ಕಪ್ಪು ಹಣ ವಾಪಸ್ ಅನುಮಾನ, ಹೊರಹೋಗೋದು ತಪ್ಪಿಸಿ
ವಾಷಿಂಗ್ಟನ್, ಜ. 6: ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಆಶಾ ಭಾವನೆ ಮೂಡಿಸಿದ್ದವು. ಈಗೀಗ ದೇಶೀಯರಲ್ಲಿ ಶಂಕೆ ಮೂಡಲಾರಂಭಿಸಿದೆ.
ಮೊದಲು ಲಕ್ಷಾಂತರ ಕೋಟಿ ರುಪಾಯಿ ಕಪ್ಪು ಹಣ ವಿದೇಶದಲ್ಲಿದೆ ಎಂಬ ಸುದ್ದಿ ಹರಡಿತ್ತು. ಆದರೆ, ಕೇಂದ್ರ ಸರ್ಕಾರ ಈಚೆಗೆ ಬಿಡುಗಡೆ ಮಾಡಿದ ಅಂಕಿ-ಅಂಶ ಕೆಲವೇ ಸಾವಿರ ಕೋಟಿ ರು.ಗಳಷ್ಟಿತ್ತು. ಅಂತಾರಾಷ್ಟ್ರೀಯ ಕಾನೂನು ಅಡ್ಡಿ ಬರುವ ಭೀತಿಯ ಜೊತೆಗೆ ಸ್ವಿಟ್ಜರ್ಲೆಂಡ್ ಸರ್ಕಾರ ಕೂಡ ಕಪ್ಪು ಹಣವಂತರ ಹೆಸರು ಬಹಿರಂಗಗೊಳಿಸುವಂತಿಲ್ಲ ಎಂದು ನೇರವಾಗಿ ಹೇಳಿತ್ತು. ಈ ಎಲ್ಲ ಬೆಳವಣಿಗೆಗಳಿಂದ 'ಕಪ್ಪು ಹಣ ವಾಪಸ್ ಬರುತ್ತೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತೆ' ಎಂಬ ವಿಶ್ವಾಸ ಕರಗಲಾರಂಭಿಸಿದೆ. [ಸ್ವಿಸ್ ನಲ್ಲಿ 4,479, ಭಾರತದಲ್ಲಿಯೇ 14,958 ಕೋಟಿ ರು. ಕಪ್ಪು ಹಣ]

ಹೊರಹೋಗುವುದು ತಡೆಯಿರಿ : "ಭಾರತ ಕಪ್ಪು ಹಣವನ್ನು ವಾಪಸ್ ತರಲು ಚಿಂತಿಸುವ ಬದಲು ಹೊರಹೋಗುವುದನ್ನು ಮೊದಲು ತಡೆಯಲಿ" ಎಂದು ಈಗ ಅಮೆರಿಕ ಮೂಲದ ಗ್ಲೋಬಲ್ ಫೈನಾನ್ಶಿಯಲ್ ಇಟೆಗ್ರಿಟಿ ಸಲಹೆ ನೀಡಿದೆ. ಈ ಅಭಿಪ್ರಾಯಕ್ಕೆ ಕೊಟ್ಟಿರುವ ಕಾರಣ, "ಭಾರತದ ಕಪ್ಪು ಹಣದ ಫಲಾನುಭವಿಗಳು ಅಮೆರಿಕ, ಬ್ರಿಟನ್ ಸೇರಿದಂತೆ ಇತರ ಶಕ್ತಿವಂತ ಪಾಶ್ಚಿಮಾತ್ಯ ರಾಷ್ಟ್ರಗಳೇ" ಎಂಬುದು! [ಕಪ್ಪು ಹಣ ವಾಪಸ್ ತರೋದು ಸುಲಭ ಅಲ್ಲ]
"ಭಾರತದಲ್ಲಿ 2003ರ ನಂತರ ಕಪ್ಪು ಹಣದ ಹೊರಹರಿವು ಅತ್ಯಧಿಕವಾಗಿದೆ. ಆದ್ದರಿಂದ ಇದನ್ನು ನಿಯಂತ್ರಿಸಲು ಭಾರತ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು" ಎಂದು ಗ್ಲೋಬಲ್ ಫೈನಾನ್ಶಿಯಲ್ ಇಟೆಗ್ರಿಟಿ ಅಧ್ಯಕ್ಷ ರೇಮಂಡ್ ಬೇಕರ್ ಅಭಿಪ್ರಾಯಪಟ್ಟಿದ್ದಾರೆ.
"2003ರಲ್ಲಿ 10 ಬಿಲಿಯನ್ ಡಾಲರ್ ಕಪ್ಪು ಹಣ ಭಾರತದಿಂದ ಹೊರಕ್ಕೆ ಹರಿದಿದ್ದರೆ, 2012ರಲ್ಲಿ 94.7 ಬಿಲಿಯನ್ ಡಾಲರ್ ಹೊರಹೋಗಿದೆ. ಪ್ರಸ್ತುತ ಚೀನಾ, ರಷ್ಯಾ ಹಾಗೂ ಮೆಕ್ಸಿಕೊ ನಂತರ ಭಾರತದಿಂದಲೇ ಹೆಚ್ಚು ಕಪ್ಪು ಹಣ ಹೊರಹೋಗುತ್ತಿದೆ. ತೆರಿಗೆ ವಂಚನೆಯೇ ಕಪ್ಪುಹಣದ ದೊಡ್ಡ ಮೂಲ" ಎಂದು ಬೇಕರ್ ಹೇಳಿದ್ದಾರೆ. [ಈಗಿನ ಪಟ್ಟಿಯಲ್ಲಿ ಶೇ. 1ರಷ್ಟೂ ಹೆಸರಿಲ್ಲ]
ಮೋದಿ ಮೇಲೆ ವಿಶ್ವಾಸ : "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ರಾಷ್ಟ್ರಗಳ ಮೇಲೆ ಒತ್ತಡ ಹೇರಿದರೆ ಮೂಲಕ ಕಪ್ಪುಹಣ ಹೊರಹರಿವು ನಿಯಂತ್ರಣ ಹಾಗೂ ವಾಪಸ್ ತರುವ ಪ್ರಕ್ರಿಯೆ ಪರಿಣಾಮಕಾರಿಯಾಗಬಹುದು" ಎಂದಿದ್ದಾರೆ.
"ಈಚಿನ ದಿನಗಳಲ್ಲಿ ಹೊರಹೋಗಿದ್ದ ಕಪ್ಪು ಹಣ ಭಾರತಕ್ಕೆ ವಾಪಸ್ ಬರುತ್ತಿದೆ. ಮಾರಿಷಸ್ ಅಥವಾ ಯುರೋಪಿಯನ್ ಮೂಲಕ ವಿದೇಶಿ ನೇರ ಬಂಡವಾಳದ ರೂಪದಲ್ಲಿ ಕಪ್ಪು ಹಣ ವಾಪಸ್ ಬರುತ್ತಿದೆ" ಎಂದು ಬೇಕರ್ ಅಭಿಪ್ರಾಯಪಟ್ಟಿದ್ದಾರೆ. [ಕಪ್ಪು ಹಣ ವಾಪಸಾತಿಗೆ ಸಹಕಾರ ಕೋರಿದ ಮೋದಿ]
ನಗದು ರಹಿತ ಬ್ಯಾಂಕಿಂಗ್ : ಕಪ್ಪು ಹಣ ಹೊರಹರಿವು ನಿಯಂತ್ರಣ ಹಾಗೂ ವಾಪಸ್ ತರಲು ನಿರಂತರ ರಣತಂತ್ರ ರೂಪಿಸುತ್ತಿರುವ ನರೇಂದ್ರ ಮೋದಿ, ಬ್ಯಾಂಕ್ಗಳು ಹೆಚ್ಚು ಹೆಚ್ಚು ನಗದು ರಹಿತ ವ್ಯವಹಾರ ನಡೆಸಬೇಕು. ಇದು ಕಪ್ಪು ಹಣ ತಡೆಯಲು ಪರಿಣಾಮಕಾರಿ ಪರಿಹಾರವಾಗಬಲ್ಲದು ಎಂದು ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications