ಭಾರತ ಅರ್ಥವ್ಯವಸ್ಥೆ ವೇಗವಾಗಿ ಕುಸಿಯುತ್ತಿದೆ: ನೊಬೆಲ್ ವಿಜೇತ ಅಭಿಜಿತ್
ಬೆಂಗಳೂರು, ಅಕ್ಟೋಬರ್ 15: ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪುರಸ್ಕಾರ ಪಡೆದಿರುವ ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಅವರು ಭಾರತದ ಅರ್ಥವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಹೊರಬಿದ್ದಿದ್ದು, ಅದು ದೇಶದ ನಗರ ಮತ್ತು ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಒದಗಿಸುತ್ತದೆ. ಈ ಅಂಕಿ-ಅಂಶವು ಬಹುವಾಗಿ ಕುಸಿದಿದ್ದು, 2014 ರಿಂದ ಕುಸಿತ ಆರಂಭವಾಗಿದೆ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.
ಈ ರೀತಿಯ ಕೆಟ್ಟ ಕುಸಿತ ಬಹಳ ವರ್ಷಗಳ ನಂತರ ನಡೆದಿದೆ. ಇದು ಬಹಳ ಆತಂಕಕಾರಿ ಮತ್ತು ಎಚ್ಚರಿಕೆ ವಹಿಸಬೇಕಾದ ಅಂಶ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಯಾವ ಅಂಕಿ-ಅಂಶ ಸರಿಯಾಗಿದೆ ಎಂದು ಈಗ ಭಾರತದಲ್ಲಿ ದೊಡ್ಡ ಜಗಳವೇ ನಡೆಯುತ್ತಿದೆ. ಸರ್ಕಾರ ಒಂದು ಅಂಕಿ-ಅಂಶ ಕೊಡುತ್ತಿದ್ದರೆ ಅರ್ಥಶಾಸ್ತ್ರಜ್ಞರು ಬೇರೆ ಸಂಖ್ಯೆಯನ್ನು ನೀಡುತ್ತಿದ್ದಾರೆ. ತನಗೆ ವಿರುದ್ಧವಾಗಿರುವ ಈ ಅಂಕಿ-ಅಂಶವನ್ನು ಸರ್ಕಾರ ಒಪ್ಪುತ್ತಿಲ್ಲ ಎಂದು ಅವರು ಹೇಳಿದರು.
ಇದೆಲ್ಲವೂ ಏನೇ ಆಗಲಿ, ಭಾರತದ ಆರ್ಥಿಕತೆ ಬಹಳ ವೇಗವಾಗಿ ಕುಸಿಯುತ್ತಿರುವುದಂತೂ ನಿಜ, ಎಷ್ಟು ವೇಗವಾಗಿ ಕುಸಿಯುತ್ತಿದೆ ಎಂದು ಪ್ರಮಾಣ ಹೇಳಲು ಈಗ ಸಾಧ್ಯವಿಲ್ಲವಾದರೂ ವೇಗವಾಗಿ ಕುಸಿಯುತ್ತಿರುವುದು ದಿಟ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದವರಾಗಿರುವ ಅಭಿಜಿತ್ ಬ್ಯಾನರ್ಜಿ ಅವರು ಜೆಎನ್ಯು ವಿದ್ಯಾರ್ಥಿಯಾಗಿದ್ದರು. ಪ್ರಸ್ತುತ ಅಮೆರಿಕದಲ್ಲಿ ವಾಸವಿರುವ ಅಭಿಜಿತ್ ಅವರಿಗೆ ಈ ಬಾರಿ ಅರ್ಥಶಾಸ್ತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ದೊರೆತಿದೆ. ಅವರೊಂದಿಗೆ ಪತ್ನಿ ಎಸ್ತೆರೊ ಡಫ್ಲೊ ಅವರಿಗೂ ನೊಬೆಲ್ ನೀಡಲಾಗಿದೆ.












Click it and Unblock the Notifications