ಕೊರೊನಾ ವೈರಸ್: ಚೀನಾ, ಜಪಾನ್ನಿಂದ ಭಾರತೀಯರು ವಾಪಸ್
ನವದೆಹಲಿ, ಫೆಬ್ರವರಿ 27: ಚೀನಾದ ಕೊರೊನಾ ವೈರಸ್ ಸೋಂಕು ಪೀಡಿತ ಪ್ರದೇಶವಾದ ವುಹಾನ್ ನಗರದಿಂದ ಭಾರತೀಯ ವಾಯು ಪಡೆಯ ವಿಶೇಷ ಪರಿಹಾರ ವಿಮಾನವು 76 ಭಾರತೀಯರು ಮತ್ತು 26 ವಿದೇಶಿ ಪ್ರಜೆಗಳನ್ನು ಗುರುವಾರ ಬೆಳಿಗ್ಗೆ ಕರೆದುಕೊಂಡುಬಂದಿದೆ.
ಸೆನಾಪಡೆಯ ಸಿ17 ಸಂಚಾರ ವಿಮಾನವು ಭಾರತದಿಂದ ಚೀನಾಕ್ಕೆ ಸುಮಾರು 15 ಟನ್ನಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಕೂಡ ವುಹಾನ್ಗೆ ಕೊಂಡೊಯ್ಯುವ ಮೂಲಕ ಮಾನವೀಯತೆ ಮೆರೆದಿದೆ.
ಭಾರತೀಯ ವಾಯುಪಡೆ ಕರೆದುಕೊಂಡು ಬಂದ ವಿಮಾನದಲ್ಲಿ ಚೀನಾ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳನ್ನು ಕೂಡ ನವದೆಹಲಿಗೆ ಕರೆತರಲಾಗಿದೆ.
'ವುಹಾನ್ನಿಂದ ವಾಪಸ್ ಬರುವಾಗ ಐಎಎಫ್ ವಿಮಾನವು 76 ಭಾರತೀಯರು ಮತ್ತು ಏಳು ದೇಶಗಳ 36 ಪ್ರಜೆಗಳನ್ನು ಕರೆದುಕೊಂಡುಬಂದಿದೆ. ಇದರಲ್ಲಿ ಬಾಂಗ್ಲಾದೇಶದ 23, ಮ್ಯಾನ್ಮಾರ್ ಮತ್ತು ಮಾಲ್ಡೀವ್ಸ್ನ ಇಬ್ಬರು, ಚೀನಾದ 6, ದಕ್ಷಿಣ ಆಫ್ರಿಕಾ, ಅಮೆರಿಕ, ಮಡಗಾಸ್ಕರ್ ದೇಶಗಳ ತಲಾ ಒಬ್ಬರು ಇದ್ದಾರೆ. ಈ ಕಾರ್ಯವನ್ನು ಚೀನಾದ ಸರ್ಕಾರ ಶ್ಲಾಘಿಸಿದೆ' ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

15 ಟನ್ ತೂಕದ ಸಾಮಗ್ರಿ
ಚೀನಾದ ಜನರ ಸಂಕಷ್ಟದ ಸಮಯದಲ್ಲಿ ಭಾರತವೂ ಜತೆಗಿದೆ ಎಂಬ ದೃಢವಾದ ಭಾವನೆ ಮೂಡಿಸುವ ಸಲುವಾಗಿ ಬೃಹತ್ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಮಾಸ್ಕ್, ಗ್ಲೌಸ್ ಹಾಗೂ ಇತರೆ ತುರ್ತು ಪರಿಹಾರ ಉಪಕರಣಗಳನ್ನು ಒಳಗೊಂಡಂತೆ ಸುಮಾರು 15 ಟನ್ ತೂಕದ ವೈದ್ಯಕೀಯ ನೆರವನ್ನು ಭಾರತದ ಸೇನಾ ವಿಮಾನವು ಚೀನಾಕ್ಕೆ ಒದಗಿಸಿದೆ.

ವೈದ್ಯಕೀಯ ತಪಾಸಣೆ
ವುಹಾನ್ ನಗರದಿಂದ ಕರೆದುಕೊಂಡು ಬಂದ ಆರು ಮಂದಿ ಚೀನೀಯರು ಭಾರತದ ಮೂಲದವರ ಪತ್ನಿ/ಪತಿ ಹಾಗೂ ಕುಟುಂಬದ ಸದಸ್ಯರಾಗಿದ್ದಾರೆ. ಎಲ್ಲ 112 ಮಂದಿಯನ್ನೂ ಈ ಹಿಂದೆ ಕರೆದುಕೊಂಡು ಬರಲಾಗಿದ್ದ ಜನರಂತೆಯೇ ಸೇನಾ ಶಿಬಿರದಲ್ಲಿ ಪ್ರತ್ಯೇಕವಾಗಿ ಇರಿಸಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಾರದೆ ಇದ್ದರೆ ಬಿಡುಗಡೆ ಮಾಡಲಾಗುತ್ತದೆ.

124 ಮಂದಿ ಭಾರತಕ್ಕೆ
ಜಪಾನ್ನ ಟೋಕಿಯೋ ಸಮೀಪದ ಯೊಕೊಹಮಾ ಬಂದರಿನ ಬಳಿ ತಡೆಹಿಡಿಯಲಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದವರಲ್ಲಿ 124 ಮಂದಿಯನ್ನು ನವದೆಹಲಿಗೆ ಕರೆತರಲಾಗಿದೆ. ಹಡಗಿನಲ್ಲಿ ಸಿಲುಕಿದ್ದ ಭಾರತೀಯ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಕರೆತರಲು ಏರ್ ಇಂಡಿಯಾ ವಿಮಾನವು ಟೋಕಿಯೋಗೆ ತೆರಳಿತ್ತು. ಈ ವಿಮಾನ ಗುರುವಾರ ಬೆಳಿಗ್ಗೆ ನವದೆಹಲಿ ತಲುಪಿದೆ. ಇದರಲ್ಲಿ 119 ಭಾರತೀಯರು ಮತ್ತು ಶ್ರೀಲಂಕಾ, ನೇಪಾಳ, ದಕ್ಷಿಣ ಆಪ್ರಿಕಾ ಹಾಗೂ ಪೆರು ದೇಶಗಳ ಐವರು ಪ್ರಜೆಗಳಿದ್ದಾರೆ.

138 ಮಂದಿ ಭಾರತೀಯರಿದ್ದರು
ಫೆ. 3ರಿಂದ ಜಪಾನ್ನ ತೀರದಲ್ಲಿ ಇರುವ ಈ ಹಡಗಿನಲ್ಲಿ ಒಟ್ಟು 3,711 ಮಂದಿಯಿದ್ದರು. ಅವರಲ್ಲಿ ಸುಮಾರು 700 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಹಡಗಿನಲ್ಲಿ 132 ಸಿಬ್ಬಂದಿ ಮತ್ತು 6 ಪ್ರಯಾಣಿಕರು ಸೇರಿದಂತೆ 138 ಮಂದಿ ಭಾರತೀಯರಿದ್ದರು. ಅವರಲ್ಲಿ 119 ಮಂದಿಯನ್ನು ಕರೆದುಕೊಂಡು ಬರಲಾಗಿದೆ. ಉಳಿದ 19 ಜನರಿಗೆ ಜಪಾನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮದೀನಾಕ್ಕೆ ಪ್ರವೇಶ ನಿರ್ಬಂಧ
ಪವಿತ್ರ ಮದೀನಾ ಹಾಗೂ 'ಉಮ್ರಾಹ್' (ಯಾತ್ರೆ) ಉದ್ದೇಶದಿಂದ ದೇಶಕ್ಕೆ ಪ್ರವೇಶಿಸುವುದನ್ನು ಸೌದಿ ಅರೇಬಿಯಾ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. 'ತೀರ್ಥಯಾತ್ರೆಯ ಉದ್ದೇಶದಿಂದ ಅಥವಾ ಪ್ರವಾದಿಯ ಮಸೀದಿ ಮದೀನಾಕ್ಕೆ ಭೇಟಿ ನೀಡುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ' ಎಂದು ಸೌದಿ ಅರೇಬಿಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ಕೊರೊನಾ ವೈರಸ್ ಕಾರಣದಿಂದ ಈ ನಿರ್ಬಂಧ ವಿಧಿಸಲಾಗಿದೆ ಎಂದು ಅದು ತಿಳಿಸಿದೆ.












Click it and Unblock the Notifications