ಅಫ್ಘಾನ್ ಜನರೊಂದಿಗೆ ಭಾರತ ಐತಿಹಾಸಿಕ ಸಂಬಂಧ ಹೊಂದಿದೆ; ಜೈಶಂಕರ್
ನವದೆಹಲಿ, ಆಗಸ್ಟ್ 20: ಭಾರತ ಅಫ್ಘಾನ್ ಜನರೊಂದಿಗೆ ಐತಿಹಾಸಿಕ ಸಂಬಂಧ ಹೊಂದಿದೆ. ಈ ಸಂಬಂಧ ಎರಡು ದೇಶಗಳ ಆಲೋಚನೆ ಹಾಗೂ ದೃಷ್ಟಿಕೋನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಗುರುವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಫ್ಘಾನಿಸ್ತಾನದ ಅಸ್ಥಿರ ಪರಿಸ್ಥಿತಿ ಕುರಿತು ಮಾತನಾಡುತ್ತಾ ಈ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ವಿಶ್ವ ಭದ್ರತಾ ಮಂಡಳಿಯಲ್ಲಿ ಉನ್ನತ ಮಟ್ಟದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ 'ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು' ವಿಷಯದ ಕುರಿತು ಮಾತನಾಡಿದರು. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆದುಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದೇವೆ ಎಂದು ತಿಳಿಸಿದರು.

'ನಾವು ಅಫ್ಘಾನ್ ಜನರೊಂದಿಗೆ ಐತಿಹಾಸಿ ಸಂಬಂಧ ಹೊಂದಿದ್ದೇವೆ ಮತ್ತು ಆ ಸಂಬಂಧವು ನಮ್ಮ ಆಲೋಚನೆಗಳು ಹಾಗೂ ದೃಷ್ಟಿಕೋನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರೆಸುತ್ತದೆ ಎಂದು ನಾನು ಭಾವಿಸಿದ್ದೇನೆ' ಎಂದು ಹೇಳಿದರು.
'ನಾವು ಈ ವಿಷಯದಲ್ಲಿ ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ನಿರ್ವಹಿಸುತ್ತಿದ್ದೇವೆ. ವಿಶೇಷವಾಗಿ ಅಮೆರಿಕದೊಂದಿಗೆ' ಎಂದರು.
ತಾಲಿಬಾನ್ ಭಾನುವಾರ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಅಫ್ಘಾನ್ ರಾಜಧಾನಿಯಲ್ಲಿ ಉದ್ವಿಗ್ನತೆ, ಭಯ ಮತ್ತು ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ ಭಾರತ ಮಂಗಳವಾರ ತನ್ನ ರಾಯಭಾರಿ ರುದ್ರೇಂದ್ರ ಟಂಡನ್ ಮತ್ತು ಸಿಬ್ಬಂದಿಯನ್ನು ಸೇನಾ ಸಾರಿಗೆ ವಿಮಾನದಲ್ಲಿ ಕರೆಸಿಕೊಂಡಿತು.
ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಸೇರಿದಂತೆ ಸುಮಾರು 200 ಭಾರತೀಯರು ಸಿಲುಕಿಕೊಂಡಿದ್ದರು. "ಕಾಬೂಲ್ನಲ್ಲಿ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಭಾರತಕ್ಕೆ ಮರಳಲು ಬಯಸುವವರ ಆತಂಕ ನಮಗೆ ತಿಳಿದಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಈ ಸಂದರ್ಭದಲ್ಲಿ ಮುಖ್ಯ ಸವಾಲಾಗಿದೆ. ಆ ನಿಟ್ಟಿನಲ್ಲಿ ಪಾಲುದಾರರೊಂದಿಗೆ ಚರ್ಚೆಗಳು ನಡೆಯುತ್ತಿದೆ," ಎಂದು ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದರು.
20 ವರ್ಷಗಳ ನಂತರ ಅಫ್ಘಾನ್ನಿಂದ ಅಮೆರಿಕ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನನ್ನು ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಳೆದ ಕೆಲವು ತಿಂಗಳಿಂದ, ಅಂದರೆ ಅಮೆರಿಕ ಮಿಲಿಟರಿ ಹೊರ ಹೋಗಲು ತೀರ್ಮಾನಿಸಿದ ಬಳಿಕ, ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಇದೀಗ ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ. ಆನಂತರ ಎಲ್ಲೆಲ್ಲೂ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇದರೊಂದಿಗೆ ಗುರುವಾರ ಅಫ್ಘಾನಿಸ್ತಾನ-ಭಾರತದ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಕೂಡ ಸ್ಥಗಿತಗೊಂಡಿದೆ. ಭಾರತದೊಂದಿಗೆ ಆಮದು ಹಾಗೂ ರಫ್ತು ವ್ಯವಹಾರವನ್ನು ತಾಲಿಬಾನ್ ಸ್ಥಗಿತಗೊಳಿಸಿದೆ.
ಪ್ರಸ್ತುತ ತಾಲಿಬಾನ್, ಭಾರತದಿಂದ ಪಾಕಿಸ್ತಾನದ ಮಾರ್ಗದಲ್ಲಿ ನಡೆಯುತ್ತಿದ್ದ ಸರಕು ಸಾಗಣೆಗೆ ತಡೆಒಡ್ಡಿದೆ. ಈ ಮೂಲಕ ದೇಶದಿಂದ ಆಮದನ್ನು ನಿಲ್ಲಿಸಿದೆ ಎಂದು ಭಾರತೀಯ ರಫ್ತು ಸಂಸ್ಥೆ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ತಿಳಿಸಿದ್ದಾರೆ. 'ನಾವು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆಮದು ಸರಕು ಸಾಮಗ್ರಿಗಳು ಪಾಕಿಸ್ತಾನದ ಮೂಲಕ ಸಾಗಬೇಕು. ಆದರೆ ಇಲ್ಲಿಯವರೆಗೂ ತಾಲಿಬಾನ್ ಆಮದು ಸಾಮಗ್ರಿಗಳ ಕಾರ್ಗೋ ಚಲನೆಗೆ ಅವಕಾಶ ಮಾಡಿಕೊಟ್ಟಿಲ್ಲ" ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಹೊರತಾಗಿಯೂ ಅಫ್ಘಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟಿನ ಸಂಬಂಧದ ಬಗ್ಗೆ ಅಜಯ್ ಸಹಾಯ್ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ- ಅಫ್ಘಾನಿಸ್ತಾನದ ಮುಂದಿನ ಸಂಬಂಧಗಳ ಬಗ್ಗೆ ಅನಿಶ್ಚಿತತೆ ಉಂಟಾಗಿದೆ.












Click it and Unblock the Notifications