Vande Bharat Express: ಹೊಸ ಮಾರ್ಗದಲ್ಲಿ ರೈಲು ಓಡಿಸಲು ಸಮೀಕ್ಷೆ
ಬೆಂಗಳೂರು, ಜುಲೈ 31; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಭಾರೀ ಬೇಡಿಕೆ ಇದೆ. ದೇಶದಲ್ಲಿ 25 ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸುತ್ತಿದೆ. ವಿವಿಧ ರಾಜ್ಯಗಳು ಹೊಸ ಹೊಸ ಮಾರ್ಗದಲ್ಲಿ ರೈಲು ಓಡಿಸಲು ಬೇಡಿಕೆ ಇಟ್ಟಿವೆ. ಕರ್ನಾಟಕದಲ್ಲಿ ಎರಡು ಮಾರ್ಗದಲ್ಲಿ ವಂದೇ ಭಾರತ್ ಓಡುತ್ತಿದೆ.
2023ರ ಆಗಸ್ಟ್ 15ರೊಳಗೆ 75 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ ದಿಚಾಚರಣೆಯಂದು ಘೋಷಣೆ ಮಾಡಿದ್ದರು. ಆದರೆ ರೈಲು ಬೋಗಿಗಳ ತಯಾರಿ, ರೈಲಿನ ವೇಗಕ್ಕೆ ಅನುಗುಣವಾಗಿ ಹಳಿಗಳ ಸೌಲಭ್ಯ ಇಲ್ಲದಿರುವುದು, ಮೂಲ ಸೌಕರ್ಯಗಳ ಕೊರತೆಯ ಕಾರಣ ಅದು ಸಾಧ್ಯವಾಗಲಿಲ್ಲ.

ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇರುವ ಬೇಡಿಕೆಯನ್ನು ಗಮನಿಸಿರುವ ಭಾರತೀಯ ರೈಲ್ವೆ ಹಲವು ಹೊಸ ಮಾರ್ಗದಲ್ಲಿ ರೈಲು ಓಡಿಸಲು ತೀರ್ಮಾನಿಸಿದೆ. ರೈಲ್ವೆ ಸಚಿವಾಲಯ ವಲಯದ ಮ್ಯಾನೇಜರ್ಗಳಿಗೆ ಈ ಕುರಿತು ಸೂಚನೆಯೊಂದನ್ನು ನೀಡಿದೆ. ಯಾವ ಮಾರ್ಗದಲ್ಲಿ ರೈಲು ಓಡಿಸಬಹುದು ಎಂದು ಸಮೀಕ್ಷೆಯನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸಮೀಕ್ಷೆ ನಡೆಸಲು ಸೂಚನೆ; ಯಾವ-ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಬಹುದು ಎಂದು ರೈಲ್ವೆ ಸಚಿವಾಲಯ ಸಮೀಕ್ಷೆ ನಡೆಸಲಿದೆ. ಇದಕ್ಕಾಗಿ ಎಲ್ಲಾ ರೈಲ್ವೆ ವಲಯಗಳ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರಿಗೆ ನಿರ್ದೇಶನವೊಂದನ್ನು ನೀಡಿದೆ. ನಿಮ್ಮ ವಲಯದಲ್ಲಿ ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದೆ.
ಈ ಸಮೀಕ್ಷೆಯ ಮಾದರಿ ಹೇಗಿರಬೇಕು? ಎಂದು ಸಹ ರೈಲ್ವೆ ಸಚಿವಾಲಯ ತಿಳಿಸಿದೆ. ಈಗ ಇರುವ ರೈಲುಗಳು, ಬಸ್ ಮಾರ್ಗ, ವಿಮಾನ ಸಂಪರ್ಕ, ವಂದೇ ಭಾರತ್ ರೈಲು ಸಂಚಾರ ಆರಂಭಿಸಿದರೆ ಆಗುವ ಉಪಯೋಗ ಹೀಗೆ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವರವಾದ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸುವಂತೆ ಸೂಚನೆ ನೀಡಲಾಗಿದೆ.
ವಂದೇ ಭಾರತ್ ರೈಲು ಆರಂಭವಾಗುವ, ತಲುಪುವ ಸ್ಥಳಗಳು. ಎಷ್ಟು ಟ್ರಿಪ್ ಸಂಚಾರ ನಡೆಸಬಹುದು. ಮಾರ್ಗದಲ್ಲಿ ಐಟಿ ಹಬ್ಗಳು ಇವೆಯೇ?, ವಾಣಿಜ್ಯ ಚಟುವಟಿಕೆಗಳು ಹೇಗಿವೆ, ರಾಜ್ಯ ಅಥವ ಜಿಲ್ಲೆಯ ಮುಖ್ಯ ನಗರಗಳನ್ನು ಈ ರೈಲುಗಳು ಸಂಪರ್ಕಿಸಲಿವೆಯೇ? ಹೀಗೆ ವಿವಿಧ ಆಯಾಮದಲ್ಲಿ ಸಮೀಕ್ಷೆ ನಡೆಯಲಿದೆ.
ಪ್ರಸ್ತುತ ಭಾರತೀಯ ರೈಲ್ವೆ ಕಡಿಮೆ ಅಂತರದ ನಗರಗಳ ನಡುವೆ 8 ಬೋಗಿಗಳ ವಂದೇ ಭಾರತ್ ರೈಲು ಓಡಿಸುತ್ತಿದೆ. ಮೊದಲು 16 ಬೋಗಿಯ ರೈಲುಗಳನ್ನು ಓಡಿಸುತ್ತಿತ್ತು. ಈಗ ರೈಲು ಸಂಚಾರ ನಡೆಸುತ್ತಿರುವ ಎಲ್ಲಾ ಮಾರ್ಗದಲ್ಲಿ ಸೀಟು ಭರ್ತಿಯಾಗುವ ಪ್ರಮಾಣ ನೋಡಿಕೊಂಡು ಶೇ 50ಕ್ಕಿಂತ ಕಡಿಮೆ ಸೀಟು ಭರ್ತಿಯಾಗುತ್ತಿದ್ದರೆ, ದರವನ್ನು ಕಡಿಮೆ ಮಾಡುವ ಮೂಲಕ ಇನ್ನಷ್ಟು ಜನಸ್ನೇಹಿಯಾಗಿಲು ಸಹ ಇಲಾಖೆ ಕ್ರಮಗಳನ್ನು ಕೈಗೊಂಡಿದೆ.
ಮುಂದಿನ ದಿನಗಳಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗುವ, ಐಷಾರಾಮಿ ರೈಲು ಪ್ರಯಾಣದ ಅನುಭವ ನೀಡುವ ಹವಾನಿಯಂತ್ರಣ ರಹಿತ, ಕಡಿಮೆ ಪ್ರಯಾಣ ದರದ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಸಹ ಇಲಾಖೆ ಮುಂದಾಗಿದೆ. ಇದರ ಜೊತೆಗೆ ದೂರ ಪ್ರಯಾಣದ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಸಹ ಆರಂಭಿಸಲಿದೆ.
ಕರ್ನಾಟಕಕ್ಕೆ ಹೊಸ ರೈಲು; ಕರ್ನಾಟಕದ ರಾಜ್ಯದಲ್ಲಿ ಪ್ರಸ್ತುತ 2 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಸಂಚಾರ ನಡೆಸುತ್ತಿವೆ. ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ರೈಲು 2022ರಲ್ಲಿ ಆರಂಭಗೊಂಡಿತ್ತು. 2023ರಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲಾಗಿದೆ. ಎರಡೂ ಮಾರ್ಗದಲ್ಲಿಯೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಇದೆ.
ಮುಂದಿನ ದಿನಗಳಲ್ಲಿ ಬೆಂಗಳೂರು-ಹೈದರಾಬಾದ್, ಬೆಂಗಳೂರು-ಮಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಂದೇ ಭಾರತ್ ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಆದರೆ ರೈಲ್ವೆ ಇಲಾಖೆ ಅಧಿಕೃತವಾಗಿ ಕರ್ನಾಟಕದ ಯಾವ ಮಾರ್ಗಕ್ಕೂ ಇನ್ನೂ ಹೊಸ ವಂದೇ ಭಾರತ್ ಘೋಷಣೆ ಮಾಡಿಲ್ಲ.
ಅಂದಹಾಗೆ ದೇಶದಲ್ಲಿ ಮೊದಲ ವಂದೇ ಭಾರತ್ ರೈಲು ಆರಂಭವಾಗಿದ್ದು 2019ರ ಫೆಬ್ರವರಿ 18ರಂದು. ನವದೆಹಲಿ-ವಾರಣಾಸಿ ಮಾರ್ಗದಲ್ಲಿ. ದೇಶದ 5ನೇ ರೈಲು ಮೈಸೂರು-ಬೆಂಗಳೂರು-ಚೆನ್ನೈ ನಡುವೆ 10, ನವೆಂಬರ್ 2022ರಲ್ಲಿ ಆರಂಭಗೊಂಡಿತು. 10ನೇ ರೈಲು ಮುಂಬೈ-ಸೊಲ್ಲಾಪುರ ನಡುವೆ ಸಂಚಾರ ನಡೆಸುತ್ತಿದೆ. 20ನೇ ರೈಲು ಪಾಟ್ನಾ ಮತ್ತು ರಾಂಚಿ ನಡುವೆ ಸಂಪರ್ಕ ಕಲ್ಪಿಸುತ್ತಿದೆ.












Click it and Unblock the Notifications