ಭಾರತ; 50 ಸಾವಿರದ ಗಡಿ ದಾಟಿದ ಹೊಸ ಕೋವಿಡ್ ಪ್ರಕರಣಗಳು
ನವದೆಹಲಿ, ಜನವರಿ 05; ವಿವಿಧ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಮಂಗಳವಾರ ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 50,000ದ ಗಡಿ ದಾಟಿದೆ.
ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ವಿವಿಧ ರಾಜ್ಯಗಳು ಸೋಂಕು ಹರಡುವಿಕೆ ತಡೆಗೆ ನಿರ್ಬಂಧಗಳನ್ನು ಜಾರಿಗೊಳಿಸಿವೆ.
ಮಂಗಳವಾರ ಒಟ್ಟು ಎಷ್ಟು ಹೊಸ ಪ್ರಕರಣ ದಾಖಲಾಗಿದೆ? ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬೆಳಗ್ಗೆ 9.30ರ ಸುಮಾರಿಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದೆ. ಆದರೆ ವಿವಿಧ ರಾಜ್ಯಗಳ ಹೊಸ ಪ್ರಕರಣಗಳನ್ನು ನೋಡಿದಾಗ 50 ಸಾವಿರದ ಗಡಿ ದಾಟುವುದು ಖಚಿತವಾಗಿದೆ.

ಮಂಗಳವಾರ ಮಹಾರಾಷ್ಟ್ರದಲ್ಲಿ 18,466 ಹೊಸ ಪ್ರಕರಣ ಪತ್ತೆಯಾಗಿದೆ. ದೆಹಲಿಯಲ್ಲಿ 5,481. ಪಶ್ಚಿಮ ಬಂಗಾದಲ್ಲಿ 9073. ಕರ್ನಾಟಕದಲ್ಲಿ 3000ಕ್ಕೂ ಅಧಿಕ. ತಮಿಳುನಾಡಿನಲ್ಲಿ 2731. ಗುಜರಾತ್ನಲ್ಲಿ 2265. ರಾಜಸ್ಥಾನದಲ್ಲಿ 1137 ಹೊಸ ಪ್ರಕರಣ ದಾಖಲಾಗಿದೆ.
ಆಂಧ್ರ ಪ್ರದೇಶ 334. ತೆಲಂಗಾಣ 1052. ಬಿಹಾರ 893. ಒಡಿಶಾ 680. ಹಿಮಾಚಲ ಪ್ರದೇಶ 260. ಕೇರಳ 3640. ಪಂಜಾಬ್ 1027. ಗೋವಾದಲ್ಲಿ 592 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಹಲವಾರು ನಿರ್ಬಂಧಗಳು; ನವದೆಹಲಿಯಲ್ಲಿ ಕೋವಿಡ್ ಹರಡುವಿಕೆ ತಡೆಯಲು ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಲಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ಮಂಗಳವಾರ ಸೋಂಕು ತಗುಲಿದೆ.
ಕರ್ನಾಟಕದಲ್ಲಿ ಹೊಸ ಪ್ರಕರಣದಲ್ಲಿ ಭಾರೀ ಏರಿಕೆಯಾಗಿದೆ. ಡಿಸೆಂಬರ್ 27ರಂದು 289 ಪ್ರಕರಣ ದಾಖಲಾಗಿತ್ತು. ಡಿ. 28ರಂದು 356, ಡಿ. 29 556, ಡಿ. 30 707 ಪ್ರಕರಣ ರಾಜ್ಯಾದ್ಯಂತ ದಾಖಲಾಗಿತ್ತು.
ಆದರೆ ಮಂಗಳವಾರ 3000ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಒಂದೇ ದಿನ 3048 ಹೊಸ ಪ್ರಕರಣ ದಾಖಲಾಗಿದೆ. 149 ಓಮಿಕ್ರಾನ್ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಜ್ಞರ ಜೊತೆ ಮಂಗಳವಾರ ಸಭೆ ನಡೆಸಿದರು. ಸಭೆಯ ಬಳಿಕ ಕರ್ನಾಟಕ ಸರ್ಕಾರ ಡಿಸೆಂಬರ್ 28ರಿಂದ ಜಾರಿಯಲ್ಲಿರುವ ನೈಟ್ ಕರ್ಫ್ಯೂ ವಿಸ್ತರಣೆ ಮಾಡಿದೆ. ಪ್ರತಿದಿನ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ ನೈಟ್ ಕರ್ಫ್ಯೂ ಇರುತ್ತದೆ.
ಉಳಿದಂತೆ ವಾರಾಂತ್ಯದ ಕರ್ಫ್ಯೂ ಈ ವಾರದಿಂದಲೇ ಜಾರಿಗೆ ಬರಲಿದೆ. ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಮುಂಜಾನೆ 5 ಗಂಟೆ ತನಕ ವಾರಾಂತ್ಯದ ಕರ್ಫ್ಯೂ ಇರುತ್ತದೆ. ಮಾಲ್, ಥಿಯೇಟರ್ಗಳಲ್ಲಿ ಶೇ 50ರಷ್ಟು ಸೀಟು ಭರ್ತಿ ನಿಯಮ ಜಾರಿಗೊಳಿಸಲಾಗುತ್ತಿದೆ.
ರಾಜಕೀಯ ಸಭೆ-ಸಮಾರಂಭ, ಪ್ರತಿಭಟನಾ ಜಾಥಾಗಳನ್ನು ನಿರ್ಬಂಧಿಸಲಾಗಿದೆ. ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಬುಧವಾರ ರಾತ್ರಿ 10 ಗಂಟೆಯಿಂದ ಈ ನಿಯಮಗಳು ಜಾರಿಗೆ ಬರಲಿವೆ.
ಆರು ತಿಂಗಳ ಬಳಿಕ ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. 2021ರ ಜು.8ರಂದು 2530 ಪ್ರಕರಣ ಪತ್ತೆಯಾಗಿತ್ತು. ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿತ್ತು. ಮಂಗಳವಾರ ಬೆಂಗಳೂರು ನಗರದಲ್ಲೇ 3 ಸಾವಿರ ಹೊಸ ಪ್ರಕರಣ ದಾಖಲಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕರ್ನಾಟಕ ಮತ್ತು ತೆಲಂಗಾಣ ಹೈಕೋರ್ಟ್ ಭೌತಿಕ ಕಲಾಪವನ್ನು ರದ್ದುಗೊಳಿಸಿವೆ. ಮುಂದಿನ ಆದೇಶದ ತನಕ ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ ಕಲಾಪ ನಡೆಯಲಿದ್ದು, ತುರ್ತು ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಲಾಗುತ್ತದೆ.
ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವಾಗ ಹೋಟೆಲ್ಗಳಲ್ಲಿ ಪಾರ್ಸೆಲ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಜನರಿಗೆ ಪಾಸ್ ಇದ್ದರೆ ಅವಕಾಶ ನೀಡಲಾಗುತ್ತಿದೆ.












Click it and Unblock the Notifications