸಿಬಲ್ ಕ್ಷಮೆ ಕೋರಿದ ಕೇಜ್ರಿವಾಲ್
ನವದೆಹಲಿ, ಮಾರ್ಚ್ 19: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬಿನ ಅಕಾಲಿದಳ ನಾಯಕ ಬೀಕ್ರಮ್ ಮಜೀತಿಯಾ ಬಳಿ ಕ್ಷಮೆ ಕೋರಿದ್ದರು. ಇದೀಗ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಳಿ ಅವರು ಕ್ಷಮೆ ಕೋರಿದ್ದಾರೆ.
ಈ ಸಂಬಂಧ ಗಡ್ಕರಿಗೆ ಬರೆದ ಪತ್ರದಲ್ಲಿ ಕೇಜ್ರಿವಾಲ್, ಪರಿಶೀಲಿಸದೆ ಆರೋಪ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. "ನನಗೆ ನಿಮ್ಮ ಮೇಲೆ ಯಾವುದೇ ರೀತಿಯ ವೈಯಕ್ತಿಕ ಸಿಟ್ಟು ಇಲ್ಲ. ನಾನು ಇದಕ್ಕಾಗಿ ವಿಷಾದಿಸುತ್ತೇವೆ. ಹಿಂದಿನ ಘಟನಾವಳಿಗಳನ್ನು ಮರೆತು, ನ್ಯಾಯಾಲಯದ ಮೊಕದ್ದಮೆಗಳನ್ನು ಹಿಂಪಡೆಯಿರಿ," ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವರ್ಷಗಳ ಹಿಂದೆ ಕೇಜ್ರಿವಾಲ್ ಅವರು ನಿತಿನ್ ಗಡ್ಕರಿ ವಿರುದ್ಧ ಹೇಳಿಕೆ ನೀಡಿದ್ದರು. ನಂತರ ಗಡ್ಕರಿ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದೀಗ ಇಬ್ಬರೂ ಜೊತೆಯಾಗಿ ಮಾನನಷ್ಟ ಮೊಕದ್ದಮೆ ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಪಿಲ್ ಸಿಬಲ್ ಬಳಿ ಕ್ಷಮೆಯಾಚನೆ
ಇದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ಕ್ಷಮೆಯನ್ನೂ ಕೇಳಿದ್ದಾರೆ. ಕಪಿಲ್ ಸಿಬಲ್ ಪುತ್ರ ಅಮಿತ್ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ವೊಡಾಫೋನ್ ಕಂಪನಿ ಇಟ್ಟಿದ್ದ ತೆರಿಗೆ ಪರಿಷ್ಕರಣೆ ಬೇಡಿಕೆಯಲ್ಲಿ ಕಪಿಲ್ ಸಿಬಲ್ ಅಕ್ರಮ ಎಸಗಿದ್ದರು ಎನ್ನುವ ಅರ್ಥದಲ್ಲಿ ಈ ಹಿಂದೆ ಕೇಜ್ರಿವಾಲ್ ಆರೋಪಿಸಿದ್ದರು.
ಈ ಕುರಿತು ಹೇಳಿಕೆ ನೀಡಿರುವ ಸಿಬಲ್, "ಕೆಲವು ವರ್ಷಗಳ ಹಿಂದೆ ಪತ್ರಿಕಾಗೋಷ್ಟಿಯಲ್ಲಿ ತನ್ನ ಮೇಲೆ ಮತ್ತು ಮಗನ ಮೇಲೆ ಮಾಡಿದ ಆರೋಪಗಳು ಆಧಾರ ರಹಿತ ಎಂದು ಕೇಜ್ರಿವಾಲ್ ಮತ್ತು ಸಿಸೋಡಿಯಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಇವತ್ತು ಅವರು ನನ್ನ ಕ್ಷಮೆ ಕೋರಿದ್ದಾರೆ. ತಾವು ಮಾಡಿದ್ದಕ್ಕೆ ಅವರು ಕ್ಷಮೆ ಕೇಳಿದ್ದಾರೆ ಮತ್ತು ಈಗ ಎಲ್ಲವೂ ಮರೆತು ನಾವು ಮುಂದೆ ಸಾಗುತ್ತೇವೆ," ಎಂದಿದ್ದಾರೆ.
ಇನ್ನು ಕ್ಷಮಾಪಣೆ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, "ನಾವು ಯಾರಿಗೆಲ್ಲಾ ನೋಯಿಸಿದ್ದೇವೆಯೋ ಅವರ ಬಳಿ ಕ್ಷಮೆಯಾಚಿಸುತ್ತೇವೆ. ಜನರಿಗೆ ಸೇವೆ ಸಲ್ಲಿಸಲು ನಾವು ಇಲ್ಲಿದ್ದೇವೆ. ಈ ರೀತಿಯ ವಿಚಾರಗಳಲ್ಲಿ ನ್ಯಾಯಾಲಯಗಳಿಗೆ ಬಡಿದಾಡಲು ನಮಗೆ ಸಮಯವಿಲ್ಲ. ಜನರ ಕಲ್ಯಾಣಕ್ಕಾಗಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲು ನಾವು ಇಲ್ಲಿದ್ದೇವೆ," ಎಂದು ತಿಳಿಸಿದ್ದಾರೆ.
ಈ ಹಿಂದೆ ಬೀಕ್ರಮ್ ಮಜೀತಿಯಾ ಬಳಿ ಅರವಿಂದ್ ಕೇಜ್ರಿವಾಲ್ ಕ್ಷಮೆ ಕೇಳಿದ ಹಿನ್ನಲೆಯಲ್ಲಿ ಪಂಜಾಬ್ ಎಎಪಿ ಅಧ್ಯಕ್ಷ ಭಗವಂತ್ ಮಾನ್ ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಹುದು.