ರಾಷ್ಟ್ರಪತಿ ಚುನಾವಣೆ: ಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆ
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿ ದಲಿತ ಸಮುದಾಯದ ಮೀರಾ ಕುಮಾರ್ ಎಂದು ಪ್ರಕಟಿಸುತ್ತಿದ್ದಂತೆಯೇ, ಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆಯಾಗಿದೆ.
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ತನ್ನ ಅಭ್ಯರ್ಥಿ ಪ್ರಕಟಿಸುತ್ತಿದ್ದಂತೆಯೇ, ಬಿಜೆಪಿ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆಯಾಗಿದೆ.
ದಲಿತ ಸಮುದಾಯದ ಮತ್ತು ಉತ್ತರಪ್ರದೇಶ ಮೂಲದ ರಾಮನಾಥ ಕೋವಿಂದ್ ಅವರನ್ನು ಎನ್ಡಿಎ ಮೈತ್ರಿಕೂಟ ತನ್ನಅಭ್ಯರ್ಥಿಯೆಂದು ಘೋಷಿಸಿದ ಬೆನ್ನಲ್ಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದ ಮಾಯಾವತಿ ಈಗ ಉಲ್ಟಾ ಹೊಡೆದಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೀರಾ
ಗುರುವಾರ (ಜೂ 22) ಸುದ್ದಿಗಾರರೊಂದಿಗೆ ಮತನಾಡುತ್ತಿದ್ದ ಬಹುಜನ ಸಮಾಜಪಕ್ಷದ ಮುಖಂಡ ಸತೀಶ್ ಮಿಶ್ರಾ, ರಾಷ್ಟ್ರಪತಿ ಚುನಾವಣೆಯಲ್ಲಿ ನಮ್ಮ ಪಕ್ಷ ಮೀರಾ ಕುಮಾರ್ ಅವರನ್ನು ಬೆಂಬಲಿಸಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಯಾವತಿ ನಿರ್ಧಾರದಿಂದ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮೊದಲ ಹಿನ್ನಡೆಯಾಗಿದೆ. ರಾಮನಾಥ್ ಕೋವಿಂದ್ ಅವರನ್ನು ಬಿಜೆಪಿ ತಮ್ಮ ಅಭ್ಯರ್ಥಿಯೆಂದು ಘೋಷಿಸಿದ ನಂತರ, ನಮ್ಮ ಬೆಂಬಲ ಕೋವಿಂದ್ ಅವರಿಗೆ, ಈ ಬಗ್ಗೆ ದೂಸ್ರಾ ಮಾತೇ ಇಲ್ಲ ಎಂದು ಮಾಯಾವತಿ ಹೇಳಿಕೆ ನೀಡಿದ್ದರು.
ಮಾಜಿ ಉಪಪ್ರಧಾನಿ ಬಾಬೂ ಜಗಜೀವನರಾಂ ಅವರ ಪುತ್ರಿ ಮತ್ತು ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮೀರಾ ಕುಮಾರ್ ಅವರ ಸ್ಪರ್ಧೆಯಿಂದ ಎನ್ಡಿಎ ಮೈತ್ರಿಕೂಟಕ್ಕೆ ಈಗಾಗಲೇ ಬೆಂಬಲ ಸೂಚಿಸಿರುವ ಪ್ರಾದೇಶಿಕ ಪಕ್ಷಗಳು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇಲ್ಲದಿಲ್ಲ. ನಿತೀಶ್ ಭೇಟಿಯಾಗಲಿರುವ ಲಾಲೂ, ಮುಂದೆ ಓದಿ..
ಮೊದಲು ಬೆಂಬಲ ಸೂಚಿಸಿ, ನಂತರ ಹಿಂದಕ್ಕೆ ಪಡೆದ ಬಿಎಸ್ಪಿ
ಮೊದಲು ಬೆಂಬಲ ಸೂಚಿಸಿ ನಂತರ ತಮ್ಮ ಹೇಳಿಕೆಗೆ ಕೊಂಚ ಮಾರ್ಪಾಡು ಮಾಡಿದ್ದ ಮಾಯಾವತಿ, ಯುಪಿಎ ಮೈತ್ರಿಕೂಟ ದಲಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ನಮ್ಮ ನಿರ್ಧಾರ ಬದಲಾಗಬಹುದು ಎನ್ನುವ ಹೇಳಿಕೆಯನ್ನು ಮಾಯಾ ನೀಡಿದ್ದರು. ಈಗ ಅಧಿಕೃತವಾಗಿ ಮೀರಾ ಕುಮಾರ್ ಬೆಂಬಲಿಸುವ ನಿರ್ಧಾರವನ್ನು ಬಿಎಸ್ಪಿ ಪ್ರಕಟಿಸಿದೆ.
ಬಿಎಸ್ಪಿಗೆ ಇರುವ ಒಟ್ಟು ಮತ
ರಾಷ್ಟ್ರಪತಿ ಚುನಾವಣೆಯಲ್ಲಿನ ಒಟ್ಟು 11,04,546 ಮತಗಳ ಪೈಕಿ, ಬಹುಜನ ಸಮಾಜಪಕ್ಷಕ್ಕೆ 8,200 ವೋಟುಗಳಿವೆ. 19 ಶಾಸಕರು, 6 ಸಂಸದರನ್ನು ಬಿಎಸ್ಪಿ ಹೊಂದಿದೆ. ಮೀರಾ ಕುಮಾರ್ ಅವರನ್ನು ಬೆಂಬಲಿಸುವ ಬಿಎಸ್ಪಿ ನಿರ್ಧಾರ, ಕಾಂಗ್ರೆಸ್ಸಿಗಾದ ಮೊದಲ ಮುನ್ನಡೆ.
ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ
ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ ಎನ್ನುವ ಲೆಕ್ಕಾಚಾರ ಸದ್ಯದ ಮಟ್ಟಿಗಿದ್ದರೂ, 'ದಲಿತ' ಎನ್ನುವ ಜಾತಿಸಮೀಕರಣದ ಲೆಕ್ಕಾಚಾರ ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆ ಇಲ್ಲದಿಲ್ಲ.
ಸೋನಿಯಾ ನೇತೃತ್ವದಲ್ಲಿ ನಡೆದ ಯುಪಿಎ ಮೈತ್ರಿಕೂಟದ ಸಭೆ
ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಯುಪಿಎ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಆರ್ಜೆಡಿ ಮುಖಂಡ ಲಾಲೂ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಮನವಿ ಮಾಡುತ್ತೇವೆ ಎಂದು ಲಾಲೂ ಹೇಳಿದ್ದಾರೆ.
ನಿತೀಶ್ - ಲಾಲೂ ಭೇಟಿ
ನಿತೀಶ್ ಬಳಿ ತೆರಳಿ, ಮೀರಾ ಕುಮಾರ್ ಅವರನ್ನು ಬೆಂಬಲಿಸುವಂತೆ ನನ್ನ ಪ್ರಯತ್ನವನ್ನು ನಾನು ಮಾಡಲಿದ್ದೇನೆ. ಅವರ ನಿರ್ಧಾರ ಏನಿದ್ದರೂ ಬಿಹಾರದಲ್ಲಿ ನಮ್ಮ ಮೈತ್ರಿಕೂಟದ ಸರಕಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಲಾಲೂ ಹೇಳಿದ್ದಾರೆ.