ಆರ್ಥಿಕ ಹಿಂಜರಿತದತ್ತ ದೇಶದ ಆರ್ಥಿಕತೆ : ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಸೆಪ್ಟೆಂಬರ್ 19: ದೇಶದ ಆರ್ಥಿಕತೆ 'ಮಹಾ ಹಿಂಜರಿತ'ದತ್ತ ತೆರಳುತ್ತಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
'ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಸದ್ಯದಲ್ಲೇ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ಭಾರತದ ಆರ್ಥಿಕತೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದಾಗಿ ಒಂದೂವರೆ ವರ್ಷ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿಗೆ 16 ಪುಟಗಳ ಪತ್ರವನ್ನೂ ಬರೆದಿದ್ದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
"ಸದ್ಯದಲ್ಲೇ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಬೇಕಾಗಬಹುದು. ದೇಶದ ಆರ್ಥಿಕತೆಯನ್ನು ಮೇಲೆತ್ತಲು ಹಲವು ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಒಂದೊಮ್ಮೆ ಇದನ್ನು ಮಾಡದೇ ಹೋದರೆ ಭಾರೀ ಆರ್ಥಿಕ ಹಿಂಜರಿತ ಎದುರಿಸಲಿದ್ದೇವೆ. ಇದರಿಂದ ಬ್ಯಾಂಕಿಂಗ್ ವ್ಯವಸ್ಥೆ ನಾಶವಾಗಬಹುದು. ಕೈಗಾರಿಕೆಗಳು ಬಾಗಿಲೆಳೆದುಕೊಳ್ಳಬಹುದು," ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
"ಆರ್ಥಿಕತೆಯನ್ನು ಮೇಲೆತ್ತಲು ಜನರನ್ನು ಉತ್ತೇಜಿಸುವುದು ಅನಿವಾರ್ಯ. ಇದಕ್ಕಾಗಿ ಆದಾಯ ತೆರಿಗೆಯನ್ನು ರದ್ದುಗೊಳಿಸಬೇಕು," ಎಂದು ಅವರು ಹೇಳಿದ್ದಾರೆ. ಜತೆಗೆ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಗಳಿಗೆ ನೀಡುತ್ತಿರುವ ಸಾಲದ ಮೇಲಿನ ಬಡ್ಡಿದರವನ್ನು ಶೇಕಡಾ 9ಕ್ಕಿಂತಲೂ ಕಡಿಮೆಗೊಳಿಸಬೇಕು. ಜತೆಗೆ ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆಯೂ ಶೇ. 9 ರವರೆಗೆ ಬಡ್ಡಿ ನೀಡಬೇಕು," ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಮಾಜಿ ಪ್ರಧಾನಿ ಮತ್ತು ಹಿರಿಯ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ದೇಶದ ಜಿಡಿಪಿ ಮತ್ತಷ್ಟು ಕುಸಿತವಾಗಲಿದೆ ಎಂದು ಸೋಮವಾರ ಹೇಳಿದ್ದರು. ಇದಾದ ಬೆನ್ನಿಗೆ ಇದೀಗ ಸ್ವತಃ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಆರ್ಥಿಕ ಹಿಂಜರಿತದ ಎಚ್ಚರಿಕೆಯನ್ನು ನೀಡಿದ್ದಾರೆ.












Click it and Unblock the Notifications