ಎನ್ಡಿಎ 61ನೇ ಬ್ಯಾಚ್; ಭೂ, ವಾಯು, ನೌಕಾಪಡೆ ಮುಖ್ಯಸ್ಥರ ಜೊತೆ ಏನಿದು ಮ್ಯಾಚ್
ನವದೆಹಲಿ, ಏಪ್ರಿಲ್ 18: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ನೇಮಿಸಲಾಗಿದೆ. ಅದರೊಂದಿಗೆ ದೇಶದ ಭೂ ಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮುಖ್ಯಸ್ಥರು ಒಂದೇ ಬ್ಯಾಚ್ನಿಂದ ಬಂದವರಾಗಿದ್ದಾರೆ.
ಖಡಕ್ ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ಡಿಎ)ಯ 61ನೇ ಬ್ಯಾಚ್ನ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಏಪ್ರಿಲ್ 30ರಂದು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ
ದೇಶದಲ್ಲಿ ಈಗಾಗಲೇ ನೌಕಾ ಸೇನೆಯ ಮುಖ್ಯಸ್ಥರಾಗಿರುವ ಅಡ್ಮಿರಲ್ ಹರಿ ಕುಮಾರ್ ಹಾಗೂ ವಾಯು ಸೇನೆ ಮುಖ್ಯಸ್ಥ ಮಾರ್ಷಲ್ ವಿವೇಕ್ ರಾಮ್ ಚೌಧರಿ ಕೂಡ ಇದೇ ಎನ್ಡಿಎ 61ನೇ ಬ್ಯಾಚ್ನಿಂದ ಬಂದವರೇ ಆಗಿದ್ದಾರೆ. ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಎನ್ಡಿಎ ಲಿಮಾ ಸ್ಕ್ವಾಡೋರ್ನ್ ನಿಂದ ಬಂದಿದ್ದರೆ, ಉಳಿದ ಇಬ್ಬರು ಮುಖ್ಯಸ್ಥರು ಜೂಲಿಯಟ್ ಸ್ಕ್ವಾಡೋರ್ನ್ ನಿಂದ ಬಂದಿದ್ದಾರೆ.
ದೇಶದ ಮೂರು ಸೇನೆಗಳಿಗೆ ಒಂದೇ ಬ್ಯಾಚ್ನ ಮುಖ್ಯಸ್ಥರು:
ಭಾರತದ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗೆ ಒಂದೇ ಬ್ಯಾಚ್ನ ಅಧಿಕಾರಿಗಳನ್ನು ಮುಖ್ಯಸ್ಥರಾಗಿ ನೇಮಿಸಿರುವುದರ ಹಿಂದೆ ವಿಶೇಷ ಕಾರ್ಯತಂತ್ರವಿದೆ. ಒಂದು ಬ್ಯಾಚ್ನ ಅಧಿಕಾರಿಗಳ ನಡುವೆ ಪರಸ್ಪರ ಹೊಂದಾಣಿಕೆ ಹಾಗೂ ಆಲೋಚನೆ ವೈಖರಿ ಸಮಾನವಾಗಿರಲಿದೆ. ಇದರಿಂದ ಮೂರು ವಿಭಾಗಗಳಲ್ಲಿ ಸೇನೆಯನ್ನು ಮುನ್ನಡೆಸುವುದು ಎಂದಿಗಿಂತ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾಗಿರುತ್ತದೆ ಎಂದು ಹೇಳಲಾಗುತ್ತಿದೆ.
ಏ.30ರಂದು ಭಾರತೀಯ ಸೇನಾ ಜನರಲ್ ಎಂ ಎಂ ನರವಾನೆ ನಿವೃತ್ತಿ:
ಏಪ್ರಿಲ್ ತಿಂಗಳಾಂತ್ಯದ ವೇಳೆಗೆ ಭಾರತೀಯ ಸೇನಾ ಜನರಲ್ ಎಂ ಎಂ ನರವಾನೆ ನಿವೃತ್ತಿ ಹೊಂದಲಿದ್ದಾರೆ. ಅವರಿಂದ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 29ನೇ ಸೇನಾ ಮುಖ್ಯಸ್ಥರು ತಮ್ಮ 28 ತಿಂಗಳ ಅಧಿಕಾರಾವಧಿಯನ್ನು ಏಪ್ರಿಲ್ 30 ರಂದು ಪೂರ್ಣಗೊಳಿಸಲಿರುವ ಜನರಲ್ ಮನೋಜ್ ಮುಕುಂದ್ ನರವಾಣೆ ನಂತರ ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಚುಕ್ಕಾಣಿ ಹಿಡಿಯಲಿದ್ದಾರೆ.
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ವೃತ್ತಿ ಜೀವನ:
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆಯವರ 39 ವರ್ಷಗಳ ಸೇನಾ ವೃತ್ತಿಜೀವನದಲ್ಲಿ ಪಶ್ಚಿಮ ಭಾಗದ ಇಂಜಿನಿಯರ್ ಬ್ರಿಗೇಡ್, ಎಲ್ಒಸಿ ಉದ್ದಕ್ಕೂ ಪದಾತಿ ದಳ, ಲಡಾಖ್ ಸೆಕ್ಟರ್ನಲ್ಲಿ ಪರ್ವತ ವಿಭಾಗ ಮತ್ತು ಈಶಾನ್ಯದಲ್ಲಿ ಕಾರ್ಪ್ಸ್ಗೆ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಪೂರ್ವ ವಿಭಾಗದ ಕಮಾಂಡ್ನ ಅಧಿಕಾರ ವಹಿಸಿಕೊಳ್ಳುವ ಮೊದಲು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ನ ಕಮಾಂಡರ್-ಇನ್-ಚೀಫ್ ಆಗಿದ್ದರು.
ಪರಾಕ್ರಮ್ ಕಾರ್ಯಾಚರಣೆ ಮುಂದಾಳತ್ವ:
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಪಾಂಡೆ ಅವರನ್ನು ಡಿಸೆಂಬರ್ 1982ರಲ್ಲಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ಗೆ ನಿಯೋಜಿಸಲಾಗಿತ್ತು. ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಲ್ಲನ್ವಾಲಾ ಸೆಕ್ಟರ್ನಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಇಂಜಿನಿಯರ್ ರೆಜಿಮೆಂಟ್ಗೆ ಮುಂದಾಳತ್ವ ವಹಿಸಿದ್ದರು. 2001ರ ಸಂಸತ್ ದಾಳಿ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಸನ್ನಿವೇಶ ಸೃಷ್ಟಿಯಾಗಿತ್ತು. ಅಂದು ಪಶ್ಚಿಮ ಗಡಿಗೆ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸುವುದೇ ಪರಾಕ್ರಮ್ ಕಾರ್ಯಾಚರಣೆ ಆಗಿತ್ತು.