ಉಗ್ರರ ದಾಳಿ ಸಂಚು: ಪಾಕ್ ಹೈಕಮಿಷನ್ಗೆ ಸಮನ್ಸ್ ನೀಡಿದ ಭಾರತ
ನವದೆಹಲಿ, ನವೆಂಬರ್ 21: ಜಮ್ಮು ಮತ್ತು ಕಾಶ್ಮೀರದ ನಗ್ರೊಟಾದಲ್ಲಿ ಗುರುವಾರ ನಡೆದ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ನಾಲ್ವರು ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರರು ಭಾರತದಲ್ಲಿ ಭಾರಿ ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ವರದಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಹೈ ಕಮಿಷನ್ನ ಅಧಿಕಾರಿಯೊಬ್ಬರಿಗೆ ಶನಿವಾರ ಸಮನ್ಸ್ ನೀಡಿದ ಭಾರತ, ತನ್ನ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.
ಎನ್ಕೌಂಟರ್ನಲ್ಲಿ ಹತ್ಯೆಯಾದ ಭಯೋತ್ಪಾದಕರ ದೇಹದಿಂದ ವೈರ್ಲೆಸ್ ಸೆಟ್ಗಳು, ಬಟ್ಟೆಗಳು ಮತ್ತು ಔಷಧಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವು ಪಾಕಿಸ್ತಾನದ ಲಾಹೋರ್ ಮತ್ತು ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ತಯಾರಾದ ಗುರುತುಗಳನ್ನು ಹೊಂದಿದ್ದವು.
26/11 ರಂದು ಮತ್ತೊಂದು ದಾಳಿಗೆ ಜೈಷ್ ಉಗ್ರರಿಂದ ಸಂಚು: ಮೋದಿ
'ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಭಯೋತ್ಪಾದನಾ ದಾಳಿಯ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಭಾರತವು ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ತನ್ನ ನೆಲೆಯಿಂದ ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕಠಿಣ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ಸುರಕ್ಷತೆಯಾಗಿ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಭಾರತ ಸರ್ಕಾರ ದೃಢ ನಿಶ್ಚಯ ಹೊಂದಿದೆ' ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಆಗ ತಾನೆ ಭಾರತದೊಳಗೆ ನುಸುಳಿದ್ದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಉಗ್ರರಿದ್ದ ಗುಂಪನ್ನು ಟ್ರಕ್ ಒಂದರಲ್ಲಿ ಕರೆದೊಯ್ಯುತ್ತಿರುವ ಸುಳಿವು ದೊರೆತ ಭದ್ರತಾ ಪಡೆಗಳು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಒಂದರ ಬಳಿ ದಾಳಿ ನಡೆಸಿದ್ದವು. ಆಗ ನಡೆದ ಎನ್ಕೌಂಟರ್ನಲ್ಲಿ ಎಲ್ಲ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿತ್ತು. ಇಬ್ಬರು ಪೊಲೀಸರು ಗಾಯಗೊಂಡಿದ್ದರು.
ಜಮ್ಮು: ಟೋಲ್ ಪ್ಲಾಜಾ ಬಳಿ 4 ಉಗ್ರರ ಎನ್ಕೌಂಟರ್
ಈ ಸಂಬಂಧ ಶುಕ್ರವಾರ ಹಿರಿಯ ಭದ್ರತಾ ಅಧಿಕಾರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪರಾಮರ್ಶನಾ ಸಭೆ ನಡೆಸಿದ್ದರು. ಮುಂಬೈ ಭಯೋತ್ಪಾದನಾ ದಾಳಿ ನಡೆದಿದ್ದ ನವೆಂಬರ್ 26ರ ದಿನಾಂಕದಂದೇ ಭಾರಿ ದೊಡ್ಡ ಭಯೋತ್ಪಾದನಾ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದರು ಎನ್ನುವುದು ಬಹಿರಂಗವಾಗಿತ್ತು.