ಪಣಜಿಯಲ್ಲಿ ಕನ್ನಡ ಕಲರವ, ರಾಜ್ಯೋತ್ಸವ ಆಚರಣೆ
ಪಣಜಿ, ನ. 24 : ಕನ್ನಡ ನಾಡು, ಭಾಷೆ, ಸಂಸ್ಕೃತಿ ರಕ್ಷಣೆಗೆ ಗೋವಾದಲ್ಲಿರುವ ಎಲ್ಲಾ ಕನ್ನಡಿಗರು ಸಂಘಟಿತರಾಗಬೇಕು ಎಂದು ವಾರ್ತಾ ಸಚಿವ ರೋಷನ್ ಬೇಗ್ ಕರೆ ನೀಡಿದ್ದಾರೆ. ಗೋವಾದಲ್ಲಿರುವ ಕನ್ನಡಿಗರು ಕನ್ನಡ ಭವನ ನಿರ್ಮಾಣ ಮಾಡಲು ಮುಂದಾದರೆ ಕರ್ನಾಟಕ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.
ಗೋವಾದ ಪಣಜಿಯಲ್ಲಿ ಭಾನುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಾ ಕನ್ನಡ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಷನ್ ಬೇಗ್. ಗೋವಾದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಭಾಷೆ, ನಾಡಿನ ಹೆಸರಿನಲ್ಲಿ ಇಲ್ಲಿರುವ ಎಲ್ಲಾ ಕನ್ನಡಿಗರು ಒಂದೇ ವೇದಿಕೆಗೆ ಬರಬೇಕಿದೆ ಎಂದು ಹೇಳಿದರು. [ಗೋವಾ : ಬೈನಾ ನಿರಾಶ್ರಿತರಿಗೆ ಶಾಶ್ವತ ಪರಿಹಾರ]

ಇಲ್ಲಿನ ಕನ್ನಡಿಗರು ಸಂಘಟಿತರಾದರೆ ಇಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರ ವಿದ್ಯಾಭ್ಯಾಸ, ಆರೋಗ್ಯ ಸೇವೆಗಳಿಗೆ ನೆರವು ಒದಗಿಸಲು ಸಾಧ್ಯವಾಗುತ್ತದೆ. ಎಲ್ಲಾ ಕನ್ನಡಿಗರಿಗೆ ವೇದಿಕೆಯಾಗಬಲ್ಲ ಕನ್ನಡ ಭವನ ಇಲ್ಲಿ ನಿರ್ಮಾಣವಾಗುವ ಅಗತ್ಯವಿದ್ದು, ಕನ್ನಡ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾದರೆ ಕರ್ನಾಟಕ ಸರ್ಕಾರ ನೆರವು ನೀಡಲಿದೆ ಎಂದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೋವಾದ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕ ಡಾ. ಸುರೇಶ್ ಶಾನ್ಭಾಗ್ ಮಾಡನಾಡಿ, ನಾವು ಯಾವುದೇ ರಾಜ್ಯದಲ್ಲಿ ನೆಲೆಸಿದ್ದರೂ ತಾಯಿ ಕಲಿಸಿದ ಭಾಷೆಯೇ ನಮ್ಮ ಮಾತೃಭಾಷೆ. ನಮ್ಮ ಯೋಚನಾ ಲಹರಿ ಸದಾ ಮಾತೃಭಾಷೆಯಲ್ಲೇ ಇರುತ್ತದೆ ಎಂದು ಹೇಳಿದರು. [ಗೋವಾ ಕನ್ನಡಿಗರಿಗೆ ನೆರವಾದ ಪೊಲೀಸರು]

ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಹಾಬಲ ಭಟ್ ಮಾತನಾಡಿ, ಗೋವಾದಲ್ಲಿ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಜನರಿದ್ದಾರೆ. ಕನ್ನಡದ ವೈವಿದ್ಯತೆಯನ್ನು ಇಲ್ಲಿ ಕಾಣಬಹುದು. ಪ್ರಾದೇಶಿಕ ಹಾಗೂ ವರ್ಗ ಭಿನ್ನತೆಯನ್ನು ಮೀರಿದರೆ ಗೋವಾದಲ್ಲಿ ಕನ್ನಡಿಗರು ತಮ್ಮ ಧ್ವನಿಯನ್ನು ದಾಖಲಿಸಲು ಸಾಧ್ಯವಿದೆ ಎಂದು ತಿಳಿಸಿದರು.

ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಉಪ ನಿರ್ದೇಶಕರಾದ ಬಸವರಾಜ ಕಂಬಿ, ಎಸ್.ವಿ.ಲಕ್ಷ್ಮೀನಾರಾಯಣ, ಗೋವಾ ಕನ್ನಡ ಕನ್ನಡ ಸಮಾಜದ ಅಧ್ಯಕ್ಷ ಮಹಾಬಲ್ ಭಟ್, ಉಪಾಧಕ್ಷ ಮಲ್ಲಿಕಾರ್ಜುನ ಬಾದಾನಿ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications