ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ. ರಮಣ ಪ್ರಮಾಣ ವಚನ ಸ್ವೀಕಾರ
ನವದೆಹಲಿ, ಏಪ್ರಿಲ್ 24: ನ್ಯಾಯಮೂರ್ತಿ ಎನ್.ವಿ. ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶನಿವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ಬೆಳಿಗ್ಗೆ 11ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಮಣ ಅವರಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಬೋಧಿಸಿದರು.
ಸಿಜೆಐ ಶರದ್ ಅರವಿಂದ್ ಬೊಬ್ಡೆ ಅವರ ಅಧಿಕಾರಾವಧಿ ಏಪ್ರಿಲ್ 23ರಂದು ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯನ್ನಾಗಿ ಎನ್ವಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಬೊಬ್ಡೆ ಅವರಿಂದ ಶನಿವಾರ ರಮಣ ಅವರು ಅಧಿಕಾರ ವಹಿಸಿಕೊಂಡರು.

ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರು ಸಂಪ್ರದಾಯದಂತೆ ತಮ್ಮ ನಂತರದ ಅತಿ ಹಿರಿಯ ನ್ಯಾಯಮೂರ್ತಿ ಎನ್ವಿ ರಮಣ ಹೆಸರನ್ನು ಮುಂದಿನ ಸಿಜೆಐ ಹುದ್ದೆಗೆ ಕಳೆದ ತಿಂಗಳು ಶಿಫಾರಸು ಮಾಡಿದ್ದರು.
ಆಂಧ್ರ ಪ್ರದೇಶ ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ಮೊದಲ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೊನ್ನಾವರಂ ಗ್ರಾಮದಲ್ಲಿ 1957ರ ಆಗಸ್ಟ್ 27ರಂದು ರಮಣ ಅವರು ಜನಿಸಿದರು. ಕೃಷಿ ಕುಟುಂಬದಲ್ಲಿ ಜನಿಸಿದ ಅವರು ತೆಲುಗಿನ "ಈನಾಡು" ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ನಂತರ 1983ರಲ್ಲಿ ವಕೀಲ ವೃತ್ತಿ ಕೈಗೊಂಡರು.

ಆಂಧ್ತ ಪ್ರದೇಶ ಹೈಕೋರ್ಟ್, ಕೇಂದ್ರೀಯ ಹಾಗೂ ಆಂಧ್ರ ಪ್ರದೇಶ ಆಡಳಿತ ನ್ಯಾಯ ಮಂಡಳಿಗಳು ಹಾಗೂ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು.
2000ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2013ರಲ್ಲಿ ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎನ್ವಿ ರಮಣ ಅವರನ್ನು 2014ರ ಫೆಬ್ರವರಿ 17ರಂದು ಸುಪ್ರೀಂಕೋರ್ಟ್ಗೆ ಪದೋನ್ನತಿ ಮಾಡಲಾಗಿತ್ತು.












Click it and Unblock the Notifications