"570 ಕೋಟಿ ರಫೇಲ್ ವಿಮಾನಕ್ಕೆ 1670 ಕೋಟಿ ನೀಡಿತಾ ಭಾರತ?"
ನವದೆಹಲಿ, ಜುಲೈ 04: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ. 59,000 ಕೋಟಿ ಮೌಲ್ಯದ ಒಪ್ಪಂದದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದರೂ, ಕೇಂದ್ರ ಸರ್ಕಾರ ಏಕೆ ಮೌನವಾಗಿದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಪ್ರಸ್ತುತ ಲಭ್ಯವಿರುವ ದಾಖಲೆಗಳ ಪ್ರಕಾರ, ರಫೇಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಮಧ್ಯವರ್ತಿಗೆ ಭಾರಿ ಮೊತ್ತದ ಹಣ ಪಾವತಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇದೇ ರಫೇಲ್ ಹಗರಣವನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ತದನಂತರದಲ್ಲಿ ಈ ವಿಷಯ ತೆರೆ ಮರೆಗೆ ಸರಿದಿತ್ತು.
36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಒಪ್ಪಂದ ನಡೆದಿತ್ತು. ಈ ವೇಳೆ ಭ್ರಷ್ಟಾಚಾರ ಹಾಗೂ ಪಕ್ಷಪಾತ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆ ಫ್ರಾನ್ಸ್ ನಲ್ಲಿ ನ್ಯಾಯಾಧೀಶರ ನೇತೃತ್ವದ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡ ಕಾರಿದೆ.


"ನವದೆಹಲಿಯತ್ತ ಇಡೀ ಜಗತ್ತು ನೋಡುತ್ತಿದೆ"
"ಭ್ರಷ್ಟಾಚಾರ, ಪ್ರಭಾವ ಬೀರುವಿಕೆ, ಹಣ ವರ್ಗಾವಣೆ, ಪಕ್ಷಾಂತರ ನಿಲುವು ಸೇರಿದಂತೆ ಹಲವು ವಿಷಯಗಳ ಬಗ್ಗೆ ತನಿಖೆ ನಡೆಸಲು ಫ್ರಾನ್ಸ್ ಆದೇಶಿಸಿ 24 ಗಂಟೆಗಳಾಗಿದೆ. ಇಡೀ ರಾಷ್ಟ್ರ, ಇಡೀ ಜಗತ್ತು ಈಗ ನವದೆಹಲಿಯತ್ತ ನೋಡುತ್ತಿದೆ. ಕೇಂದ್ರ ಸರ್ಕಾರವೇಕೆ ಮೌನವಾಗಿದೆ?", ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ್ ಪ್ರಶ್ನೆ ಮಾಡಿದ್ದಾರೆ.

"570 ಕೋಟಿ ಬದಲಿಗೆ 1670 ಕೋಟಿ ರೂಪಾಯಿ"
"ರಫೇಲ್ ಒಪ್ಪಂದದಲ್ಲಿ ನಾವು 570 ಕೋಟಿ ವೆಚ್ಚದ ವಸ್ತುವನ್ನು 1,670 ಕೋಟಿಗೆ ಖರೀದಿಸಿದ್ದೇವೆ ಎಂಬುದು ಈಗ ಸ್ಪಷ್ಟವಾಗುತ್ತಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯಿಂದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ದಾಖಲೆಗಳ ಪ್ರಕಾರ, ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ಮಧ್ಯವರ್ತಿಗೆ ಕೋಟಿ ಕೋಟಿ ರೂಪಾಯಿ ಹಣವನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ದಾಖಲೆಗಳನ್ನು ಇಟ್ಟುಕೊಂಡು ಜಾರಿ ನಿರ್ದೇಶನಾಲಯ ಏನು ಮಾಡಿದೆಯೋ ಗೊತ್ತಿಲ್ಲ, ಆದರೆ ಫ್ರಾನ್ಸ್ ಈ ದಾಖಲೆಗಳನ್ನು ಪರಿಶೀಲಿಸುತ್ತಿದೆ," ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರ್ ಹೇಳಿದ್ದಾರೆ.

'ಚೌಕೀದಾರ್ ಚೋರ್ ಹೈ' ಉಲ್ಲೇಖ
ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನೇ ಕಾಂಗ್ರೆಸ್ ಅಸ್ತ್ರವಾಗಿ ಬಳಸಿಕೊಂಡಿತು. ಯುದ್ಧ ವಿಮಾನ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು "ಚೌಕೀದಾರ್ ಚೋರ್ ಹೈ(ಕಾವಲುಗಾರನೇ ಕಳ್ಳ)" ಎಂಬ ಘೋಷಣೆ ಮೊಳಗಿಸಿತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಗಿಂತ 2019ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡ ಆಯಿತು.

ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಿಡಿಮಿಡಿ
"ರಫೇಲ್ ಯುದ್ಧವಿಮಾನ ಒಪ್ಪಂದದಲ್ಲಿ ರಾಹುಲ್ ಗಾಂಧಿ ಮೊದಲಿಗಿಂತಲೂ ಹೆಚ್ಚು ಸುಳ್ಳು ಹೇಳುತ್ತಿದ್ದಾರೆ. ಅವರು ವರ್ತಿಸುವ ಪರಿಯನ್ನು ಸ್ಪರ್ಧಾತ್ಮಕ ಜಗತ್ತಿನ ಖಾಸಗಿ ಕಂಪನಿಗಳು ಪ್ಯಾದೆಯ ರೀತಿ ಬಳಸಿಕೊಳ್ಳುತ್ತಿರುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಬಹುಶಃ ಅವರು ಗಾಂಧಿ ಕುಟುಂಬದ ಒಬ್ಬ ಏಜೆಂಟರಂತೆ ವರ್ತಿಸುತ್ತಿದ್ದಾರೆ," ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ತಿರುಗೇಟು ನೀಡಿದ್ದಾರೆ.












Click it and Unblock the Notifications