ಹಿಂದಿ ವಿರುದ್ಧ ಎಂಕೆ ಯುದ್ಧ, ಸಿದ್ದು ಏಕೆ ನಿಶ್ಶಬ್ದ?
ಬೆಂಗಳೂರು, ಜೂ. 19 : ವಿದೇಶಿ ನಾಯಕರ ಸಮ್ಮುಖದಲ್ಲಿ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೂಡ ತಾನು ಹಿಂದಿಯಲ್ಲಿಯೇ ಸಂವಾದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದೇನೋ ಸರಿ. ಆದರೆ, ಗೃಹ ಮಂತ್ರಾಲಯದ ಅಧಿಕಾರಿಗಳೆಲ್ಲ ಹಿಂದಿಯಲ್ಲಿಯೇ ಸಾಮಾಜಿಕ ತಾಣದಲ್ಲಿ ಸಂವಹನ ನಡೆಸಬೇಕು ಎಂದು ತಾಕೀತು ಮಾಡಿದ್ದು ಎಷ್ಟು ಸರಿ?
ಟ್ವಿಟ್ಟರ್ ಮತ್ತು ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳಲ್ಲಿ ಹಿಂದಿಯಲ್ಲಿಯೇ ಸಂದೇಶ ಹಾಕಬೇಕೆಂದು ಗೃಹ ಸಚಿವಾಲಯದ ಬಾಬುಗಳಿಗೆಲ್ಲ ಆದೇಶ ನೀಡಿರುವುದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಕೆಂಡಾಮಂಡಲವಾಗಿಸಿದೆ. ಹಿಂದಿಯೇತರರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ಕಾಣ್ತೀರಾ ಎಂದು ಕೆಂಡಕಾರಿದ್ದಾರೆ. [ಕನ್ನಡಿಗ 2ನೇ ದರ್ಜೆಯ ಪ್ರಜೆ]
"ಪ್ರಾದೇಶಿಕ ಭಾಷೆಗಳು ಇನ್ನೂ ಸತ್ತಿಲ್ಲ. ಇತಿಹಾಸ ಅನೇಕ ಹಿಂದಿ ವಿರೋಧಿ ಹೋರಾಟಗಳನ್ನು ತನ್ನ ಪುಟಗಳಲ್ಲಿ ದಾಖಲಿಸಿಕೊಂಡಿದೆ. ಹಿಂದಿಯೇತರ ಭಾಷಿಕರು ಇಚ್ಛಿಸುವವರೆಗೆ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಮಾಡುತ್ತೇನೆ ಎಂದು ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಆಶ್ವಾಸನೆ ಕೊಟ್ಟಿದ್ದನ್ನು ಮರೆಯಲು ಸಾಧ್ಯವಿಲ್ಲ" ಎಂದು ಕರುಣಾನಿಧಿ ಹೇಳಿಕೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿಂದಿಯೇತರ ನಾಗರಿಕರ ಮೇಲೆ ಹಿಂದಿಯನ್ನು ಹೇರುವ ಕೃತ್ಯಕ್ಕೆ ಕೈಹಾಕುವ ಬದಲು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಕರುಣಾನಿಧಿಯವರು ಮೋದಿಯವರಿಗೆ ಸಲಹೆ ನೀಡಿದ್ದಾರೆ.

ತಮಿಳು ಬಿಟ್ಟು ಒಂದು ಅಕ್ಷರವನ್ನೂ ಮಾತನಾಡದ 90 ವರ್ಷದ ಡಿಎಂಕೆ ಪಕ್ಷದ ಅಧ್ಯಕ್ಷ ಕರುಣಾನಿಧಿಯವರು ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿರುವಾಗ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಮಾತನ್ನೂ ಆಡದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಕನ್ನಡಿಗರು ಫೇಸ್ ಬುಕ್ ನಲ್ಲಿ ಪ್ರಶ್ನಿಸುತ್ತಿದ್ದಾರೆ. [ಗ್ರಾಹಕ ಸೇವೆ ಕನ್ನಡದಲ್ಲೇ ಇರಲಿ]
ಕೇಂದ್ರದ ಈ ಎಡವಟ್ಟು ಕೆಲಸ, ಹಿಂದಿ ರಾಷ್ರ ಭಾಷೆ ಅಲ್ಲ ಎಂದು ಪ್ರತಿಪಾದಿಸುವವರನ್ನು ಕೆರಳಿಸಿದೆ. ಈ ಕುರಿತು ಟ್ವಿಟ್ಟರಲ್ಲಿ ಮತ್ತು ಫೇಸ್ ಬುಕ್ ನಲ್ಲಿ ಟೀಕೆಗಳು ಕೇಳಿಬರುತ್ತಿವೆ. ಹಿಂದಿಯನ್ನು ಬಲವಂತವಾಗಿ ಹೇರಿದರೆ ಅದು ಇತರ ಭಾಷೆಗಳ ಸಾಮೂಹಿಕ ಅವಸಾನಕ್ಕೆ ನಾಂದಿ ಹಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಕನ್ನಡ ಭಾಷಾ ಪ್ರೇಮಿಗಳು ಟೀಕಾಸ್ತ್ರ ಎಸೆದಿದ್ದಾರೆ.
ನಮ್ಮ ಮೆಟ್ರೋದಲ್ಲಿ ಕೂಡ ಹಿಂದಿಗೆ ಮಣೆ ಹಾಕುವ ಬದಲು ಕನ್ನಡಕ್ಕೆ ಆದ್ಯತೆ ನೀಡಬೇಕು ಮತ್ತು ಕನ್ನಡಿಗರಿಗೆ ಕೆಲಸ ನೀಡಬೇಕು. ಇಲ್ಲದಿದ್ದರೆ, ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಟಿಎ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶಾಂತಿನಗರದ ಬಿಎಂಆರ್ ಸಿಎಲ್ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಮಾತ್ರವಲ್ಲ, ಎಲ್ಲ ನಾಮಫಲಕಗಳನ್ನು ಕನ್ನಡದಲ್ಲಿಯೂ ಹಾಕಬೇಕೆಂದು ನಾರಾಯಣ ಗೌಡ ಅವರು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಮ್ಮತಿ ಸೂಚಿಸಿರುವ ಅವರು ಒಂದು ವಾರ ಕಾಲಾವಕಾಶ ಕೋರಿದ್ದಾರೆ. [ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ]
The Home Ministry is of the view that all Indian languages are important. The Ministry is committed to promote all languages of the country.
— HMO India (@HMOIndia) June 19, 2014 ಹಾದಿಗೆ ಬಂದ ಕೇಂದ್ರ : ಹಿಂದಿ ಹೇರುವ ಯತ್ನಕ್ಕೆ ಭಾರೀ ಪ್ರತಿರೋಧವಾಗುತ್ತಿದ್ದಂತೆ ಹಾದಿಗೆ ಬಂದಿರುವ ಕೇಂದ್ರ ಗೃಹ ಸಚಿವಾಲಯ, ಎಲ್ಲ ಭಾಷೆಗಳು ಮಹತ್ವವಾಗಿದ್ದು, ಭಾರತದ ಎಲ್ಲ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಹೇಳಿಕೆ ನೀಡಿದೆ.











Click it and Unblock the Notifications