ಬಾಲಿವುಡ್ ನಟಿ ಕಂಗನಾ ರಣಾವತ್ಗೆ ದೆಹಲಿ ವಿಧಾನಸಭೆಯ ಸಮಿತಿ ಸಮನ್ಸ್
ನವದೆಹಲಿ, ನವೆಂಬರ್ 25: ಸಿಖ್ಖರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ರಿಗೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿ ಸಮನ್ಸ್ ಜಾರಿಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
"ಸಿಖ್ಖರ ಬಗ್ಗೆ ಅಸಹ್ಯಕರ ಮತ್ತು ಅವಹೇಳನಕಾರಿ ಹೇಳಿಕೆ" ನೀಡಿದ ಹಿನ್ನೆಲೆ ಸಮನ್ಸ್ ನೀಡಲಾಗಿದ್ದು, ಡಿಸೆಂಬರ್ 6ರಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ನೇತೃತ್ವದ ಸಮಿತಿಯ ಎದುರು ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸಿದ್ದನ್ನು ಪ್ರಶ್ನಿಸಿ ಮುಂಬೈನಲ್ಲಿ ಸಿಖ್ಖರು ದೂರು ನೀಡಿದ್ದಾರೆ.

ಸಿಖ್ಖರು ನೀಡಿದ ದೂರಿನಲ್ಲಿ ಏನಿದೆ?:
ಮುಂಬೈನ ಉದ್ಯಮಿ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಹಾಗೂ ಶಿರೋಮಣಿ ಅಕಾಲಿ ದಳದ ಮುಖಂಡರು ನಟಿ ಕಂಗನಾ ರಣಾವತ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ "ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ವರ್ಷಪೂರ್ತಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಲಿಸ್ತಾನಿ ಎಂದು ಬಿಂಬಿಸಿದ್ದಾರೆ. ಅಲ್ಲದೇ ರೈತರನ್ನು ಖಲಿಸ್ತಾನಿಗಳು ಎಂದು ಕರೆದಿದ್ದಾರೆ," ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಖ್ ಸಮುದಾಯಕ್ಕೆ ಅವಮಾನ:
"ನಿಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ 2021ರ ನವೆಂಬರ್ 20ರಂದು ನೀವೇ ಬರೆದುಕೊಂಡಿದ್ದೀರಿ ಎಂದು ಹೇಳಲಾದ ಅತಿರೇಕದ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಇನ್ಸ್ಟಾಗ್ರಾಮ್ ಪೋಸ್ಟ್ಗಳ ಕುರಿತು ಹಲವಾರು ದೂರುಗಳನ್ನು ಸಮಿತಿಯು ಸ್ವೀಕರಿಸಿದೆ. "ಎಂದು ಸಮಿತಿಯು ತನ್ನ ಉಪ ಕಾರ್ಯದರ್ಶಿಯವರು ರಣಾವತ್ಗೆ ನೀಡಿದ ನೋಟಿಸ್ನಲ್ಲಿ ತಿಳಿಸಿದೆ.
ರಣಾವತ್ ಅವರು "ಖಲಿಸ್ತಾನಿ ಭಯೋತ್ಪಾದಕರು ಎಂದು (ಸಿಖ್ಖರು) ಕಂಬಳಿಪಟ್ಟಿ... ಎಂದು ಬರೆದುಕೊಂಡಿರುವುದು ಇಡೀ ಸಿಖ್ ಸಮುದಾಯಕ್ಕೆ ಅಸಂಗತತೆ ಉಂಟು ಮಾಡುವುದರ ಜೊತೆಗೆ ಅವಮಾನ ಮಾಡಿದಂತಾಗಿದೆ," ಎಂದು ಸಮನ್ಸ್ ಡಾಕ್ಯುಮೆಂಟ್ ಹೇಳಿದೆ.
ಇಂದಿರಾ ಗಾಂಧಿ ಹೆಸರು ಉಲ್ಲೇಖಿಸದೇ ಪರೋಕ್ಷ ಸಂದೇಶ:
"ಖಲೀಸ್ತಾನಿಗಳು ಇಂದು ಸರ್ಕಾರದ ಕೈಗಳನ್ನು ತಿರುಚುವ ಕೆಲಸವನ್ನು ಮಾಡುತ್ತಿರಬಹುದು. ಆದರೆ ಆ ಒಬ್ಬ ಮಹಿಳೆಯನ್ನು ಯಾರೊಬ್ಬರೂ ಮರೆಯುವಂತಿಲ್ಲ. ಅದೊಬ್ಬ ಮಹಿಳಾ ಪ್ರಧಾನಮಂತ್ರಿಯು ಅಂಥವರನ್ನು ತಮ್ಮ ಕಾಲಿನ ಕೆಳಗೆ ಹಾಕಿಕೊಂಡು ಸರಿಯಾಗಿ ತುಳಿದಿದ್ದಾರೆ. ಅವರನ್ನು ಸೊಳ್ಳೆಗಳಂತೆ ತುಳಿದು ಹಾಕುವುದಕ್ಕೆ ತಮ್ಮ ಜೀವವನ್ನೂ ಪಣಕ್ಕಿಟ್ಟಿದ್ದರು. ಆದರೆ ದೇಶವು ಇಬ್ಭಾಗವಾಗುವುದಕ್ಕೆ ಬಿಡಲಿಲ್ಲ. ಖಲೀಸ್ತಾನಿಗಳು ಇಂದಿಗೂ ಆಕೆಯ ಹೆಸರನ್ನು ಕೇಳಿದರೆ ಸಾಕು ಬೆವರುತ್ತಾರೆ, ಅವರಿಗೆ ಅಂಥ ಗುರು ಬೇಕು," ಎಂದು ಕಂಗನಾ ರಣಾವತ್ ಬರೆದುಕೊಂಡಿದ್ದರು.
ಕೃಷಿ ಕಾಯ್ದೆ ರದ್ದು ದುಃಖದ ವಿಷಯ:
ದೇಶದಲ್ಲಿ ಪ್ರತಿಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿರುವ ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್, ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ರದ್ದು ಮಾಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. "ದುಃಖಕರ, ನಾಚಿಕೆಗೇಡಿನ, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ ಸಂಸತ್ತಿನಲ್ಲಿ ಆಯ್ಕೆಯಾದ ಸರ್ಕಾರ ಯಾಕೆ. ಆಗ ಇದು ಕೂಡ ಜಿಹಾದಿ ರಾಷ್ಟ್ರವಾಗಿದೆ. ಇದನ್ನು ಬಯಸಿದ ಎಲ್ಲರಿಗೂ ಅಭಿನಂದನೆಗಳು," ಎಂದು ಕಂಗನಾ ರಣಾವತ್ ಬರೆದಿದ್ದಾರೆ ಎನ್ನುವ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಸ್ವಾತಂತ್ರ್ಯ ಸಿಕ್ಕಿದ್ದೇ ಭಿಕ್ಷೆ ಎಂದು ಕರೆದಿದ್ದ ಕಂಗನಾ:
ಈ ಹಿಂದೆ "1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಭಿಕ್ಷೆ [ಭಿಕ್]' ಎಂದು ಹೇಳುವ ಮೂಲಕ ನಟಿ ಕಂಗನಾ ರಣಾವತ್ ವಿವಾದ ಹುಟ್ಟುಹಾಕಿದ್ದರು. ಮಹಾತ್ಮ ಗಾಂಧಿಯನ್ನು ಗುರಿಯಾಗಿಟ್ಟುಕೊಂಡು ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸಿದವರಿಂದ ಸ್ವಾತಂತ್ರ್ಯ ಬಂದಿರಲು ಸಾಧ್ಯವಿಲ್ಲ. ಅಂಥವರಿಂದ ಭಿಕ್ಷೆ ಮಾತ್ರ ಸಿಗುತ್ತದೆ. ಹೀಗಾಗಿ ನಿಮ್ಮ ನಾಯಕರನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ" ಎಂದು ಕಂಗನಾ ತಮ್ಮ ಸರಣಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹೇಳಿದ್ದರು. ಈ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿ ಮಾಡಿತ್ತು.












Click it and Unblock the Notifications