ಉಗ್ರನ ಎನ್ ಕೌಂಟರ್ ಗೆ ವಿರೋಧ: ಮತ್ತೆ ಹೊತ್ತಿ ಉರಿದ ಕಾಶ್ಮೀರ
ಎಲ್ ಇಟಿ ಕಮಾಂಡರ್ ಹತ್ಯೆಗೈದ ಕಾಶ್ಮೀರ ಭದ್ರತಾ ಪಡೆಗಳು. ಉಗ್ರನ ಹತ್ಯೆಯಾದ ಬೆನ್ನಲ್ಲೇ ಕಾಶ್ಮೀರದಲ್ಲಿ ಗಲಭೆ. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ಮಾಡಿದ ಪ್ರತ್ಯೇಕತಾವಾದಿಗಳು.ಗಲಭೆ ನಿಯಂತ್ರಿಸಲು ನಡೆಸಿದ ಗೋಲಿಬಾರ್ ನಲ್ಲಿ ಓರ್ವ ಸಾವು.
ಶ್ರೀನಗರ, ಆಗಸ್ಟ್ 2: ಇಲ್ಲಿನ ಮನೆಯೊಂದರಲ್ಲಿ ಅಡಗಿ ಕುಳಿದಿದ್ದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಾಮಾಂಡರ್ ಅಬು ದುನಾಜಾ ಎಂಬಾತನ್ನು ಭಾರತೀಯ ಸೈನಿಕರು ಗುಂಡಿನ ಚಕಮಕಿಯಲ್ಲಿ ಹತ್ಯೆಗೈದ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳು ಬೀದಿಗಿಳಿದು ಭದ್ರತಾ ಪಡೆಗಳ ವಿರುದ್ಧ ಕಲ್ಲುತೂರಾಟ ನಡೆಸಿದ ಘಟನೆಗಳು ನಡೆದಿವೆ.
ಉದ್ರಿಕ್ತ ಗುಂಪುಗಳನ್ನು ಚದುರಿಸಲು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ ಪೊಲೀಸರ ತಂತ್ರಗಳಿಗೆ ಗಲಭೆಕೋರರು ಹಿಂದಕ್ಕೆ ಸರಿಯದ ಹಿನ್ನೆಲೆಯಲ್ಲಿ, ಅಲ್ಲದೆ, ಹಿಂಸಾಚಾರ ಮುಗಿಲು ಮುಟ್ಟಿದ ಕಾರಣದಿಂದಾಗಿ ನಡೆಸಲಾದ ಗೋಲಿಬಾರ್ ಗೆ ಒಬ್ಬ ಯುವಕ ಮೃತಪಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ದತೆಗೆ ತಿರುಗಿದೆ.
ಸತ್ತವನ್ನು ಭಾರತೀಯ ಸೇನೆಯು ತಯಾರಿಸಿದ್ದ ಅತ್ಯಂತ ಅಪಾಯಕಾರಿ ಉಗ್ರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದವನು. ಹಾಗಾಗಿ, ಇಲ್ಲಿನ ಪೊಲೀಸ್ ಇಲಾಖೆ ಹಾಗೂ ಸೈನಿಕರು, ಅಬು ಹತ್ಯೆ ವಿಚಾರವಾಗಿ ಖುಷಿ ಪಟ್ಟಿದ್ದರೆ, ಪ್ರತ್ಯೇಕತಾವಾದಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಗುಂಡಿನ ದಾಳಿ
ಕಾಶ್ಮೀರದ ಪುಲ್ವಾಮದ ಹ್ಕರಿಪೊರಾ ಎಂಬ ಪ್ರಾಂತ್ಯದ ಮನೆಯೊಂದರಲ್ಲಿ ಉಗ್ರ ತನ್ನ ಸಹಚರರೊಂದಿಗೆ ಅಡಗಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಆ ಮನೆಯ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ ವಿರುದ್ಧ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
ಉಗ್ರ ಅಬು ಹತ
ಆಗ, ಭಾರತೀಯ ಯೋಧರು ಪ್ರತಿಯಾಗಿ ಗುಂಡು ಹಾರಿಸಿ, ಸೂಕ್ತ ಕಾರ್ಯಾಚರಣೆ ನಡೆಸಿದಾಗ ಒಳಗಿದ್ದ ಮೂವರು ಉಗ್ರರು ಹತರಾಗಿದ್ದರು. ಹತರಾದವರಲ್ಲಿ ಅಬು ಕೂಡ ಒಬ್ಬನಾಗಿದ್ದ.
A++ ಪಟ್ಟಿಯಲ್ಲಿ ಅಗ್ರ ಅಬು
ಇದೇ ವರ್ಷ ಜೂನ್ 1ರಂದು ಭಾರತೀಯ ಸೇನೆಯು 12 ಅತಿ ಅಪಾಯಕಾರಿ ಉಗ್ರರ ಪಟ್ಟಿಯೊಂದನ್ನು ಬಿಡುಗಡೆ ಮಾಡಿತ್ತು. ಈ ಅಪಾಯಕಾರಿ ಉಗ್ರರನ್ನು A ಮತ್ತು A++ ಎಂಬ ಎರಡು ರೀತಿಯಲ್ಲಿ ವರ್ಗೀಕರಣ ಮಾಡಲಾಗಿತ್ತು. ಈ ಅಬು, A++ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದ.
ಫುಲ್ವಾಮಾದ ಯುವಕ ಹತ
ಅಂದಹಾಗೆ, ಗೋಲಿಬಾರ್ ನಲ್ಲಿ ಸತ್ತವನ್ನನ್ನು ಫುಲ್ವಾಮಾ ಪ್ರಾಂತ್ಯದ ಬೇಗಂಪೋರಾದಲ್ಲಿರುವ ಕಾಕಾಪೋರಾದ ಫಿರ್ದೌಸ್ ಅಹ್ಮದ್ ಎಂದು ಗುರುತಿಸಲಾಗಿದೆ. ಗಲಭೆಯ ವೇಳೆ ಪೊಲೀಸರ ಗುಂಡು ಎದೆಗೆ ತಾಗಿ ಈತ ಮೃತಪಟ್ಟಿದ್ದಾನೆಂದು ಹೇಳಲಾಗಿದೆ.