ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಸಿಕ್ಸರ್ ಸಿಧು ಒಲವು ಈಗ ಇನ್ನೊಂದು ಪಕ್ಷದತ್ತ?
ನವದೆಹಲಿ, ಜೂನ್ 6: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಜೊತೆ ಮುನಿಸಿಕೊಂಡಿರುವ ಮಾಜಿ ಕ್ರಿಕೆಟಿಗ, ಹಾಲೀ ಕಾಂಗ್ರೆಸ್ ಮುಖಂಡ, ನವಜೋತ್ ಸಿಂಗ್ ಸಿಧು, ಪಕ್ಷ ತ್ಯಜಿಸಲಿದ್ದಾರೆ ಎನ್ನುವ ಬಲವಾದ ಮಾತು ಕೇಳಿ ಬರುತ್ತಿದೆ.
ಆಮ್ ಆದ್ಮಿ ಪಕ್ಷದತ್ತ ಸಿಧು ಒಲವು ತೋರುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ, "ಸಿಧು ಅವರಿಗೆ ಪಕ್ಷಕ್ಕೆ ಸ್ವಾಗತ" ಎಂದು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿರುವುದು, ಈ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ,"ನಮ್ಮ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲ. ಸಿಧು, ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ"ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್, ಸಿಧು ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರುವಂತೆ ಪ್ರಚೋದಿಸುತ್ತಿದ್ದಾರೆ ಎನ್ನುವ ಸುದ್ದಿಯನ್ನು ಅಮರೀಂದರ್ ಸಿಂಗ್ ನಿರಾಕರಿಸಿದ್ದಾರೆ. "ಸಿಧು ಜೊತೆಗಿನ ಮಾತುಕತೆಯಲ್ಲಿ ಏನು ಚರ್ಚೆ ನಡೆದಿದೆ ಎನ್ನುವುದನ್ನು ಪ್ರಶಾಂತ್ ನನಗೆ ತಿಳಿಸಿದ್ದಾರೆ"ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.
ನಾಲ್ಕು ವರ್ಷದ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ನವಜೋತ್ ಸಿಧು ಮತ್ತು ಅಮರೀಂದರ್ ಸಿಂಗ್ ನಡುವಿನ ಮನಸ್ತಾಪ ಇಂದು ನಿನ್ನೆಯದಲ್ಲ. ಇದೇ ಕಾರಣಕ್ಕಾಗಿ, ಪಂಜಾಬ್ ಸಚಿವ ಸಂಪುಟದಿಂದಲೂ ಹೊರ ಬರಬೇಕಾಯಿತು.
ಸದ್ಯ, ಕಾಂಗ್ರೆಸ್ಸಿನ ಎಲ್ಲಾ ಚಟುವಟಿಕೆಗಳಿಂದ ದೂರವಿರುವ ಸಿಧು, ಆಮ್ ಆದ್ಮಿ ಪಕ್ಷ ಸೇರುವ ವಿಚಾರದಲ್ಲಿನ ಸುದ್ದಿಯ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಇದುವರೆಗೆ ನೀಡಿಲ್ಲ.