ಐಸ್ ಬಕೆಟ್ ಹೋಗಿ ರೈಸ್ ಬಕೆಟ್ ಬಂತುǃ
ಬೆಂಗಳೂರು, ಆ. 26 : ಸ್ವಾತಂತ್ರ್ಯ ಬಂದು 67 ವರ್ಷಗಳೇ ಉರುಳಿದ್ದರೂ ಭಾರತೀಯ ಸಮಾಜವನ್ನು ಕಾಡುತ್ತಿರುವ ಹಸಿವಿನ ಭೂತ ಮಾಯವಾಗಿಲ್ಲ. ಸರ್ಕಾರಗಳು, ಸಂಘ ಸಂಸ್ಥೆಗಳು ಜಾರಿ ಮಾಡುವ ಯೋಜನೆಗಳು ದಾರಿ ತಪ್ಪುತ್ತಿರುವುದು ಗೊತ್ತೆ ಇದೆ. ಇದೆಲ್ಲದರ ನಡುವೆ ಬಡವರ ಹಸಿವು ನೀಗಿಸಲು ಹೊಸದೊಂದು ಪ್ರಯತ್ನ ಸದ್ದಿಲ್ಲದೆ ಹೈದರಾಬಾದಿನ ಮಹಿಳೆಯೊಬ್ಬರಿಂದ ಆರಂಭವಾಗಿದೆ.
ಈ ಯೋಜನೆ ಜಾರಿಯಾಗಲು ಯಾರ ಬಳಿ ತೆರಳಿ ಅರ್ಜಿ ನೀಡಬೇಕಾಗಿಲ್ಲ. ಇಲ್ಲವೇ ರಾಜಕಾರಣಿಗಳಿಗೆ ದುಂಬಾಲು ಬೀಳಬೇಕಿಲ್ಲ. ನೀವೇ ಈ ಯೋಜನೆಯ ಸೂತ್ರಧಾರ ಮತ್ತು ಪಾತ್ರಧಾರ. ನೀವು ಮಾಡಬೇಕಾದ್ದು ಇಷ್ಟೇ ಅಡುಗೆ ಮನೆಗೆ ಧಾವಿಸಿ ಒಂದು ಬಕೆಟ್ ಅಕ್ಕಿ ತೆಗದುಕೊಳ್ಳಿ ಸಮೀಪದ ಬಡವರ ಮನೆಗೆ ತೆರಳಿ ದಾನ ಮಾಡಿ, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ನಿಮ್ಮ ಸ್ನೇಹಿತರಿಗೂ ಸವಾಲು ಸ್ವೀಕರಿಸಲು ಆಹ್ವಾನ ನೀಡಿ.. (ಮೈಮೇಲೆ ನೀರು ಹೊಯ್ದುಕೊಳ್ಳಿ, ಇಲ್ಲಾ ದೇಣಿಗೆ ನೀಡಿ)

ಪ್ರಪಂಚದೆಲ್ಲೆಡೆ ಸದ್ದು ಮಾಡಿದ್ದ 'ಎಎಲ್ಎಸ್ ಐಸ್ ಬಕೆಟ್ ಚಾಲೆಂಜ್' ಅತ್ತ ಮುಗಿಯುತ್ತಾ ಬಂದಿದ್ದರೇ ಇತ್ತ ಹೈದರಾಬಾದಿನ ಪತ್ರಕರ್ತೆ ಮಂಜು ಲತಾ ಕಲಾ ಕಲಾನಿಧಿ ಹೊಸದೊಂದು 'ರೈಸ್ ಬಕೆಟ್ ಚಾಲೆಂಜ್' ಎಂಬ ವಿನೂತನ ಪ್ರಯತ್ನ ಆರಂಭಿಸಿದ್ದಾರೆ.
ಅಮೆರಿಕದ ಕೋರಿ ಗಿರ್ಫಿನ್ ಅವರ ಐಸ್ ಬಕೆಟ್ ಚಾಲೆಂಜ್ನಿಂದ ಸ್ಫೂರ್ತಿ ಪಡೆದ ಹೈದರಾಬಾದಿನ ಪತ್ರಕರ್ತೆ ಮಂಜು ಲತಾ ಕಲಾನಿಧಿ ಹೊಸದೊಂದು ಪರಂಪರೆ ಆರಂಭಿಸಿದ್ದಾರೆ. ಬಡವರ ಮತ್ತು ದೀನದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ರೈಸ್ ಬಕೆಟ್ ಚಾಲೆಂಜ್ ಜಾರಿಗೆ ಬಂದಿದೆ.
ಅವರೇ ರೂಪಿಸಿದ ರೈಸ್ ಬಕೆಟ್ ಚಾಲೆಂಜ್ ಅನ್ವಯ ಬಡವರೊಬ್ಬರಿಗೆ ಬಕೆಟ್ ತುಂಬಾ ಅಕ್ಕಿ ದಾನ ನೀಡಿದ ಮಂಜು ಲತಾ ತಮ್ಮ ಫೊಟೊವನ್ನು ಆಗಸ್ಟ್ 22ರಂದು ಫೇಸ್ಬುಕ್ನಲ್ಲಿ ಹಂಚಿದ್ದಾರೆ. ಕೆಲವೇ ತಾಸಿನಲ್ಲಿ ಸಾವಿರಾರು ಪ್ರತಿಕ್ರಿಯೆ ಬಂದಿದ್ದು ಈಗಾಗಲೇ ಅನೇಕರು ಚಾಲೆಂಜ್ ಸ್ವೀಕರಿಸಿದ್ದಾರೆ. ಅನೇಕ ಬಡವರ ಹಸಿವು ಇಂಗಿದೆ.
ಹಾಗಾದರೆ ಇನ್ನೇಕೆ ತಡ ನೀವು ಅಡುಗೆ ಮನೆಗೆ ಧಾವಿಸಿ ಒಂದು ಬಕೆಟ್ ಅಕ್ಕಿ ಕೈಗೆತ್ತಿಕೊಳ್ಳಿ...
ಏನಿದು ರೈಸ್ ಬಕೆಟ್ ಚಾಲೆಂಜ್?
* ನಿಮ್ಮ ಮನೆಯ ಅಡುಗೆ ಕೋಣೆಗೆ ಧಾವಿಸಿ.
* ಅಲ್ಲಿಂದ ಒಂದು ಬಕೆಟ್ ಅಕ್ಕಿ ತೆಗೆದುಕೊಳ್ಳಿ
* ಸಮೀಪದ ಬಡವರ ನಿವಾಸದ ಬಳಿ ತೆರಳಿ ಅವರಿಗೆ ಅಕ್ಕಿ ದಾನ ಮಾಡಿ.
* ಅಕ್ಕಿ ದಾನ ನೀಡುತ್ತಿರುವ ಫೋಟೊ ತೆಗೆದುಕೊಳ್ಳಲು ಮರೆಯಬೇಡಿ
* ನಂತರ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ.
* ನಿಮ್ಮ ಸ್ನೇಹಿತರಿಗೆ ಟ್ಯಾಗ್ ಮಾಡುವ ಮೂಲಕ ಅವರಿಗೂ 'ರೈಸ್ ಬಕೆಟ್ ಚಾಲೆಂಜ್' ತೆಗೆದುಕೊಳ್ಳುವಂತೆ ಸವಾಲು ಹಾಕಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications