ಪಟೇಲ್ ಪ್ರತಿಮೆ: ರಾಜ್ಯ ಬಿಜೆಪಿಯಿಂದಲೂ ಉಕ್ಕು ಸಂಗ್ರಹ
ಬೆಂಗಳೂರು, ನ. 4: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಸಾಕಾರಗೊಳಿಸಲು ರಾಜ್ಯ ಬಿಜೆಪಿ ಕೈಜೋಡಿಸಿದೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಹಳೆಯ ಉಕ್ಕು ಕೇಳಿಕೊಂಡು ನಿಮ್ಮ ಮನೆಯ ಬಾಗಿಲಿಗೆ ಬರುವುದು ಖಚಿತ.
ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನರ್ಮದಾ ಕಣಿವೆಯಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆಯೊಂದು ನಿರ್ಮಿಸಲು ಉದ್ದೇಶಿಸಲಾಗಿದೆ. ತನ್ನಿಮಿತ್ತ ದೇಶದಾದ್ಯಂತ ಎಲ್ಲಡೆಯಿಂದ ಉಕ್ಕಿನ ಸಾಮಗ್ರಿ ಸಂಗ್ರಹಿಸುವ ಅಭಿಯಾನದಲ್ಲಿ ಬಿಜೆಪಿ ತಲ್ಲೀನವಾಗಿದೆ.

ಯೋಜನೆಯನ್ನು ಸಾಕಾರಗೊಳಿಸಲು ಗುಜರಾತ್ ಸರಕಾರವು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ ಹೆಸರಿನಲ್ಲಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಿದೆ. ಮಾಜಿ ಸಚಿವ ಮುರುಗೇಶ್ ನಿರಾಣಿ ಸಾರಥ್ಯದಲ್ಲಿ ರಾಜ್ಯದಲ್ಲಿ ಈ ಅಭಿಯಾನ ನೆರವೇರಲಿದೆ. ಅಹಮದಾಬಾದಿನಿಂದ 100 ಕಿಮೀ ದೂರದಲ್ಲಿರುವ ಕೇವಡಾದಲ್ಲಿ ಈ ಬೃಹತ್ ಪ್ರತಿಮೆ ತಲೆಯೆತ್ತಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಆಯಾ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರುಗಳು ತಮ್ಮ ಗ್ರಾಮಗಳಿಗೆ ತೆರಳಿ ಉಕ್ಕು ಸಂಗ್ರಹಿಸಲಿದ್ದಾರೆ. ಜನವರಿ 26ಕ್ಕೆ ಈ ಸಂಗ್ರಹ ಕಾರ್ಯ ಕೊನೆಗೊಳ್ಳಲಿದೆ. ಆ ನಂತರ ಅಷ್ಟೂ ಉಕ್ಕನ್ನು ಅಹಮದಾಬಾದಿಗೆ ಕಳುಹಿಸಿಕೊಡಲಾಗುತ್ತದೆ.
7 ಲಕ್ಷ ಹಳ್ಳಿಗಳಿಂದ ಉಕ್ಕಿನ ತುಂಡುಗಳನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿರುವ ಬಿಜೆಪಿ, ಪ್ರತಿಯೊಬ್ಬ ರೈತರೂ 250 ಗ್ರಾಂ ಉಕ್ಕು ನೀಡಿದರೆ ಅದು 5 ಸಾವಿರ ಟನ್ನಷ್ಟಾಗುತ್ತದೆ ಎಂದು ಅಂದಾಜಿಸಿದೆ. ಅದ್ದರಿಂದ ಈ ಬೃಹತ್ ಪ್ರತಿಮೆ ನಿರ್ಮಾಣಕ್ಕಾಗಿ ರಾಜ್ಯದಲ್ಲಿ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿ, ರೈತರಿಂದ ಹಳೆಯ ಉಕ್ಕಿನ ತುಂಡುಗಳನ್ನು ಸಂಗ್ರಹಿಸಲು ಬಿಜೆಪಿ ನಿರ್ಧರಿಸಿದೆ.
ಹೇಗಿರಲಿದೆ ಪ್ರತಿಮೆ!?:
597 ಅಡಿ (182 ಮೀಟರ್) ಎತ್ತರದ ಈ ಮೂರ್ತಿಯನ್ನು ಬರೋಬ್ಬರಿ 2,500 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬುಡಮಟ್ಟದಿಂದ 787 ಅಡಿ (240 ಮೀಟರ್) ಎತ್ತರವಿರುವ ಈ ಪುತ್ಥಳಿ ನಿರ್ಮಾಣಗೊಂಡ ಬಳಿಕ, ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.












Click it and Unblock the Notifications