ರಾಮಾಯಣ, ಮಹಾಭಾರತದ ಕತೆ ಹೇಳಲಿವೆ ಅಂಚೆ ಚೀಟಿಗಳು
ನವದೆಹಲಿ, ಸೆಪ್ಟೆಂಬರ್. 03: ರಾಮಾಯಣ ಮತ್ತು ಮಹಾಭಾರತಕ್ಕೆ ಹೊಸ ಅರ್ಥ ಕಲ್ಪಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮಹಾಕಾವ್ಯಗಳ ಸನ್ನಿವೇಶ ಆಧರಿಸಿ ಅಂಚೆ ಚೀಟಿ ಹೊರತರಲು ನಿರ್ಧಾರ ಮಾಡಿದೆ.
ಕೇಂದ್ರ ಸರ್ಕಾರ ರಾಮಾಯಣ, ಮಹಾಭಾರತ ಒಳಗೊಂಡಂತೆ ಸ್ವಾತಂತ್ರ್ಯ ಸೇನಾನಿಗಳಾದ ಬುತುಕೇಶ್ವರ್ ದತ್, ಸುಖದೇವ್, ಅಶ್ಫಕ್ ಉಲ್ಲಾಖಾನ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಜಗುರು ಮತ್ತು ಗಾಯಯ ಮೊಹಮದ್ ರಫಿ, ಕಿಶೋರ್ ಕುಮಾರ್ ಭಾವಚಿತ್ರಗಳನ್ನು ಒಳಗೊಂಡ ಅಂಚೆ ಚೀಟಿ ಹೊರತರಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ತಿಳಿಸಿದ್ದಾರೆ.
ಮಹಾ ಕಾವ್ಯಗಳಿಗೆ, ಸ್ವಾತಂತ್ರ್ಯ ಸೇನಾನಿಗಳಿಗೆ ನಮನ ಸಲ್ಲಿಕೆ ಮಾಡುವುದು ನಮ್ಮ ಪ್ರತಿದಿನದ ಕೆಲಸವಾಗಬೇಕು. ಅವರ ಸ್ಮರಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂಚೆ ಚೀಟಿ ಮುದ್ರಣಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಮಹಿಳೆಯರ ಸಬಲೀಕರಣ ಕುರಿತಾದ ಅಂಚೆ ಚೀಟಿ ಬಿಡುಗಡೆ ಮಾಡಿದ ಕೇಂದ್ರ ಸಚಿರು, ದೇಶದಲ್ಲಿ ಮಹಿಳಾ ಪರ ಚಿಂತನೆಗಳಿಗೆ ಅದರದ್ದೇ ಆತ ಇತಿಹಾಸವಿದೆ. ಶಂಕರಾಚಾರ್ಯರ ಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನವನ್ನೇ ನೀಡಿಕೊಂಡು ಬರಲಾಗಿದೆ. ಸರ್ಕಾರ ಇದೆಲ್ಲವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳಲು ಅಂಚೆ ಚೀಟಿ ಹೊರ ತಂದಿದೆ ಎಂದು ಹೇಳಿದರು.
ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಕಾರ್ಯಕ್ರಮದಲ್ಲಿ ಹಾಜರಿದ್ದು, ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಮಹಿಳಾ ಸ್ವಾತಂತ್ರ್ಯ ಬಹಳ ಹಿಂದಿನಿಂದಲೇ ಜಾರಿಯಲ್ಲಿತ್ತು ಎಂದು ಹೇಳಿದರು.