PM Independence Day 2023 Speech: ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ, ಆರಂಭದಲ್ಲೇ ಮಣಿಪುರದ ಬಗ್ಗೆ ಮಾತು
ನವದೆಹಲಿ, ಆಗಸ್ಟ್ 15: 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ದೇಶದ ಜನತೆಯ ಪರವಾಗಿ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.
ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣದ ಬಳಿಕ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ 140ಕೋಟಿ ಜನತೆಗೆ ಸ್ವಾತಂತ್ರ್ಯದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಪ್ರಾಣ ತ್ಯಾಗ ಮಾಡಿದವರನ್ನು ಈ ಸಂದರ್ಭದಲ್ಲಿ ನೆನೆದರು.

"ಭಾರತದ ಮೇಲೆ ಹಲವಾರು ಬಾರಿ ಆಕ್ರಮಣಗಳು ನಡೆದಿವೆ. ಆದರೆ ಅದೆಲ್ಲವನ್ನು ಭಾರತ ಮೆಟ್ಟಿ ನಿಂತಿದೆ. ಸಾವಿರಾರು ವರ್ಷಗಳಿಂದಲೂ ಅದರ ಪ್ರಭಾವ ಬೀರುತ್ತಲೇ ಇದೆ. ಭಾರತದ ಪ್ರತೀ ಹಳ್ಳಿಯ ನಾರಿಯರು ಇದಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ಜೈಲು ಸೇರಿದ್ದಾರೆ" ಎಂದು ಪ್ರಧಾನಿ ಹೇಳಿದರು.
ಕಳೆದ ಕೆಲವು ದಿನಗಳಲ್ಲಿ ಮಣಿಪುರದಿಂದ ಶಾಂತಿಯ ಸುದ್ದಿಗಳು ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಲಿ ಶಾಂತಿ ನೆಲೆಸಲು ಒಟ್ಟಾಗಿ ಕೆಲಸ ಮಾಡುತ್ತಿದೆ. ದೇಶ ಮಣಿಪುರದ ಜೊತೆಗಿದೆ ಎಂದು ಮತ್ತೆ ಒತ್ತಿ ಹೇಳಲು ಬಯಸುತ್ತಿದ್ದೇನೆ ಎಂದು ಪ್ರಧಾನಿ ತಮ್ಮ ಭಾಷಣದ ಆರಂಭದಲ್ಲೇ ಹೇಳಿದ್ದಾರೆ.
"ನಾನು ಕಳೆದ 1000 ವರ್ಷಗಳ ಬಗ್ಗೆ ಮಾತನಾಡುತ್ತಿದ್ದೇನೆ. ದೇಶದ ಮುಂದೆ ಮತ್ತೊಮ್ಮೆ ಅವಕಾಶವಿದೆ, ಈ ಯುಗದಲ್ಲಿ ನಾವು ಏನು ಮಾಡುತ್ತೇವೆ, ನಾವು ತೆಗೆದುಕೊಳ್ಳುವ ಕ್ರಮಗಳು ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳು ಒಂದರ ನಂತರ ಒಂದರಂತೆ, ಮುಂಬರುವ 1000 ವರ್ಷಗಳಲ್ಲಿ ದೇಶದ ಸುವರ್ಣ ಇತಿಹಾಸವನ್ನು ಮೊಳಕೆಯೊಡೆಸುತ್ತವೆ' ಎಂದು ಪ್ರಧಾನಿ ಹೇಳಿದರು.
ಬುಲೆಟ್ ರೈಲು ಯೋಜನೆ ಚಾಲ್ತಿಯಲ್ಲಿದೆ, ಸೆಮಿ ಕಂಡಕ್ಟರ್ ಬಗ್ಗೆಯೂ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ದೇಶದಲ್ಲಿ ರೈಲು ಯೋಜನೆ ವಿಸ್ತರಿಸಲಾಗುತ್ತಿದೆ. ದಿವ್ಯಾಂಗ ಜನರ ಅಭಿವೃದ್ದಿಗೆ ಸರ್ಕಾರ ಕೆಲಸ ಮಾಡುತ್ತಿದೆ. ಅಸಮಾನ್ಯ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ ಎಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಹೇಳಿದರು.












Click it and Unblock the Notifications