ಗೂಳಿ ಜಾಗದಲ್ಲಿ ನರಿ; ಸೇಲಂನಲ್ಲಿ ಹೀಗೊಂದು ವಿಚಿತ್ರ ಜಲ್ಲಿಕಟ್ಟು!
ಸೇಲಂ, ಜನವರಿ 20: ಜಲ್ಲಿಕಟ್ಟಿನ ಮೇಲೆ ನಿಷೇಧ ಹೇರಿ ಇಡೀ ತಮಿಳುನಾಡು ಚಿಂತೆಯಲ್ಲಿದ್ದರೆ ಇಲ್ಲಿನ ಜನ ಮಾತ್ರ ಆರಾಮವಾಗಿ ಜಲ್ಲಿಕಟ್ಟು ಆಚರಿಸಿದ್ದಾರೆ. ಹಾಗಂಥ ಸುಪ್ರಿಂ ಕೋರ್ಟಿನ ಆದೇಶವನ್ನೇನೂ ಉಲ್ಲಂಘಿಸಿಲ್ಲ. ನ್ಯಾಯಾಲಯದ ಆದೇಶವನ್ನೂ ಪಾಲಿಸಿ, ಗೂಳಿಯನ್ನೂ ಬಳಸದೆ ತಮಿಳುನಾಡಿನ ಸೇಲಂ ಜಿಲ್ಲೆಯ ಜನ 'ನರಿ ಜಲ್ಲಿಕಟ್ಟು' ಆಚರಿಸಿದ್ದಾರೆ.
ಹಾಗೆ ನೋಡಿದರೆ ನರಿ ಕಾಡು ಪ್ರಾಣಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಖಾಯಿದೆಯನ್ವಯ ಈ ರೀತಿಯ ಆಚರಣೆಗಳಿಗೆ ಬಳಸಿಕೊಳ್ಳಲು ಅವಕಾಶವಿಲ್ಲ. ಆದರೆ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಜನರಿಗೆ ಔಪಚಾರಿಕೆ ಆಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ನರಿಗಳ ಮೂತಿಯನ್ನು ಹಗ್ಗದಿಂದ ಬಿಗಿದು, ಜನರಿಗೆ ಕಚ್ಚದಂತೆ ಮಾಡಿ ಆಚರಣೆ ನಡೆಸಲು ಬಿಟ್ಟಿದ್ದಾರೆ.[ಜಲ್ಲಿಕಟ್ಟು: ಸುಪ್ರಿಂ ಆದೇಶ ಇನ್ನೂ ಒಂದು ವಾರ ಲೇಟ್]
ನರಿ ಜಲ್ಲಿಕಟ್ಟು ಸೇಲಂ ಜಿಲ್ಲೆಯ ಪಾಲಿಗೆ ಹೊಸದೇನೂ ಅಲ್ಲ. ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರತಿವರ್ಷ ನರಿ ಜಲ್ಲಿಕಟ್ಟನ್ನು 'ಕಾನುಂ ಪೊಂಗಾಲ್' ದಿನ ಆಚರಿಸಲಾಗುತ್ತದೆ.[1-2 ದಿನದಲ್ಲಿ ನಡೆಯಲಿದೆ ಜಲ್ಲಿಕಟ್ಟು -ಪನ್ನೀರ್ ಸೆಲ್ವಂ]
ಆಚರಣೆಯ ದಿನ ನರಿಗಳಿಗೆ ಅಲಂಕಾರ ಮಾಡಲಾಗುತ್ತದೆ. ಹೂ ಹಾಕಿ ಅಲಂಕಾರ ಮಾಡಿದ ನರಿಗಳನ್ನು ದೇವಸ್ಥಾನದ ಮುಂಭಾಗ ತಂದು ಪ್ರಾರ್ಥನೆ ಮಾಡುತ್ತಾರೆ. ನಂತರ ನರಿಗಳ ಹಿಂಭಾಗದ ಕಾಲುಗಳನ್ನು ಸಪುರವಾದ ದಾರದಿಂದ ಕಟ್ಟುತ್ತಾರೆ. ನಂತರ ಜಲ್ಲಿಕಟ್ಟಿನಲ್ಲಿ ಪಾಲ್ಗೊಳ್ಲುವ ಜನರು ನರಿಗಳನ್ನು ಹಿಡಿಯಲು ಅಣಕು ಪ್ರಯತ್ನ ನಡೆಸುತ್ತಾರೆ. ಇದೇ ಸೇಲಂನ 'ನರಿ ಜಲ್ಲಿಕಟ್ಟು'.