ಭಾರತದ ಮೊದಲ ಹೃದ್ರೋಗ ತಜ್ಞೆ ಪದ್ಮಾವತಿ (103) ಕೊರೊನಾದಿಂದ ನಿಧನ
ನವದೆಹಲಿ, ಆಗಸ್ಟ್ 31: ದೇಶದ ಮೊದಲ ಮಹಿಳಾ ಹೃದಯ ತಜ್ಞರೆಂಬ ಕೀರ್ತಿಗೆ ಭಾಜನರಾಗಿದ್ದ ಡಾ. ಎಸ್ಐ ಪದ್ಮಾವತಿ ಅವರು ಕೊರೊನಾ ವೈರಸ್ ಸೊಂಕಿನಿಂದ ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು.
Recommended Video
ಅವರನ್ನು 11 ದಿನಗಳ ಹಿಂದೆ ರಾಷ್ಟ್ರೀಯ ಹೃದ್ರೋಗ ಸಂಸ್ಥೆಗೆ (ಎನ್ಎಚ್ಐ) ದಾಖಲು ಮಾಡಲಾಗಿತ್ತು. ಡಾ. ಪದ್ಮಾವತಿ ಅವರ ಎರಡೂ ಶ್ವಾಸಕೋಶದ ಭಾಗಗಳಿಗೆ ತೀವ್ರವಾದ ಸೋಂಕು ತಗುಲಿತ್ತು. ಇದರಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಎನ್ಎಚ್ಐ ಸಿಇಒ ಡಾ. ಒ.ಪಿ. ಯಾದವ್ ತಿಳಿಸಿದ್ದಾರೆ.
ಪಶ್ಚಿಮ ದೆಹಲಿಯ ಪಂಜಾಬಿ ಬಾಘ್ನ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. 103 ವರ್ಷದ ಬದುಕಿದರೂ ಈ ದಿಗ್ಗಜ ವೈದ್ಯೆಯ ಆರೋಗ್ಯ ಇತ್ತೀಚಿನ ದಿನದವರೆಗೂ ಚೆನ್ನಾಗಿತ್ತು. ಅವರು ಸದಾ ಚಟುವಟಿಕೆಯಿಂದ ಇರುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾರತದಲ್ಲಿ 24 ಗಂಟೆಗಳಲ್ಲೇ 78512 ಮಂದಿಗೆ ಕೊರೊನಾವೈರಸ್ ಸೋಂಕು!
ವಿಶೇಷವೆಂದರೆ 2015ರವರೆಗೂ, ಅಂದರೆ ತಮ್ಮ 98ನೇ ವಯಸ್ಸಿನವರೆಗೂ ಅವರು ಎನ್ಎಚ್ಐನಲ್ಲಿ ವಾರದ ಐದು ದಿನ 12 ಗಂಟೆಗಳ ಕೆಲಸ ಮಾಡುತ್ತಿದ್ದರು. ಎನ್ಎಚ್ಐ 1981ರಲ್ಲಿ ಪದ್ಮಾವತಿ ಅವರೇ ಸ್ಥಾಪಿಸಿದ ಆಸ್ಪತ್ರೆ. ಹೃದ್ರೋಗ ಕ್ಷೇತ್ರಕ್ಕೆ ಅವರು ನೀಡಿದ ಈ ಮಹತ್ವದ ಕೊಡುಗೆಗಾಗಿ ಅವರನ್ನು 'ಹೃದ್ರೋಗ ಶಾಸ್ತ್ರದ ಅಜ್ಜಿ' ಎಂದು ಕರೆಯಲಾಗುತ್ತಿತ್ತು. ಮುಂದೆ ಓದಿ.
ಹಲವು ಮೊದಲುಗಳು!
1954ರಲ್ಲಿ ಅವರು ಲೇಡಿ ಹಾರ್ಡಿಂಜೆ ಮೆಡಿಕಲ್ ಕಾಲೇಜ್ನಲ್ಲಿ ಉತ್ತರ ಭಾರತದ ಮೊಟ್ಟ ಮೊದಲ ಕಾರ್ಡಿಯಾಕ್ ಕ್ಯಾಥೆಟೆರೈಸೇಷನ್ ಲ್ಯಾಬೊರೇಟರಿಯನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. 1967ರಲ್ಲಿ ಅವರು ಮೌಲಾನಾ ಆಜಾದ್ ಮೆಡಿಕಲ್ ಕಾಲೇಜ್ನ ಡೈರೆಕ್ಟರ್-ಪ್ರಿನ್ಸಿಪಾಲ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಅವರು ಮೊದಲ ಬಾರಿಗೆ ಹೃದ್ರೋಗ ವಿಭಾಗಕ್ಕೆ ಡಿಎಂ ಕೋರ್ಸ್ ಅನ್ನು ಪರಿಚಯಿಸಿದ್ದರು. ಇದು ದೇಶದ ಪ್ರಥಮ ಕೊರೊನರಿ ಕೇರ್ ಯುನಿಟ್ ಮತ್ತು ಭಾರತದ ಪ್ರಥಮ ಕೊರೊನರಿ ಕೇರ್ ವ್ಯಾನ್ ಎನಿಸಿದೆ.
1962ರಲ್ಲಿ ಅವರು ಆಲ್ ಇಂಡಿಯಾ ಹೆಲ್ತ್ ಫೌಂಡೇಷನ್ ಅನ್ನು ಸ್ಥಾಪಿಸಿದರು. 1981ರಲ್ಲಿ ರಾಷ್ಟ್ರೀಯ ಹೃದಯ ಸಂಸ್ಥೆ (ಎನ್ಎಚ್ಐ) ಸ್ಥಾಪಿಸಿದರು. ಹೃದಯ ಕ್ಷೇತ್ರಕ್ಕೆ ಅವರು ನೀಡಿದ ಅಮೋಘ ಸೇವೆಗಾಗಿ 1967ರಲ್ಲಿ ಪದ್ಮಭೂಷಣ ಮತ್ತು 1992ರಲ್ಲಿ ಪದ್ಮ ವಿಭೂಷಣ ಗೌರವ ನೀಡಲಾಗಿದೆ.
ಜನಿಸಿದ್ದ ಬರ್ಮಾದಲ್ಲಿ
ಶಿವರಾಮಕೃಷ್ಣ ಅಯ್ಯರ್ ಪದ್ಮಾವತಿ ಅವರು ಜನಿಸಿದ್ದು ಕೇಂದ್ರ ಬ್ರಿಟಿಷ್ ಬರ್ಮಾದ ಮಾಗ್ವೆಯಲ್ಲಿ ಜೂನ್ 20ರ 1917ರಂದು. ರಂಗೂನ್ ಮೆಡಿಕಲ್ ಕಾಲೇಜ್ನಲ್ಲಿ ಓದಿದ ಅವರು ಅತ್ಯುನ್ನತ ಶ್ರೇಣಿಯಲ್ಲಿ ಎಂಬಿಬಿಎಸ್ ಪಡೆದರು. ಆದರೆ 1942ರಲ್ಲಿ ಮೂರನೇ ಮಹಾ ಯುದ್ಧದ ವೇಳೆ ಬರ್ಮಾದಲ್ಲಿ ಜಪಾನ್ನ ಆಕ್ರಮಣದಿಂದಾಗಿ ಅವರು ಮಾಹ್ವೆ ತ್ಯಜಿಸಿ ತಾಯಿ ಮತ್ತು ಸಹೋದರಿಯರ ಜತೆಗೆ ಕೊಯಮತ್ತೂರಿಗೆ ಬಂದರು. ಕುಟುಂಬ ಪುರುಷರು ಅಲ್ಲಿಯೇ ಉಳಿದರು.
ಗೃಹ ಸಚಿವ ಅಮಿತ್ ಶಾ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೂರು ವರ್ಷ ಕುಟುಂಬದ ಸಂಪರ್ಕ ಇರಲಿಲ್ಲ
ಸುಮಾರು ಮೂರು ವರ್ಷ ಕುಟುಂಬದ ಗಂಡಸರು ಏನಾದರು ಎಂಬ ಸುದ್ದಿಯೇ ಇರಲಿಲ್ಲ. ಈ ನೋವಿನೊಂದಿಗೇ ಅವರು ಜೀವನ ಕಳೆಯುತ್ತಿದ್ದರು. 1945ರಲ್ಲಿ ಯುದ್ಧ ನಿಂತ ಬಳಿಕ ಆ ಕುಟುಂಬ ಒಂದುಗೂಡಿತು. ಈ ಅನುಭವದಿಂದಲೇ ಅವರು ಹೃದ್ರೋಗ ವಿಭಾಗದಲ್ಲಿ ಹೆಚ್ಚು ಗಮನ ಹರಿಸಲು ಪ್ರೇರಣೆಯಾಯಿತು ಎನ್ನಲಾಗಿದೆ. ಆ ಕಾಲದಲ್ಲಿ ಭಾರತದಲ್ಲಿ ಹೃದಯ ರೋಗದ ಬಗ್ಗೆ ಅಷ್ಟಾಗಿ ಪರಿಣತಿ ಹೊಂದಿದವರು ಇರಲಿಲ್ಲ.
ವಿದೇಶದಲ್ಲಿ ಅಧ್ಯಯನ, ಸೇವೆ
ಪದ್ಮಾವತಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಲಂಡನ್ನಲ್ಲಿ ಪೂರೈಸಿದರು. ಲಂಡನ್ ಮತ್ತು ಎಡಿನ್ ಬರ್ಗ್ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ನಲ್ಲಿ ಫೆಲೋಷಿಪ್ ಗಳಿಸಿದರು. ಸ್ವೀಡನ್ನ ಆಸ್ಪತ್ರೆಯೊಂದರಲ್ಲಿ ಕೆಲ ಕಾಲ ಕೆಲಸ ಮಾಡಿದ ಅವರು, ಕಾರ್ಡಿಯಾಲಜಿಯ ಮೆಕ್ಕಾ ಎಂದೇ ಹೆಸರಾಗಿರುವ ಬಲ್ಟಿಮೋರ್ನ ಜಾನ್ ಹಾಪ್ಕಿನ್ಸ್ನ ಮುಖ್ಯಸ್ಥರಾಗಿದರು. ಬೋಸ್ಟನ್ನ ಹಾರ್ವರ್ಡ್ ಮೆಡಿಕಲ್ ಸ್ಕೂಲ್ನಲ್ಲಿ ಖ್ಯಾತ ಹೃದಯ ತಜ್ಞರ ಜತೆ ತರಬೇತಿ ಪಡೆದರು.
ಎನ್ಎಚ್ಐ ಸಿಇಒ
ಭಾರತಕ್ಕೆ ಮರಳುತ್ತಿದ್ದಂತೆಯೇ ಆಗಿನ ಕೇಂದ್ರ ಆರೋಗ್ಯ ಸಚಿವೆ ರಾಜಕುಮಾರಿ ಅಮೃತ್ ಕೌರ್ ಅವರನ್ನು ದೆಹಲಿಯ ಲೇಡಿ ಹಾರ್ಡಿಂಜೆ ಮೆಡಿಕಲ್ ಕಾಲೇಜಿನ ಫ್ಯಾಕಲ್ಟಿಯನ್ನಾಗಿ ನೇಮಿಸಿದರು. ನಂತರ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ ಅವರು, ತಾವೇ ಸ್ಥಾಪಿಸಿದ ಎನ್ಎಚ್ಐದ ಮುಖ್ಯ ಹೃದಯ ಸರ್ಜನ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.